ಮಲ್ಲಿಕಾರ್ಜುನ ಖರ್ಗೆ ಆರಿದ ದೀಪ, ಕತ್ತಲಿನಲ್ಲಿದ್ದಾರೆ ಎಂದ ಕಟೀಲ್
ಚಿತ್ರದುರ್ಗ, ಫೆಬ್ರವರಿ 09: "ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರಿದ ದೀಪ, ಕತ್ತಲಿನಲ್ಲಿದ್ದಾರೆ" ಎಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮೋದಿ ಜೀರೋ ಕ್ಯಾಂಡಲ್ ಬಲ್ಬ್ ಎಂಬ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿ "ಪ್ರಧಾನಿ ಮೋದಿಯವರು 1000 ವೋಲ್ಟ್ ನ ಹಲೋಜಿನ್ ಲೈಟ್ ಇದ್ದ ಹಾಗೆ. ಅವರು ಇಡೀ ಜಗತ್ತಿಗೆ ಬೆಳಕು ಕೊಡುತ್ತಿದ್ದಾರೆ. ಕಾಂಗ್ರೆಸ್ ನವರು ಕನಿಷ್ಠ ರಾಜ್ಯಸಭೆಗೂ ಕಳುಹಿಸಲಿಲ್ಲ. ಆ ದುಖಃದಲ್ಲಿ ಮೋದಿ ಬಗ್ಗೆ ಹಾಗೆ ಹೇಳಿದ್ದಾರೆ" ಎಂದರು.
"ದೇಶದಲ್ಲಿ ಆಡಳಿತ ಉಳಿಸಿಕೊಳ್ಳಲು ಬ್ರಿಟಿಷರು ಹಿಂದೂ ಮುಸ್ಲಿಮರ ನಡುವೆ ಬೇಧ ಭಾವ ತಂದಿಟ್ಟರು. ಅದನ್ನು ಕಾಂಗ್ರೆಸ್ ನವರು ಮುಂದುವರೆಸಿಕೊಂಡು ಬಂದಿದ್ದಾರೆ. ಅಧಿಕಾರಕ್ಕಾಗಿ ಪಾಕಿಸ್ತಾನ ಭಾರತವನ್ನು ಇಬ್ಭಾಗ ಮಾಡಿತು ಕಾಂಗ್ರೆಸ್. ಕಾಂಗ್ರೆಸ್ ನಿಂದಲೇ ಹೋಗಿರುವ ಮಹಮ್ಮದ್ ಆಲಿ ಜಿನ್ನಾ ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಿದರು. ನಮ್ಮ ದೇಶವನ್ನು ಜಾತ್ಯತೀತ ರಾಷ್ಟ್ರ ಎಂದು ಘೋಷಣೆ ಮಾಡಿದ ನೆಹರು ಅಲ್ಪಸಂಖ್ಯಾತ ಬಹುಸಂಖ್ಯಾತ ಎಂದು ವರ್ಗೀಕರಣ ಮಾಡಿದರು" ಎಂದು ದೂರಿದರು.

ಸಿಎಂ ಹೈಕಮಾಂಡ್ ಕಂಟ್ರೋಲ್ ನಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ನಳೀನ್ ಕುಮಾರ್, "ನಮಗೆ ಸಿದ್ದರಾಮಯ್ಯ ಅವರನ್ನು ನೋಡಿದ್ರೆ ಅಯ್ಯೊ ಅನ್ನಿಸುತ್ತದೆ. ಅವರ ಪಾರ್ಟಿ ಈ ಸ್ಥಿತಿಗೆ ಬರಬಾರದಾಗಿತ್ತು. ಅವರ ಪಾರ್ಟಿಗೆ ರಾಜ್ಯಾಧ್ಯಕ್ಷರಿಲ್ಲದೆ ಆರು ತಿಂಗಳಾಯ್ತು. ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಆರು ತಿಂಗಳಾಯ್ತು. ಕಾಂಗ್ರೆಸ್ ನಲ್ಲಿ ಅವರ ಸ್ಥಿತಿಯನ್ನು ಹೇಳಿಕೊಳ್ಳಲಾಗದೆ ಸಿಎಂ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ನವರು ರಾಜ್ಯಾಧ್ಯಕ್ಷರನ್ನು ಮಾಡಿ ಮಾತನಾಡಲಿ, ಅದು ಬಿಟ್ಟು ನಮ್ಮ ಪಕ್ಷದ ಬಗ್ಗೆ ಅವರಿಗೆ ಚಿಂತೆ ಯಾಕೆ" ಎಂದು ಪ್ರಶ್ನಿಸಿದರು.












Click it and Unblock the Notifications