ನನಸಾಯಿತು ಚಿತ್ರದುರ್ಗದ ವೈದ್ಯಕೀಯ ಕಾಲೇಜು ಕನಸು
ಚಿತ್ರದುರ್ಗ, ಫೆಬ್ರವರಿ 17; ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಅಗತ್ಯವಿರುವ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ. ಜಿಲ್ಲೆಯ ಮೆಡಿಕಲ್ ಕಾಲೇಜು ಕನಸು ನನಸಾಗಿದೆ.
ಇತ್ತೀಚೆಗೆ ಮುಗಿದ ವಿಧಾನಸಭೆ ಅಧಿವೇಶನದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಕೇಳಿದ ಪ್ರಶ್ನೆಗೆ ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಚಿತ್ರದುರ್ಗ ಜಿಲ್ಲೆಯ ಮೆಡಿಕಲ್ ಕಾಲೇಜು ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿರುವುದಿಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದರು.
ಸಚಿವರ ಉತ್ತರಕ್ಕೆ ಚಿತ್ರದುರ್ಗದ ಜನಪ್ರತಿನಿಧಿಗಳು, ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಕಳೆದ ವಾರ ಮೊಳಕಾಲ್ಮೂರು ಶಾಸಕ, ಸಚಿವ ಬಿ. ಶ್ರೀರಾಮುಲು ಅವರಿದ್ದ ಸಭೆಯಲ್ಲಿ ಚಿತ್ರದುರ್ಗ ಶಾಸಕ ಜಿ. ಎಚ್. ತಿಪ್ಪಾರೆಡ್ಡಿ ಮಾತನಾಡಿ, "ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಶೀಘ್ರ ಅನುದಾನ ಬಿಡುಗಡೆ ಮಾಡದಿದ್ದರೆ ಬಜೆಟ್ ಅಧಿವೇಶನಕ್ಕೆ ಚಿತ್ರದುರ್ಗದ ಶಾಸಕರು ಗೈರಾಗುವುದಾಗಿ" ಎಚ್ಚರಿಕೆ ನೀಡಿದ್ದರು.

ಬುಧವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಪ ಅವರು ಜಿ. ಹೆಚ್. ತಿಪ್ಪಾರೆಡ್ಡಿ ಅವರ ಪತ್ರವನ್ನು ಲಗತ್ತಿಸಿ, ವೈದ್ಯಕೀಯ ಕಾಲೇಜು ಆರಂಭದ ಆದೇಶವನ್ನು ಹೊರಡಿಸಿದ್ದಾರೆ.
ಆದೇಶ ಹೀಗಿದೆ; ಮಾನ್ಯ ಶಾಸಕರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ರವರ ಮನವಿಯನ್ನು ಲಗತ್ತಿಸಿದೆ. ಚಿತ್ರದುರ್ಗ ನಗರದಲ್ಲಿ ಸರ್ಕಾರಿ ಮೆಡಿಕಲ್ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಅಗತ್ಯವಿರುವ ಅನುದಾನವನ್ನು ಹಂಚಿಕೆ ಮಾಡಿ 2021-22 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲು ಅಗತ್ಯ ಕ್ರಮ ವಹಿಸಲು ಪತ್ರದಲ್ಲಿ ಆದೇಶಿಸಿದೆ.
ಮುಖ್ಯಮಂತ್ರಿ ಆದೇಶಕ್ಕೆ ಜಿ. ಹೆಚ್. ತಿಪ್ಪಾರೆಡ್ಡಿ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಡಿ. ಶೇಖರ್, ಸೇರಿದಂತೆ ಚಿತ್ರದುರ್ಗ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.












Click it and Unblock the Notifications