ಚಿತ್ರದುರ್ಗ; ಊಟ ಮಾಡಿಲ್ಲ, ಕುಡಿಯುವ ನೀರು ಪೂರೈಸಿ
ಚಿತ್ರದುರ್ಗ, ಜೂನ್ 04; ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ನಡುವೆಯೂ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಗೊಲ್ಲರಹಟ್ಟಿ, ಲಂಬಾಣಿ ತಾಂಡಾ, ಜೆ.ಜೆ. ಕಾಲೋನಿ ಈ ಮೂರು ಹಟ್ಟಿಗಳಲ್ಲಿ ಕಳೆದ 2-3 ದಿನಗಳಿಂದ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ.
Recommended Video

ಮಹಿಳೆಯರು ಊರಿನ ಹೊರವಲಯದಲ್ಲಿರುವ ಬಾವಿಗಿಳಿದು ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ಮಕ್ಕಳೊಂದಿಗೆ ಖಾಲಿ ಬಿಂದಿಗೆ ಹಿಡಿದು ನೀರು ತರುತ್ತಿರುವ ವೀಡಿಯೋ ವೈರಲ್ ಆಗಿದೆ.
ಗ್ರಾಮದಲ್ಲಿ ಮೂರು ಕುಡಿಯುವ ನೀರಿನ ಬೋರ್ವೆಲ್ಗಳಿವೆ. ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಹಾಲಿ ಸದಸ್ಯರ ನಡುವಿನ ತಿಕ್ಕಾಟದಲ್ಲಿ ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಗ್ರಾಮದಲ್ಲಿ ಕುಡಿಯುವ ನೀರಿನ ತುಂಬಾ ಸಮಸ್ಯೆ ಉಂಟಾಗಿದೆ. ಮಾಜಿ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಬೋರ್ವೆಲ್ನಲ್ಲಿದ್ದ ಪಂಪ್, ಮೋಟಾರ್ ಎತ್ತಿಕೊಂಡು ಹೋಗಿ, ಅದರಲ್ಲಿ ಕಲ್ಲು ಹಾಕಿ ಮುಚ್ಚಿದ್ದಾರೆ ಎಂದು ಗ್ರಾಮದ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
ಆ ಬೋರ್ವೆಲ್ ರೀಬೋರ್ ಮಾಡಿಸಲು ಹೋದರೆ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರದ್ದು ಮಾತು ಏನೂ ನಡೆಯುತ್ತಿಲ್ಲ. ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜನರು ಮನವಿ ಮಾಡಿದರು.

ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದಾಗ ನಾವು ನಿಮ್ಮೊಂದಿಗೆ ನಿಂತು ಗೆಲ್ಲಿಸಿದ್ದೆವು. ಇವತ್ತು ನಮ್ಮ ಪರಿಸ್ಥಿತಿ ನೋಡುತ್ತಿಲ್ಲ, ನಮ್ಮ ಕಷ್ಟ ನಿಮಗೆ ಅರ್ಥ ಆಗುತ್ತಿಲ್ಲ ಇತ್ತ ತಿರುಗಿಯೂ ನೋಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಾವಿಯಿಂದ ನೀರು ಸೇದುವಾಗ ನಮಗೆ ಏನಾದರೂ ಹೆಚ್ಚು ಕಡಿಮೆಯಾದರೆ ಇದಕ್ಕೆ ಯಾರು ಹೊಣೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ರಾತ್ರಿಯಿಂದ ನೀರು ಇಲ್ಲದೆ ಊಟ ಮಾಡಿಲ್ಲ. ನಮಗೆ ಸರಿಯಾದ ಜಾಗದಲ್ಲಿ ಬೋರ್ವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.












Click it and Unblock the Notifications