ಧರಣಿ ಮೂಲಕ ಚಳ್ಳಕೆರೆಗೆ ವಿವಿ ಸಾಗರ ನೀರು ಸ್ಥಗಿತಗೊಳಿಸಿದ ಹಿರಿಯೂರು ಶಾಸಕಿ
ಚಿತ್ರದುರ್ಗ, ಏಪ್ರಿಲ್ 28: ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿಗೆ ನೀರು ಹರಿಸುವ ವಿಚಾರವಾಗಿ ಇಬ್ಬರು ಶಾಸಕರ ನಡುವೆ ತಿಕ್ಕಾಟ ನಡೆದಿದ್ದು, ಧರಣಿ ಕೂರುವ ಮೂಲಕ ಕೊನೆಗೂ ನೀರು ನಿಲ್ಲಿಸುವಲ್ಲಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಯಶಸ್ವಿಯಾಗಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಪ್ರಕ್ರಿಯೆಯಲ್ಲಿ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯದಿಂದ 0.25 ಟಿಎಂಸಿ ನೀರನ್ನು ವೇದಾವತಿ ನದಿಗೆ ಹರಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಕಳೆದ ಐದು ದಿನಗಳಿಂದ ನದಿಗೆ ನೀರು ಹರಿಸಲಾಗಿತ್ತು. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಆದರೆ ಜಲಾಶಯದಿಂದ ಹರಿಸಿದ ನೀರು ಚಳ್ಳಕೆರೆ ತಲುಪಲಿಲ್ಲ. ಅಲ್ಲಲ್ಲಿ ಕೆಲವು ಚೆಕ್ ಡ್ಯಾಂಗಳು ಮತ್ತು ನದಿಯಲ್ಲಿನ ಮರಳು ಗುಂಡಿಗಳಿಂದಾಗಿ ನೀರು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ವಿವಿ ಸಾಗರದಿಂದ ಇಂದಿಗೆ 0.25 ಟಿಎಂಸಿ ನೀರು ಹರಿಸಿ ಗೇಟ್ ಬಂದ್ ಮಾಡಲಾಗಿತ್ತು. ಬಂದ್ ಮಾಡಿರುವ ವಿಷಯ ತಿಳಿದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಬೆಂಗಳೂರಿಗೆ ದೌಡಾಯಿಸಿ ಅಲ್ಲಿಂದ ನೀರು ಬಿಡಿಸಿದ್ದಾರೆ. ಇತ್ತ ವಿಷಯ ತಿಳಿದ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ನೀರು ನಿಲ್ಲಿಸಲು ಮುಂದಾಗಿದ್ದಾರೆ.

ಹಲವು ರೈತ ಮುಖಂಡರೊಂದಿಗೆ ಜಲಾಶಯದ ಬಳಿ ಧರಣಿ ಕುಳಿತಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಶಾಸಕರೊಂದಿಗೆ ಚರ್ಚಿಸಿ ಇಂದು ಸಂಜೆ ಸುಮಾರು 6 ಗಂಟೆಗೆ ನೀರು ನಿಲ್ಲಿಸಿದ್ದಾರೆ.












Click it and Unblock the Notifications