ಮುರುಘಾ ಶ್ರೀಗಳ ಅರೆಸ್ಟ್ : ಚಿತ್ರದುರ್ಗದಲ್ಲಿ ಹೈಅಲರ್ಟ್
ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾದ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ದೇಶದಲ್ಲೇ ಭಾರಿ ಸಂಚಲನ ಮೂಡಿಸಿದ ಪ್ರಕರಣ ಇದಾಗಿದೆ. ಕೇಸ್ ದಾಖಲಾಗಿ ಏಳು ದಿನಗಳ ನಂತರ ಶ್ರೀಗಳನ್ನು ಬಂಧಿಸಲಾಗಿದೆ. ಬಂಧನಕ್ಕೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಪೊಲೀಸರು ಶ್ರೀಗಳನ್ನು ಇಂದು ಬಂಧಿಸಿದ್ದಾರೆ.
ಇದರ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಖಾಕಿ ಕೋಟೆ ನಿರ್ಮಾಣ ಮಾಡಲಾಗಿದೆ. ಮಠದ ಸುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಹೊರ ರಾಜ್ಯಗಳಿಂದಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಮಠದ ಸುತ್ತ ಬ್ಯಾರಿಕೇಡ್ಗಳನ್ನೂ ಕೂಡ ಹಾಕಲಾಗಿದೆ. ಶ್ರೀಗಳನ್ನು ವೈದ್ಯಕೀಯ ತಪಾಸಣೆಗಾಗಲಿ ಅಥವಾ ಕೋರ್ಟ್ಗೆ ಹಾಜರುಪಡಿಸಲಾಗಿಲ್ಲ. ಬದಲಿಗೆ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
Breaking: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಬಂಧನ
ಸ್ವಾಮೀಜಿಯವರು ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆಯ ಮೂಲಕ ದೂರು ನೀಡಿದ್ದರು. ಒಡನಾಡಿ ಸಂಸ್ಥೆಯ ನೆರವು ಪಡೆದು ಬಾಲಕಿಯರು ಆಗಸ್ಟ್ 26ರಂದು ಮೈಸೂರಿನಲ್ಲಿ ಕೇಸ್ ದಾಖಲು ಮಾಡುತ್ತಾರೆ. ನಂತರ ಈ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾಯಿಸಲಾಯಿತು. ಶ್ರೀಗಳ ಬಂಧನಕ್ಕೆ ಒತ್ತಾಯಿಸಿ ಹಲವು ಪ್ರತಿಭಟನೆ ಹಾಗೂ ಒತ್ತಡದಿಂದಾಗಿ ಪೊಲೀಸರು ಇಂದು ಶ್ರೀಗಳನ್ನು ಬಂಧಿಸಿದ್ದಾರೆ. ಸಿಪಿಐ ಬಾಲಚಂದ್ರ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಡಾ. ಶಿವಮೂರ್ತಿ ಮುರುಘಾ ಶರಣರು ಧಾರ್ಮಿಕ ಮುಖಂಡರಾದರೂ ವೈಚಾರಿಕ ಚಿಂತನೆಗೆ ಹೆಸರುವಾಸಿ. ಜಾತಿ ವ್ಯವಸ್ಥೆ ವಿರುದ್ಧ ಕೆಲಸ ಮಾಡಿದ್ದಾರೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಟ್ಟವರು. ಸಮಾಜವನ್ನು ಅನಿಷ್ಠವಾಗಿ ಕಾಡುತ್ತಿರುವ ಜಾತಿ ವ್ಯವಸ್ಥೆ, ಮೂಢನಂಬಿಕೆ ಇತ್ಯಾದಿಯನ್ನು ಅವರು ಬಹಿರಂಗವಾಗಿ ಟೀಕಿಸುತ್ತಿದ್ದರು. ತಮ್ಮ ಮಠದಲ್ಲಿ ಸರ್ವಜನಾಂಗಕ್ಕೂ ಅವರು ಸಹಾಯ ಮಾಡುತ್ತಿದ್ದರು. ಜಾತಿಭೇದ ಇಲ್ಲದೇ ಅನಾಥ ಮಕ್ಕಳಿಗೆ ಮಠ ಸಹಾಯ ಮಾಡಿದೆ. ಮುರುಘಾಶರಣರು ಅನೇಕ ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ್ದಾರೆ. ವಿಧವಾ ಮರುವಿವಾಹಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಹೀಗಾಗಿ ಮುರುಘಾ ಶ್ರೀಗಳಿಗೆ ದೇಶವಿದೇಶದಲ್ಲೂ ಭಕ್ತರಿದ್ದಾರೆ. ಅವರನ್ನು ದೇವರಂತೆ ಪೂಜಿಸುತ್ತಾರೆ.
ಹೀಗಿರುವಾಗ ಅವರ ವಿರುದ್ಧ ಪ್ರಕರಣ ದಾಖಲಾದಾಗಲೇ ಶ್ರೀಗಳ ಪರವಾಗಿ ಪ್ರತಿಭಟನೆ ನಡೆಸಿದ್ದರು. ಇದನ್ನು ಶ್ರೀಗಳ ವಿರುದ್ಧ ಮಾಡಿರುವ ಸಂಚು ಎಂದು ದೂರಿದ್ದರು. ಹೀಗಾಗಿ ಇಂದು ಅವರನ್ನು ಬಂಧಿಸಿರುವುದು ನಾಳೆ ದೊಡ್ಡ ಮಟ್ಟಿಗೆ ಜನ ವಿರೋಧ ವ್ಯಕ್ತಪಡಿಸಬಹುದು ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.