ಐಟಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದ ಸೀಕ್ರೆಟ್ ಲಾಕರ್!
ಖ್ಯಾತ ನಟ ದೊಡ್ಡಣ್ಣ ಅವರ ಅಳಿಯನಾದ ವೀರೇಂದ್ರ ಹವಾಲಾ ದಂಧೆಯಿಂದ ಪೇರಿಸಿಟ್ಟಿರುವ ಹಣ, ಬಂಗಾರದ ಗಟ್ಟಿ, ಚಿನ್ನಾಭರಣವನ್ನು ಈ ರೀತಿ ಬಚ್ಚಿದ್ದಿರಬಹುದು ಎಂದು ಆದಾಯ ತೆರಿಗೆ ಅಧಿಕಾರಿಗಳು ಊಹಿಸಲೂ ಸಾಧ್ಯವಿಲ್ಲದಂತೆ ಆತ ಬಚ್ಚಿಟ್ಟಿದ್ದ.
ಚಳ್ಳಕೆರೆ, ಡಿಸೆಂಬರ್ 10 : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಊರಿನಲ್ಲಿ ಕೆಸಿ ವೀರೇಂದ್ರ ಎಂಬ ಲೇವಾದೇವಿದಾರನ ಮನೆಯ ಮೇಲೆ ದಾಳಿ ಮಾಡಿದಾಗ ಇಂಥದೊಂದು ಖತರ್ನಾಕ್ ಐಡಿಯಾ ಈ ಕುಳ ಮಾಡಿರುತ್ತಾನೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಎಣಿಸಿರಲಿಲ್ಲ.
ಕನ್ನಡ ಚಿತ್ರರಂಗದ ಖ್ಯಾತ ನಟ ದೊಡ್ಡಣ್ಣ ಅವರ ಅಳಿಯನಾದ ವೀರೇಂದ್ರ ಹವಾಲಾ ದಂಧೆಯಿಂದ ಪೇರಿಸಿಟ್ಟಿರುವ ಹಣ, ಬಂಗಾರದ ಗಟ್ಟಿ, ಚಿನ್ನಾಭರಣವನ್ನು ಈ ರೀತಿ ಬಚ್ಚಿದ್ದಿರಬಹುದು ಎಂದು ಆದಾಯ ತೆರಿಗೆ ಅಧಿಕಾರಿಗಳು ಊಹಿಸಲೂ ಸಾಧ್ಯವಿಲ್ಲದಂತೆ ಆತ ಬಚ್ಚಲುಮನೆಯ ಗೋಡೆಯೊಳಗೆ ಬಚ್ಚಿಟ್ಟಿದ್ದ. [ಐಟಿ ದಾಳಿ: ಇಬ್ಬರು ಭ್ರಷ್ಟ ಅಧಿಕಾರಿಗಳು ಅಮಾನತು]
ಹಳೆ 500 ಮತ್ತು 1000 ರುಪಾಯಿಗಳ ಅಪನಗದೀಕರಣ ಯಜ್ಞ ಮಾಡಿದ ಮೇಲೆ 'ನಾನು ನಿಮ್ಮ ಹಿಂದಿದ್ದೇನೆ, ಮುಂದುವರೆಯಿರಿ' ಎಂದು ಆದಾಯ ತೆರಿಗೆ ಅಧಿಕಾರಿಗಳಿಗೆ ನರೇಂದ್ರ ಮೋದಿ ಅವರು ಮುಕ್ತಹಸ್ತವನ್ನು ನೀಡಿದ ಮೇಲೆ ದೇಶಾದ್ಯಂತ, ಅದರಲ್ಲೂ ಕರ್ನಾಟಕದಲ್ಲಿ ಭರ್ಜರಿ ದಾಳಿಗಳು ನಡೆಯುತ್ತಿವೆ. [ಭರವಸೆ ಕೊಡ್ತೀನಿ ಒಬ್ರನ್ನೂ ಬಿಡಲ್ಲ : ಭ್ರಷ್ಟರಿಗೆ ಮೋದಿ ಎಚ್ಚರಿಕೆ]
ಚಿಕ್ಕರಾಯಪ್ಪನನ್ನೂ ಮೀರಿಸುವ 'ದೊಡ್ಡ'ರಾಯಪ್ಪ
ಕೆಲ ದಿನಗಳ ಹಿಂದೆ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಎಂಬ ಕಾಳಧನಿಕರ ಮೇಲೆ ಐಟಿ ಅಧಿಕಾರಿಗಳು ಮುಗಿಬಿದ್ದು ಕೋಟ್ಯಂತರ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈಗ ಚಳ್ಳಕೆರೆಯಲ್ಲಿ ನಡೆದಿರುವ ದಾಳಿ ಅವರಿಬ್ಬರನ್ನೂ ಮೀರಿಸುವಂತಿದೆ. [ಬೆಂಗಳೂರು: ಇಬ್ಬರ ಬಳಿ 4 ಕೋಟಿ ರು ಹೊಸ ನೋಟು ಪತ್ತೆ]
ಬೇಸ್ತುಬೀಳಿಸುವಂಥ ಸೀಕ್ರೆಟ್ ಲಾಕರ್!
ಅದು ಎಂಥ ಚತುರಮತಿಯನ್ನೂ ಬೇಸ್ತುಬೀಳಿಸುವಂಥ ಸೀಕ್ರೆಟ್ ಲಾಕರ್! ಅದರಲ್ಲಿ ಸಿಕ್ಕಿಬಿದ್ದಿದ್ದು 28 ಕೆಜಿ ಚಿನ್ನದ ಗಟ್ಟಿ, 4 ಕೆಜಿ ಚಿನ್ನಾಭರಣ, 5.7 ಕೋಟಿ ರು. ಹೊಸ 2000 ನೋಟುಗಳು, 90 ಲಕ್ಷ ಹಳೆಯ 100 ಮತ್ತು 20 ರುಪಾಯಿ ನೋಟುಗಳು. ಒಟ್ಟಾರೆ ಮೊತ್ತ ಎಷ್ಟಿರಬಹುದೆಂದು ಲೆಕ್ಕಹಾಕಲು ಐಟಿ ಅಧಿಕಾರಿಗಳಿಗೆ ಸ್ವಲ್ಪ ಸಮಯ ಬೇಕು.
ಕಿಟಕಿ ಬದಿಯಲ್ಲಿ ಸಣ್ಣದೊಂದು ತೂತು
ಬಾತ್ ರೂಂ ಕಿಟಕಿ ಬದಿಯಲ್ಲಿ ಸಣ್ಣದೊಂದು ತೂತು. ಅದರಲ್ಲಿ ಸ್ಕ್ರೂಡ್ರೈವರ್ ತೂರಿಸಿ, ಪಕ್ಕಾ ಸಿರಾಮಿಕ್ ಟೈಲ್ಸ್ ಅಂಟಿಸಿದಂಥ ಗೋಡೆಯ ಬಲಬದಿಯ ಟೈಲ್ನ ಬಲತುದಿ ಮುಷ್ಠಿಯಿಂದ ತಟ್ಟಿದಾಗ 'ಖುಲ್ ಜಾ ಸಿಮ್ ಸಿಮ್'! ಒಳಗಡೆ ಬೆಚ್ಚಿಬೀಳಿಸುವಂಥ ಭಂಡಾರ!
ಸಾಕಷ್ಟು ಶೇಕರಿಸಿಡಬಹುದಾದ ರಹಸ್ಯ ಕೋಣೆ
ತಟ್ಟಿದ ಟೈಲ್ ತೆರೆಯುತ್ತಿದ್ದಂತೆ ಒಳಗಡೆ ಕಬ್ಬಿಣದಿಂದ ತಯಾರಿಸಿದ ಭರ್ಜರಿ ಖಜಾನೆ. ಮುಂಭಾಗದಲ್ಲಿ ಮಾತ್ರವಲ್ಲ, ಎಡಬದಿಯಲ್ಲೂ ಕಿಟಕಿಯವರೆಗೆ ರಹಸ್ಯವಾಗಿ ಸಾಕಷ್ಟು ಹಣ, ಚಿನ್ನವನ್ನು ಶೇಖರಿಸಿಟ್ಟುಕೊಳ್ಳಬಹುದಾದ ಪುಟ್ಟ ಕೋಣೆ. ಇದಕ್ಕಾಗಿ ಈ ಮಾಲಿಕನಿಗಲ್ಲ, ಇದನ್ನು ತಯಾರಿಸಿಕೊಟ್ಟವನಿಗೆ ಸಲಾಂ ಹೊಡೆಯಬೇಕು.
ಹುಬ್ಬಳ್ಳಿಯಲ್ಲೂ ಭರ್ಜರಿ ದಾಳಿ
ಚಿನ್ನದ ಗಟ್ಟಿ, ಚಿನ್ನಾಭರಣ ಮತ್ತು ಅಗಾಧ ಪ್ರಮಾಣದ ನೋಟುಗಳ ಜೊತೆಗೆ ಆತನಿಂದ ಅನೇಕ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲೂ ಹವಾಲಾ ದಂಧೆಕೋರನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ನಗದು, ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.