ಸ್ವಪಕ್ಷದ ತೀರ್ಮಾನಕ್ಕೆ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಸಮಾಧಾನ
ಚಿತ್ರದುರ್ಗ, ನವೆಂಬರ್ 18: ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಚಿತ್ರದುರ್ಗದ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಆರು ಬಾರಿ ಶಾಸಕನಾಗಿದ್ದೇನೆ. ನನ್ನಂತೆ ಹಲವಾರು ಹಿರಿಯ ಶಾಸಕರಿದ್ದಾರೆ, ಅವರನ್ನು ಕಡೆಗಣಿಸಲಾಗಿದೆ ಎಂದು ಸಚಿವ ಸ್ಥಾನಕ್ಕಾಗಿ ಆಗ್ರಹಿಸಿದರು. ಪ್ರತಿ ಬಾರಿಯೂ ಹೊರಗಿನ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗುತ್ತಿದ್ದಾರೆ. ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಬೇರೆ ಜಿಲ್ಲೆಯವರು ಉಸ್ತುವಾರಿ ವಹಿಸಿಕೊಂಡರೆ ಅಭಿವೃದ್ಧಿ ಕೆಲಸ ಆಗುವುದಿಲ್ಲ. ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂದು ಪರೋಕ್ಷವಾಗಿ ಸಚಿವ ಶ್ರೀರಾಮುಲು ಅವರಿಗೆ ಟಾಂಗ್ ನೀಡಿದರು.
ನಿಗಮ -ಮಂಡಳಿ ನೇಮಕದ ಕುರಿತು ಮಾತನಾಡಿದ ಅವರು, "ಈಗಾಗಲೇ ಶೇ 60ರಷ್ಟು ಜನರಿಗೆ ನಿಗಮ ಮಂಡಳಿ ಮಾಡಲಾಗಿದೆ. ಇನ್ನು ಉಳಿದ ಜನ ಯಾವ ಪಾಪ ಮಾಡಿದ್ದಾರೆ?. ಹೀಗೆ ಜಾತಿಗೊಂದು ನಿಗಮ ಮಂಡಳಿ ಮಾಡ್ತಾ ಹೋದರೆ ಎಲ್ಲರೂ ಕೇಳುವುದು ಸಹಜ" ಎಂದರು.

ಈಗಾಗಲೇ ಒಕ್ಕಲಿಗ ಸಮುದಾಯ ಮತ್ತು ಇತರೆ ಸಮುದಾಯದವರು ನಮಗೂ ನಿಗಮ ಮಂಡಳಿ ಮಾಡಿ ಅಂತ ಕೇಳಿದ್ದಾರೆ. ಬೇರೆಯವರಿಗೆ ಕೊಟ್ಟ ಮೇಲೆ ಉಳಿದವರಿಗೆ ಯಾಕೆ ಅನ್ಯಾಯ? ಎಂದು ಪ್ರಶ್ನಿಸಿದರು. ನೀವು ಮಾಡುತ್ತಿರುವುದು ಎಷ್ಟು ಸಮಾಂಜಸವೋ ಅರ್ಥ ಆಗುತ್ತಿಲ್ಲ. ಮುಂದೆ ಏನಾಗುತ್ತದೋ ಆ ದೇವರೇ ಕಾಪಾಡಬೇಕು ಎಂದು ಸ್ವಪಕ್ಷದ ತೀರ್ಮಾನಕ್ಕೆ ಜಿಲ್ಲೆಯ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications