"ಬಾಂಗ್ಲಾ, ಪಾಕಿಸ್ತಾನದಿಂದ ಬಂದವರು ಹೆದರಬೇಕು, ಇಲ್ಲಿರುವವರು ಯಾಕೆ?'
ಚಿತ್ರದುರ್ಗ, ಫೆಬ್ರವರಿ 16: ರೇಷನ್ ಕಾರ್ಡ್, ಮತದಾನ ಗುರುತಿನ ಚೀಟಿಗೆ ಎಲ್ಲಾ ದಾಖಲೆ ನೀಡುತ್ತೇವೆ. ಶಾಲಾ ದಾಖಲೆಗೆ ಜನ್ಮದಿನದ ಸರ್ಟಿಫಿಕೇಟ್ ನೀಡುತ್ತೇವೆ ಆದರೆ ಎನ್ಆರ್ಸಿ, ಸಿಎಎ ಗೆ ಮಾತ್ರ ವಿರೋಧಿಸುತ್ತೇವೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಚಿತ್ರದುರ್ಗದ ಕಬೀರಾನಂದ ಮಠಕ್ಕೆ ಭೇಟಿ ಬಳಿಕ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ""ಕೆಲವರು ತಂದೆಯೇ ಗೊತ್ತಿಲ್ಲ ಎಂದು ಅವರ ಅಮ್ಮನನ್ನು ಅನುಮಾನಿಸುತ್ತಾರೆ. ನಮ್ಮ ತಂದೆಯೇ ಗೊತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ
ಅಪ್ಪ ಗೊತ್ತಿಲ್ಲ ಎಂದರೆ ಏನು ಅರ್ಥ?'' ಎಂದು ವಾಗ್ದಾಳಿ ನಡೆಸಿದರು.
ತಾವು ಏನು ಮಾತನಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ತಾಯಿಯನ್ನು ಅಪಮಾನ ಮಾಡುತ್ತಾರೆ. ಪಾಕಿಸ್ತಾನ, ಬಾಂಗ್ಲಾದಿಂದ ಬಂದಿದ್ದರೆ ಅವರು ಭಯ ಬೀಳಬೇಕು. ಇಲ್ಲಿ ಹುಟ್ಟಿದವರು ಯಾಕೆ ಸಿಎಎ- ಎನ್ಆರ್ಸಿಗೆ ಭಯ ಬೀಳಬೇಕು? ಎಂದು ಪ್ರಶ್ನಿಸಿದರು.

ಸಿಎಎ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲು ಕೆಲವರು ಷಡ್ಯಂತ್ರಗಳನ್ನು ಹಬ್ಬಿಸುತ್ತಿದ್ದಾರೆ, ಅದರಲ್ಲಿ ಕೆಲವರು ವಿಫಲವಾಗಿದ್ದಾರೆ. ಮೋದಿ ಸರ್ಕಾರ ಮೀಸಲಾತಿ ಕಿತ್ತುಕೊಳ್ಳುತ್ತದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ, ಆದರೆ ಮೋದಿ ಸರ್ಕಾರ ಮೀಸಲಾತಿ ಪರವಾಗಿ ಇದೆ ಎಂದರು.
ಎಲ್ಲಿಯವರೆಗೂ ಅಸ್ಪೃಶ್ಯತೆ ಇರುತ್ತೋ, ಅಲ್ಲಿಯವರೆಗೂ ಮೀಸಲಾತಿ ಇರುತ್ತದೆ. ಅಸಹಾಯಕರಿಗೆ, ತುಳಿತಕ್ಕೆ, ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಬೇಕು ಎಂದು ಸಿ.ಟಿ.ರವಿ ತಿಳಿಸಿದರು.
NRC ಅಸ್ಸಾಂ ಹೊರತು ಪಡಿಸಿ ಬೇರೆ ರಾಜ್ಯದಲ್ಲಿ ಜಾರಿಗೆ ಬಂದಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಅಸ್ಸಾಂನಲ್ಲಿ ಮಾತ್ರ ಜಾರಿಗೆ ತರಲಾಗಿದೆ ಎಂದರಲ್ಲದೇ, ಸುಪ್ರೀಂ ಕೋರ್ಟ್ ನಲ್ಲಿ ಮೊದಲು NRC ಜಾರಿ ಮಾಡುತ್ತೇವೆ ಎಂದು ಅರ್ಜಿ ಸಲ್ಲಿಸಿದ್ದು ಕಾಂಗ್ರೆಸ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ತಿರುಗೇಟು ನೀಡಿದರು.
ಇದಕ್ಕೆ ತದ್ವಿರುದ್ಧವಾಗಿ ಮಾತನಾಡುವವರಿಗೆ ಎರಡು ನಾಲಗೆ ಎಂದು ಹೇಳಬೇಕೋ? ಅಥವಾ ಕಾಲಿನ ಕೆಳಗಿರುವುದು ನಾಲಿಗೆಯಲ್ಲಿ ಇದೆ ಎಂದು ಹೇಳಬೇಕೋ? ಮಾಜಿ ಸಂಸದ ಉಗ್ರಪ್ಪನವರ ಮಾತಿಗೆ ಸಮಾಜ ಯಾವ ರೀತಿ ಮನ್ನಣೆ ನೀಡುತ್ತದೆ ಅಂತ ಗೊತ್ತಿದೆ. ಬಫೂನ್ ರೀತಿಯ ಹೇಳಿಕೆ ನೀಡುವ ಉಗ್ರಪ್ಪನವರ ಮಾತಿಗೆ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದು ಸಿ.ಟಿ.ರವಿ ಖಾರವಾಗಿ ಪ್ರತಿಕ್ರಿಯೆ ನೀಡಿದರು.












Click it and Unblock the Notifications