ಲೋಕಸಭಾ ಚುನಾವಣೆಯಲ್ಲಿ ಎಚ್ಡಿಕೆಗೆ ತಕ್ಕಪಾಠ: ವಾಲ್ಮೀಕಿ ಜನಾಂಗ
Recommended Video

ಚಿತ್ರದುರ್ಗ, ಜುಲೈ 24: ವಾಲ್ಮೀಕಿ ನಾಯಕ ಸಮಾಜದ ಬೇಡಿಕೆಗಳಿಗೆ ಸಮ್ಮಿಶ್ರ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದರ ಜೊತೆಗೆ ಸರ್ಕಾರ ಬೀಳಿಸಲು ಚಿಂತನೆ ನಡಬೇಕಾಗುತ್ತದೆ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದ ದಿವ್ಯ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಬಳಿಕ ಮಾತನಾಡಿದರು. ಕೇಂದ್ರ ಸರ್ಕಾರದ ಮಾದರಿಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಳ ಮಾಡಬೇಕು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮಾಜಕ್ಕೆ ಇನ್ನೆರಡು ಸಚಿವ ಸ್ಥಾನ ನೀಡಬೇಕು. ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು. ಎಸ್ಸಿ-ಎಸ್ಟಿ ನೌಕರರಿಗೆ ಮುಂಬಡ್ತಿ ನೀಡುವಂತೆ ರಾಷ್ಟ್ರಪತಿಗಳು ಆದೇಶ ಮಾಡಿದ್ದರೂ ರಾಜ್ಯ ಸರ್ಕಾರ ಇದುವರೆಗೂ ಆ ಆದೇಶವನ್ನು ಪಾಲಿಸಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಸಿದ್ಧರಾಮಯ್ಯನವರು ಸಿಎಂ ಆಗಿದ್ದಾಗ ನೀಡಿದ್ದ ಭರವಸೆ
ಸಿದ್ಧರಾಮಯ್ಯನವರು ಸಿಎಂ ಆಗಿದ್ದಾಗ ಎಸ್ಸಿ-ಎಸ್ಟಿ ಜನಾಂಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಶೇ.24.1 ರಷ್ಟು ಆರ್ಥಿಕ ಸೌಲಭ್ಯ ಕಲ್ಪಿಸಿದ್ದರು. ಅದೇ ಮಾದರಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಶ್ರೀಗಳು ಆಗ್ರಹಿಸಿದರು.

ಗಂಡು ಮೆಟ್ಟಿದ ನಾಡಿನಿಂದ ನಮ್ಮ ಈ ಹೋರಾಟ
ಗಂಡು ಮೆಟ್ಟಿದ ನಾಡಿನಿಂದ ನಮ್ಮ ಈ ಹೋರಾಟ ಆರಂಭಿಸಿದ್ದೇವೆ. ನಮ್ಮ
ಹೋರಾಟ ಶಾಂತಿಯುತವಾಗಿರುತ್ತದೆ. ಸರ್ಕಾರ ಸ್ಪಂದಿಸಿದ್ದರೆ ಉಗ್ರ ಹೋರಾಟದ ಜೊತೆಗೆ ಪಾಠ ಕಲಿಸುವ ಜಾಗದಲ್ಲಿ ಪಾಠ ಕಲಿಸುತ್ತೇವೆ ಎಂದು ಶ್ರೀಗಳು ಖಾರವಾಗಿ ಹೇಳಿದರು.

ದೇಶದಲ್ಲಿ 9 ಕೋಟಿ ಜನಸಂಖ್ಯೆ ಹೊಂದಿರುವ ಜನಾಂಗ
ರಾಜ್ಯದಲ್ಲಿ 53 ಲಕ್ಷ, ದೇಶದಲ್ಲಿ 9 ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ಸಮಾಜವು ರಾಜ್ಯದಲ್ಲಿ ಉಡುಪಿ ಜಿಲ್ಲೆ ಹೊರತುಪಡಿಸಿದರೆ ಎಲ್ಲಾ ಜಿಲ್ಲೆಗಳಲ್ಲಿದೆ. ನಾವು ಮನಸ್ಸು ಮಾಡಿದರೆ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಸರಿಯಾದ ಪಾಠ ಕಲಿಸುವ ಸಾಮರ್ಥ್ಯ ಹೊಂದಿದ್ದೇವೆ. ಸ್ವಾತಂತ್ರ್ಯ ಬಂದು 72 ವರ್ಷ ಕಳೆದಿದ್ದರೂ ಬಹುತೇಕ ಸರ್ಕಾರಗಳು ನಮ್ಮನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿವೆ.

ಮೂಗಿಗೆ ತುಪ್ಪ ಹಚ್ಚುವ ಕೆಲಸ
ಸಮಾಜದ ಬೇಡಿಕೆ ಕೇಳಿದರೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಾರೆಂದು ಶ್ರೀಗಳು ಛೇಡಿಸಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಏಕೈಕ ಶಾಸಕ ಚಳ್ಳಕೆರೆಯ ರಘುಮೂರ್ತಿ ಅವರನ್ನು ಸಚಿವರನ್ನಾಗಿ ಮಾಡಲು ಸಂಸದ ಚಂದ್ರಪ್ಪ ಅವರು ಶ್ರಮಿಸದಿದ್ದರೆ ಅವರ ಸೋಲು ನಿಶ್ಚಿತ ಎಂದು ಶ್ರೀಗಳು ನೇರ ಸಂದೇಶ ನೀಡಿದರು.
ಸಮಾಜದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗುವ ಮನೋಭಾವನೆ ಬೆಳೆಸಿಕೊಳ್ಳದಿದ್ದರೆ ನಮಗೆ ಹಿನ್ನಡೆ ತಪ್ಪಿದಲ್ಲ. ಬೇರೆ ಸಮಾಜದವರು ನಮ್ಮನ್ನೂ ಎಸ್ಟಿಗೆ ಸೇರಿಸಿ ಎಂದು ಕೇಳುತ್ತಾರೆಯೇ ಹೊರತು, ನಮ್ಮ ಹೋರಾಟದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಈ ವಿಚಾರವನ್ನು ನಾವು
ಗಂಭೀರವಾಗಿ ಪರಿಗಣಿಸಬೇಕೆಂದರು.











Click it and Unblock the Notifications