ಕೊನೆಗೂ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಅಬ್ಬರಿಸಿ ಬೊಬ್ಬೆರೆದ ಮಳೆರಾಯ-ತಾಲೂಕುವಾರು ಮಾಹಿತಿ ಇಲ್ಲಿದೆ
ಚಿತ್ರದುರ್ಗ, ಜುಲೈ, 19: ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಹಾಗೆಯೇ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆರಾಯನ ಆರ್ಭಟ ಮುಂದುವರೆದ ಪರಿಣಾಮ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಇಂದು ಮಾತ್ರ ಮಳೆರಾಯನ ಆರ್ಭಟ ಮೊದಲ ಬಾರಿಗೆ ಜಿಲ್ಲೆಯಲ್ಲಿ ತುಸು ಹೆಚ್ಚಾಗಿದೆ. ಹಾಗಾದರೆ ಎಲ್ಲೆಲ್ಲೆ ಎಷ್ಟು ಮಳೆ ಸುರಿದಿದೆ ಎಂದು ತಾಲೂಕುವಾರು ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ಇಂದು (ಜುಲೈ 19) ಬೆಳಗ್ಗೆಯಿಂದಲೇ ಆರಂಭ ಆಗಿರುವ ತುಂತುರು ಮಳೆ ಸಾರ್ವಜನಿಕರ ಕೆಲಸಗಳಿಗೆ ಅಡ್ಡಿಯುಂಟಾಗಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಆಷಾಢ ಮಾಸ ಆರಂಭಗೊಂಡು ಜೋರು ಗಾಳಿ ಬೀಸುತ್ತಿತ್ತು. ಬಿತ್ತನೆಯಾಗಿದ್ದ ಬೆಳೆಗಳು ನೀರಿಲ್ಲದೆ, ಬಾಡ ತೊಡಗುತ್ತಿದ್ದವು. ಇದೀಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಕಮರಿ ಹೋಗಿದ್ದ ಬೆಳೆಗಳು ಚಿಗುರತೊಡಗಿದೆ. ರಾಗಿ, ಸಾಸಿವೆ, ಹೆಸರು, ಹಲಸಂದಿ, ಹತ್ತಿ ಇನ್ನಿತರ ಬೆಳೆಗಳು ಸ್ವಲ್ಪ ಚೇತರಿಕೆಯಾಗಿವೆ ಎನ್ನಬಹುದು.
ಹಿರಿಯೂರು ತಾಲ್ಲೂಕಿನಲ್ಲಿ ಜುಲೈ 19ರಂದು ಮಳೆಯಾದ ವರದಿ ಈ ರೀತಿ ಇದ್ದು, ಹಿರಿಯೂರು-7.2 ಮಿಲಿ ಮೀಟರ್ ಇಕ್ನೂರು-7.2 ಮಿಲಿ ಮೀಟರ್, ಈಶ್ವರಗೆರೆ 5.6 ಮಿಲಿ ಮೀಟರ್, ಬಬ್ಬೂರು-6.8 ಮಿಲಿ ಮೀಟರ್ ಹಾಗೂ ಸೂಗೂರಿನಲ್ಲಿ -5.1 ಮಿಲಿ ಮೀಟರ್ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹೊಸದುರ್ಗ ಭಾಗದಲ್ಲೂ ಜಿಟಿ ಜಿಟಿ ಮಳೆಯಾಗುತ್ತಿದೆ. ಇನ್ನು ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಆರಂಭದಲ್ಲಿ ಸುಮಾರು 2 ಅಡಿ ಒಳಹರಿವು ನೀರು ಹರಿದುಬಂದಿತ್ತು. ಇದೀಗ ಯಾವುದೇ ರೀತಿಯ ಒಳಹರಿವು ಡ್ಯಾಂಗೆ ಹರಿದು ಬರುತ್ತಿಲ್ಲ. ಚಿಕ್ಕಮಗಳೂರು ಭಾಗದಲ್ಲಿ ಜೋರು ಮಳೆ ಬಂದರೆ, ವಿವಿ ಸಾಗರ ಡ್ಯಾಂಗೆ ಒಳಹರಿವು ನೀರು ಹರಿದು ಬರುವ ಸಾಧ್ಯತೆಯಿದೆ.
ಎಲ್ಲಡೆ ಪ್ರವಾಹದ ಹೊಳೆ: ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದು, ಪರಿಣಾಮ ನದಿ, ಹಳ್ಳ-ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಇನ್ನು ಮಲೆನಾಡಿನಲ್ಲಿಯೂ ಭಾರೀ ಮಳೆ ಆಗುತ್ತಿದ್ದು, ಭದ್ರಾ, ತುಂಗಾ ನದಿ ತುಂಬಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಭದ್ರಾ ಜಲಾಶಯಕ್ಕೆ ಸುಮಾರು 50,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ತುಂಗಾ ಜಲಾಶಯದಿಂದ ಬರೋಬ್ಬರಿ 70,000 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಹಾಗೆಯೇ ದಾವಣಗೆರೆ ಜಿಲ್ಲೆಯ ಹಲವೆಡೆ ಭಾರೀ ಮಳೆಯಿಂದ ಪ್ರವಾಹದ ವಾತಾವತಣ ನಿರ್ಮಾಣವಾಗಿದೆ.
ಆದರೆ, ತುಂಗಾ ನದಿ ತುಂಬಿ ಹರಿಯುತ್ತಿದೆ. ಮತ್ತೊಂದೆಡೆ ಕಳೆದ ನಾಲ್ಕೈದು ದಿನಗಳಿಂದ ಭದ್ರಾ ಜಲಾಶಯಕ್ಕೆ ವ್ಯಾಪಕವಾಗಿ ಒಳಹರಿವು ಬರುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ. ಭದ್ರಾ ಜಲಾಶಯಕ್ಕೆ ಕೇವಲ ನಾಲ್ಕು ದಿನಗಳಲ್ಲಿ 12 ಅಡಿಗೂ ಹೆಚ್ಚು ನೀರು ಬಂದಿದ್ದು, ಈ ಬಾರಿ ಭದ್ರಾ ಜಲಾಶಯ ಭರ್ತಿಯಾಗುವ ವಿಶ್ವಾಸ ಇದೆ.
ಇನ್ನೂ ಮುಂಬರುವ ದಿನಗಳಲ್ಲಿ ಮಳೆ ಮತ್ತಷ್ಟು ಚುರುಕು ಪಡೆಯುವ ಸಾಧ್ಯತೆಯಿದ್ದು, ಇದೇ ರೀತಿ ಮಳೆ ಮುಂದುವರಿದರೆ ಆಗಸ್ಟ್ನಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಭದ್ರಾ ಡ್ಯಾಂ ಜಲಾಶಯ ಭರ್ತಿಯಾಗುವ ವಿಶ್ವಾಸ ರೈತರಲ್ಲಿದೆ.
ತುಂಗಾ ಭದ್ರಾ ನದಿ ಹರಿಯುವ ಮಾರ್ಗವಾದ ನ್ಯಾಮತಿ, ಹೊನ್ನಾಳಿ, ಹರಿಹರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕೆಲವು ಗ್ರಾಮಗಳಲ್ಲಿನ ಸಾವಿರಾರು ಹೆಕ್ಟೇರ್ ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೆ, ಹೊನ್ನಾಳಿ, ಹರಿಹರ, ಚನ್ನಗಿರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಕ್ಷಣ ಕಳೆದಂತೆ ಹೆಚ್ಚಾಗುತ್ತಿದ್ದು, ಇಲ್ಲಿನ ಜನರು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿದ್ದು, ತುಂಗಭದ್ರಾ ನದಿಯಲ್ಲಿನ ನೀರಿನ ಹರಿವು ಹೆಚ್ಚಳವಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ನದಿಪಾತ್ರದಲ್ಲಿನ ಜನ, ಜಾನುವಾರುಗಳ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.
ತುಂಗಾ ಜಲಾಶಯದಿಂದ ಸುಮಾರು 70,000 ಕ್ಯೂಸೆಕ್ಸ್ಗಿಂತಲೂ ಅಧಿಕ ನೀರು ಬಿಡಲಾಗುತ್ತಿದ್ದು, ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇರುವುದರಿಂದ ಹೊನ್ನಾಳಿಯ ಬಾಲರಾಜ್ ಘಾಟ್ ಬಳಿ ಸಮಸ್ಯೆಯಾಗಲಿದೆ. ಇಲ್ಲಿನ ಜನರಿಗೆ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯಲು ಹಾಗೂ ಹರಿಹರದ ಗಂಗಾ ನಗರದ ಬಳಿ ನೀರಿನ ಪ್ರಮಾಣ ಹೆಚ್ಚಳದಿಂದ ಜನರಿಗೆ ತೊಂದರೆಯಾಗಲಿದೆ. ಇಲ್ಲಿನ ಜನರಿಗೆ ತಾತ್ಕಾಲಿಕವಾಗಿ ಎಪಿಎಂಸಿ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಹೊನ್ನಾಳಿಯಲ್ಲಿ ವಿಪತ್ತು ನಿರ್ವಹಣೆ ಪರಿಶೀಲನೆಗಾಗಿ ಜುಲೈ 23ರಂದು ಸಭೆ ಕರೆಯಲಾಗಿದೆ. ನದಿಯಲ್ಲಿ ನೀರಿನ ಹರಿವು ಏರಿಕೆ ಆಗುವುದರಿಂದ ವಿಪತ್ತು ನಿರ್ವಹಣಾ ತಂಡವನ್ನು ಸನ್ನದ್ದವಾಗಿಡಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ನದಿ ಪಾತ್ರದಲ್ಲಿ ಓಡಾಟ ಮಾಡಬಾರದು ಮತ್ತು ಜಾನುವಾರುಗಳನ್ನು ನದಿಗೆ ಇಳಿಸದಂತೆ ನೋಡಿಕೊಳ್ಳಲು ಸೂಚಿಸಿ ಎಚ್ಚರಿಕೆಯಿಂದಿರಲು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದ್ದಾರೆ.












Click it and Unblock the Notifications