ಹೊನ್ನಾಳಿಯಲ್ಲಿ ಕಾಡಾನೆ ದಾಳಿ, ಮೂವರಿಗೆ ಗಂಭೀರ ಗಾಯ
Recommended Video

ದಾವಣಗೆರೆ, ಡಿಸೆಂಬರ್. 14 : ಶಿವಮೊಗ್ಗ-ದಾವಣಗೆರೆ ಗಡಿ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹೊನ್ನಾಳಿ ತಾಲೂಕಿನಲ್ಲಿ ಆನೆಗಳ ದಾಳಿಯಿಂದಾಗಿ ಇಂದು ಮೂವರು ಗಾಯಗೊಂಡಿದ್ದಾರೆ.
ಹೊನ್ನಾಳಿ ತಾಲೂಕಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಆನೆಗಳ ದಾಳಿಯಿಂದಾಗಿ ಮೂವರು ಗಾಯಗೊಂಡಿದ್ದಾರೆ. ಕಮ್ಮರಘಟ್ಟದಲ್ಲಿ ರುದ್ರೀಬಾಯಿ (45), ದೇವರ ಹೊನ್ನಾಳಿಯಲ್ಲಿ ಭರ್ಮಪ್ಪ (55), ಬೆನಕನಹಳ್ಳಿಯಲ್ಲಿ ನಾಗರಾಜ (45) ಗಾಯಗೊಂಡವರು.

ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದೇವರ ಹೊನ್ನಾಳಿಯ ಭರ್ಮಪ್ಪ ಬೆಳಗ್ಗೆ ಜಮೀನಿಗೆ ಹೋಗಿದ್ದರು. ಮುಂಜಾನೆ ಮಂಜು ಕವಿದಿದ್ದ ಕಾರಣ ಅವರಿಗೆ ಆನೆ ಕಂಡಿಲ್ಲ. ಭರ್ಮಪ್ಪ ಅವರನ್ನು ನೋಡಿದ ಆನೆ ದಂತದಿಂದ ತಿವಿದು, ಸೊಂಡಲಿನಿಂದ ಎತ್ತಿ ಬಿಸಾಡಿದೆ.

ಕಾಡಾನೆಗಳು ಶಿವಮೊಗ್ಗ-ದಾವಣೆಗೆರೆ ಗಡಿ ಭಾಗದಲ್ಲಿ ನಿರಂತರವಾಗಿ ಸಂಚರಿಸುತ್ತಿವೆ. ಹೊನ್ನಾಳಿ, ಶಿಕಾರಿಪುರ, ನ್ಯಾಮತಿ, ಶಿವಮೊಗ್ಗ ತಾಲೂಕಿನ ಗಡಿಭಾಗದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಕಣ್ಗಾವಲಿಟ್ಟಿದ್ದಾರೆ.
ಆನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಿಲ್ಲೆಯ ಗಡಿ ಭಾಗದ ಗ್ರಾಮಸ್ಥರು ಆನೆಗಳನ್ನು ನೋಡಿದ ಮೇಲೆ ಆತಂಕಗೊಂಡಿದ್ದಾರೆ.












Click it and Unblock the Notifications