ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ಮುರುಘಾ ಮಠದಿಂದ ವಿದ್ಯಾರ್ಥಿನಿಯರ ಸ್ಥಳಾಂತರಕ್ಕೆ ಚಿಂತನೆ
ಚಿತ್ರದುರ್ಗ, ಸೆಪ್ಟೆಂಬರ್ 3 : ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದ ಮೇಲೆ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಬಂಧನವಾಗಿದ್ದು, ಪ್ರಸ್ತುತ ಅವರು ಪೋಲಿಸರ ವಶದಲ್ಲಿದ್ದಾರೆ. ಇತ್ತ ಮುರುಘಾ ಮಠವನ್ನು ನಂಬಿದ್ದ ಹಾಸ್ಟೆಲ್ ವಿದ್ಯಾರ್ಥಿನಿಯರ ಭವಿಷ್ಯದ ಬಗ್ಗೆ ಭೀತಿ ಉಂಟಾಗಿದೆ..
ಮುರುಘಾ ಶರಣರು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನಲೆ ಮಠದ ವಸತಿನಿಲಯದಲ್ಲಿರುವ ವಿದ್ಯಾರ್ಥಿನಿಯರನ್ನು ಬೇರೆಡೆಗೆ ಶಿಫ್ಟ್ ಮಾಡುವ ಕುರಿತು ಮಕ್ಕಳ ಹಕ್ಕು ಆಯೋಗ ಚಿಂತಿಸುತ್ತಿದೆ. ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ: ಹೈಕೋರ್ಟ್ನಿಂದ ಜಾಮೀನು ರಹಿತ ವಾರಂಟ್
125 ವಿದ್ಯಾರ್ಥಿನಿಯರು ಮಠದ ಹಾಸ್ಟೆಲ್ ನಲ್ಲಿ ಇದ್ದರು. ಅವರ ಪೈಕಿ ಸುಮಾರು ಅರ್ಧಕ್ಕರ್ಧ ವಿದ್ಯಾರ್ಥಿನಿಯರು ಹಬ್ಬಕ್ಕೆಂದು ಊರಿಗೆ ಹೋಗಿದ್ದು, ಈ ಪ್ರಕರಣದ ಹಿನ್ನಲೆ ವಾಪಸ್ಸಾಗಿಲ್ಲ. ಹೀಗಾಗಿ ಅವರು ಬಂದ ಬಳಿಕ ಎಲ್ಲಾ ವಿದ್ಯಾರ್ಥಿನಿಯರನ್ನು ಆಯಾಯಾ ಜಿಲ್ಲೆಯ ಮೊರಾರ್ಜಿ ದೇಸಾಯಿ ಹಾಸ್ಟೆಲ್ ಗಳಿಗೆ ಶಿಫ್ಟ್ ಮಾಡಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ.
ಮಠದಲ್ಲಿದ್ದ ಮಗಳು ಕಾಣ್ತಿಲ್ಲ, ಅಂಧ ವ್ಯಕ್ತಿಯ ರೋಧನ
ಇನ್ನು ಮುರುಘಾ ಮಠದ ಹಾಸ್ಟೆಲ್ನಲ್ಲಿ ತಂಗಿದ್ದ ನನ್ನ ಮಗಳು ಕಳೆದ ಆರು ತಿಂಗಳಿಂದ ಕಾಣಿಸುತ್ತಿಲ್ಲ. ಮಗಳೇ ಸಿಗದೇ ಇದ್ದರೆ ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ಮಾಡುತ್ತೇನೆ ಎಂದು ಅಂಧ ವ್ಯಕ್ತಿಯೊಬ್ಬರು ಆರೋಪಿಸಿರುವುದು ಬೆಳಕಿಗೆ ಬಂದಿದೆ.
ಶುಕ್ರವಾರ ಮಠದ ಆವರಣಲ್ಲಿ ಕಾಣಿಸಿಕೊಂಡ ವ್ಯಕ್ತಿ, ಪೊಲೀಸರು ಹಾಗೂ ಮಠದ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
" ನನ್ನ ಮಗಳು ಮಠದಲ್ಲಿ 4ನೇ ತರಗತಿ ಓದುತ್ತಿದ್ದಳು. ಅವಳನ್ನು ಹಲವು ತಿಂಗಳಿಂದ ನೋಡಲು ಸಾಧ್ಯವಾಗಿಲ್ಲ. ಈಗ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆಯಂತೆ. ಎಲ್ಲ ಹಾಸ್ಟೆಲ್ ಪರಿಶೀಲಿಸಿದರೂ ಮಗಳು ಪತ್ತೆಯಾಗಿಲ್ಲ" ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ.