ದಾವಣಗೆರೆ ಚೆಕ್ಪೋಸ್ಟ್ನಲ್ಲಿ ಭರ್ಜರಿ ಕಾರ್ಯಾಚರಣೆ: 32 ಲಕ್ಷ ರೂಪಾಯಿ ವಶ
ದಾವಣಗೆರೆ, ಏಪ್ರಿಲ್ 5: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕುರುಡು ಕಾಂಚಾಣದ ಕುಣಿತ ಜೋರಾಗಿದ್ದು, ದಾಖಲೆ ಇಲ್ಲದೇ ಸಾಗಿಸುತ್ತಿದ್ದ 32 ಲಕ್ಷ ರೂಪಾಯಿಗೂ ಅಧಿಕ ನಗದು ವಶಪಡಿಸಿಕೊಂಡ ಘಟನೆ ನಗರದ ಬೇತೂರು ಚೆಕ್ಪೋಸ್ಟ್ನಲ್ಲಿ ನಡೆದಿದೆ.
ಏಪ್ರಿಲ್ 4 ರ ರಾತ್ರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ-107 ರ ಬೇತೂರು ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸಲಾಗುತಿತ್ತು. ಈ ವೇಳೆ ಕೆ.ಎ.-16-ಡಿ-3183 ಕಾರನ್ನು ಪರಿಶೀಲನೆ ಮಾಡಿದಾಗ ಸರಿಯಾದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ಮೊತ್ತ ರೂ.32,32,008 ಚುನಾವಣೆ ಅಧಿಕಾರಿಗಳು ವಶಪಡಿಸಿಕೊಂಡು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಚೆಕ್ಪೋಸ್ಟ್ನಲ್ಲಿ ಸೂಕ್ತ ತಪಾಸಣೆ ನಡೆಸಿ ಬಹುದೊಡ್ಡ ಮೊತ್ತ ವಶಪಡಿಸಿಕೊಂಡ ಸದರಿ ತಂಡಕ್ಕೆ ಚುನಾವಣಾ ಅಧಿಕಾರಿಗಳು-107 ಆದ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅಭಿನಂದಿಸಿದ್ದಾರೆ.
ಅಶ್ಲೀಲವಾಗಿ ವಿಡಿಯೋ ಮಾಡಿ 30 ಲಕ್ಷ ರೂ.ಗೆ ಬೇಡಿಕೆ: ನಾಲ್ವರು ಆರೋಪಿಗಳ ಸೆರೆ
ಮಹಿಳೆಯರೊಂದಿಗೆ ಅಶ್ಲೀಲವಾಗಿ ವಿಡಿಯೋ ಮಾಡಿ ಬೆದರಿಸಿ ಬಲವಂತವಾಗಿ ಹಣದ ಬೇಡಿಕೆ ಇಟ್ಟು ರೂ. 1,50,000 ಪಡೆದು ಮೋಸ ಮಾಡಿದ್ದ ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿಸಿ ಆರೋಪಿತರಿಂದ ಒಟ್ಟು 1,30,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.

ದೂರುದಾರನಿಗೆ ಆರೋಪಿತರು ಫೋನ್ ಮಾಡಿದ್ದು ಮಿಸ್ ಕಾಲ್ ಆಗಿದೆ. ನಂತರ ವಾಪಾಸ್ ಫೋನ್ ಮಾಡಿದಾಗ ಗಂಗಾ ಹೆಸರಿನ ಹಿರೇಮಳಲಿ ಗ್ರಾಮದವಳು ಅಂತಾ ಪರಿಚಯಿಸಿಕೊಂಡು ಪ್ರತಿನಿತ್ಯ ಫೋನ್ನಲ್ಲಿ ಮಾತನಾಡಿ ಹಣ ಪಡೆದಿದ್ದಾಳೆ. ಆ ಬಳಿಕ ಮಾರ್ಚ್ 26ರಂದು ದಾವಣಗೆರೆಗೆ ಬಂದಿದ್ದಾಗ ಗಂಗಾ ಎಂಬಾಕೆಯು ಹರೀಶ, ಚಂದ್ರು, ಮತ್ತೊಬ್ಬ ವ್ಯಕ್ತಿ, ಗಿಡ್ಡ ಗಂಗಮ್ಮ ಹಾಗೂ ಇನ್ನೊಬ್ಬ ಮಹಿಳೆ ಜೊತೆ ಸೇರಿಕೊಂಡು ಒಳಸಂಚು ಮಾಡಿ ತಮ್ಮ ಜೊತೆಗೆ ಊಟಕ್ಕೆ ಬರಬೇಕೆಂದು ಒತ್ತಾಯ ಮಾಡಿ ಸಿದ್ದವೀರರಪ್ಪ ಬಡಾವಣೆಯ ಮನೆಗೆ ಕರೆಯಿಸಿಕೊಂಡಿದ್ದಾಳೆ.
ಅಶ್ಲೀಲ ವಿಡಿಯೋ ಮಾಡಿ 30 ಲಕ್ಷ ರೂಪಾಯಿಗೆ ಬೇಡಿಕೆ
ಆ ಬಳಿಕ ಆರೋಪಿತರೆಲ್ಲರೂ ಸೇರಿಕೊಂಡು ಸಂತ್ರಸ್ತನಿಗೆ ಹೆದರಿಸಿ ಅಶ್ಲೀಲವಾಗಿ ವಿಡಿಯೋ ಮಾಡಿ ಬೆದರಿಸಿ ಬಲವಂತವಾಗಿ ರೂ. 30 ಲಕ್ಷಕ್ಕೆ ಬೇಡಿಕೆ ಇಟ್ಟು ರೂ. 1,50,000 ವಸೂಲಿ ಮಾಡಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದಲ್ಲಿ ಜೀವಸಹಿತ ಬಿಡುವುದಿಲ್ಲ ಎಂದು ಆರೋಪಿಗಳು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ಪಿ. ದೊಡ್ಡಮನಿ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ಮಾರ್ಗದರ್ಶನಲ್ಲಿ ಪಿಎಸ್ ಐ ಮೇಘರಾಜ್ ದೊಡ್ಡಮನಿ, ವಿದ್ಯಾನಗರ ಪಿಎಸ್ ಐ ರೇಣುಕಾ ಜಿ.ಎಂ. ಹಾಗೂ ವಿದ್ಯಾನಗರ ಠಾಣೆಯ ಸಿಬ್ಬಂದಿ ವಿಜಯ್, ಗೋಪಿನಾಥ ನಾಯ್ಕ, ಯೋಗೇಶ್ ನಾಯ್ಕ, ಭೋಜಪ್ಪ ಕಿಚಡಿ, ಆಶಾ ಮತ್ತು ಡಿ.ಸಿ.ಆರ್.ಬಿ ವಿಭಾಗದ ಆಂಜನೇಯ ಅವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಸೆರೆ ಹಿಡಿದಿದೆ.
ಮೇಲ್ಕಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ, ಸಿಬ್ಬಂದಿಯನ್ನು ಎಸ್ಪಿ ಸಿ. ಬಿ. ರಿಷ್ಯಂತ್, ಎಎಸ್ಪಿ ಆರ್.ಬಿ ಬಸರಗಿ ಅವರು ಶ್ಲಾಘಿಸಿದ್ದಾರೆ.












Click it and Unblock the Notifications