ಪಠ್ಯ ಪುಸ್ತಕಗಳಲ್ಲಿ ರಾಜಕೀಯ ಸೇರಿಸಬೇಡಿ: ಸಲೀಂ ಅಹ್ಮದ್
ಚಿತ್ರದುರ್ಗ, ಮೇ 29: "ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರ ಅಭಿವೃದ್ಧಿ, ಬಡತನ, ಯುವಕರಿಗೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ಮಾಡಬೇಕು" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಸರ್ಕಾರವನ್ನು ಒತ್ತಾಯಿಸಿದರು.
ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಅವರು, "ಈಗಾಗಲೇ ಶಾಲಾ ಮಕ್ಕಳ ಪಠ್ಯಪುಸ್ತಕದ ಪರಿಷ್ಕರಣೆ ನಡೆಯುತ್ತಿದೆ. ಭಗತ್ ಸಿಂಗ್, ನಾರಾಯಣ ಗುರು, ಟಿಪ್ಪು ಸುಲ್ತಾನ್ ಇರಬಹುದು ಪಠ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಮಕ್ಕಳ ಪಠ್ಯಪುಸ್ತಕದಲ್ಲಿ ರಾಜಕೀಯ ವಿಷಯಗಳನ್ನು ಬೆರೆಸಬಾರದು" ಎಂದರು.
ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಹೈಕೋರ್ಟ್ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು" ಎಂದು ಹೇಳಿದರು.
ಲೂಟಿ ಸರ್ಕಾರ; "ರಾಜ್ಯದ ಆಡಳಿತದ ಚುಕ್ಕಾಣಿಯಲ್ಲಿರುವ ಬಿಜೆಪಿ ಸರ್ಕಾರ ಲೂಟಿ ಸರ್ಕಾರವಾಗಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಚುನಾವಣೆ ನಡೆದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸೋಲಿನ ಭಯದಿಂದ ಕೆಲವು ಸಂಘಟನೆಗಳ ಮೂಲಕ ಕೋಮು ಭಾವನೆ ಕೆರಳಿಸಲು ಪ್ರೇರಣೆ ನೀಡುತ್ತಿದೆ" ಎಂದು ಆರೋಪಿಸಿದರು.
"ಕೋಮು ಭಾವನೆ ಕೆರಳಿಸುವ ಪ್ರಯತ್ನಕ್ಕೆ ರಾಜ್ಯದ ಜನರು ಬೆಂಬಲ ನೀಡುವುದಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಮಾತಿನಂತೆ ನಾಡಿನಲ್ಲಿ ಕೋಮು ಸಾಮರಸ್ಯ ಕದಡಲು, ಯಾವುದೇ ಸಹಕಾರ ನೀಡುವುದಿಲ್ಲ" ಎಂದರು.
ಹೊರಟ್ಟಿ ಬಿಜೆಪಿ ಸೇರಿರುವುದು ದುರ್ದೈವ; "7 ಬಾರಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡು ಈ ಬಾರಿ ಸೋಲಿನ ಭಯದಿಂದ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶೇ 40 ಕಮೀಷನ್ ಸರ್ಕಾರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹೊರಟ್ಟಿ ಬಿಜೆಪಿ ಪಕ್ಷ ಯಾಕೆ ಸೇರಿಕೊಂಡರು?" ಎಂದು ಸಲೀಂ ಅಹ್ಮದ್ ಪ್ರಶ್ನಿಸಿದರು.
"ಅಧಿಕಾರ ಹಾಗೂ ಖುರ್ಚಿಯ ಆಸೆಯಿಂದ ಬಿಜೆಪಿಗೆ ಸೇರಿದ್ದಾರೆ. ಬೆಲೆ ಏರಿಕೆ, ದುರಾಡಳಿತ, ಭ್ರಷ್ಟಾಚಾರ ತುಂಬಿದ ಪಕ್ಷಕ್ಕೆ ಬಸವರಾಜ ಹೊರಟ್ಟಿ ಸೇರಿರುವುದು ದುರ್ದೈವ. ಹಾವೇರಿ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಗೆಲುವು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು.