ಭದ್ರೆಯ ಒಡಲಲ್ಲಿ ಕಯಾಕಿಂಗ್ ಜೊತೆಜೊತೆಗೇ ಸಾಗಿದ ಸ್ವಚ್ಛತೆಯ ಪಾಠ
ಚಿಕ್ಕಮಗಳೂರು, ಮಾರ್ಚ್ 17: ಭದ್ರಾ, ಸಮೃದ್ದ ಪರಿಸರದ ಖಜಾನೆ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಪಶ್ಚಿಮಘಟ್ಟಗಳ ಹಸಿರು ರಾಶಿಯ ಮಧ್ಯೆ ನೂರಾರು ಕಿ.ಮೀ. ಹರಿದು ಲಕ್ಕವಳ್ಳಿಯ ಭದ್ರಾ ಅಣೆಕಟ್ಟೆಯನ್ನು ಸೇರಿ ನಂತರ ಎರಡು ನಾಲೆಗಳ ಮೂಲಕ ಅದೆಷ್ಟೋ ಜನರ ಹೊಲಗದ್ದೆಗಳಲ್ಲಿ ಹೊನ್ನು ಬೆಳೆಸುತ್ತಿರುವ ತಾಯಿ. ಈ ಭದ್ರೆಯನ್ನು ನೆಚ್ಚಿಕೊಂಡೇ ಅದೆಷ್ಟೋ ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ. ಆದರೆ ಎಲ್ಲಾ ನದಿಗಳಿಗೂ ಅಂಟಿಕೊಂಡಿರುವ ಕಲುಷಿತತೆ ಭದ್ರೆಗೂ ಅಂಟಿಕೊಂಡಿದೆ.
Recommended Video
ಕುದುರೆಮುಖ ಗಿರಿಶ್ರೇಣಿಯಿಂದ ಹರಿದು ಬರುವ ಕಬ್ಬಿಣ ಅದಿರುಯುಕ್ತ ನೀರು, ಕಾಫಿ ತೋಟಗಳಿಗೆ ಸಿಂಪಡಿಸುವ ತರಹೇವಾರಿ ಔಷಧಿಗಳು, ನದಿ ತಟದಲ್ಲಿರುವ ಮಾಂಸದ ಅಂಗಡಿಗಳ ತ್ಯಾಜ್ಯಕ್ಕೆ ಇಡೀ ಭದ್ರೆ ದಿನೇ ದಿನೇ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಭದ್ರೆಯನ್ನು ಸ್ವಚ್ಛಗೊಳಿಸುವ ಹಾಗೂ ಭದ್ರೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಲ್ಲೊಂದು ಮಹಿಳಾ ತಂಡ ಭದ್ರಾ ನದಿಯ ಉಗಮ ಸ್ಥಾನದಿಂದ ಭದ್ರಾ ಜಲಾಶಯದವರೆಗೆ ಸುಮಾರು 150ಕ್ಕೂ ಹೆಚ್ಚು ಕಿ.ಮೀ. ಅನ್ನು ಸತತ 15 ದಿನಗಳ ಕಾಲ ಕಯಾಕಿಂಗ್ ಮಾಡುವ ಮೂಲಕ ಸ್ವಚ್ಛಗೊಳಿಸುವ ಕಾಯಕದ ಜೊತೆ ಜನರಲ್ಲಿ ನದಿಯ ಸ್ವಚ್ಛತೆಯ ಬಗ್ಗೆಯೂ ಅರಿವು ಮೂಡಿಸಿದ್ದಾರೆ. ಇದರ ಬಗ್ಗೆ ಕಿರುಲೇಖನ ಇಲ್ಲಿದೆ...

ಕಯಾಕಿಂಗ್ ಮೂಲಕ ಭದ್ರಾ ನದಿ ಸ್ವಚ್ಛತಾ ಜಾಗೃತಿ
ಮಾರ್ಚ್ 8ರ ಮಹಿಳಾ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಹಾಗೂ ಯುವ ಸಬಲೀಕರಣ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಆಯೋಜನೆಗೊಂಡಿದ್ದ ಮಿಷನ್ ಯೋಜನೆಯನ್ನು ಮಾರ್ಚ್ 8ರಂದು ಸಚಿವ ಸಿ.ಟಿ ರವಿ ಉದ್ಘಾಟನೆ ಮಾಡಿದ್ದರು. ನಂತರ ಅಂತರಾಷ್ಟ್ರೀಯ ಸಾಹಸ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಿತ್ರನಟಿ ರೇಖಾ ಪ್ರಸಾದ್ ಸೇರಿದಂತೆ 25 ಮಹಿಳೆಯರ ತಂಡ ಮಾರ್ಚ್ 9ರಂದು ಮೂಡಿಗೆರೆ ತಾಲೂಕಿನ ಬಾಳೆಹೊಳೆ ಸಮೀಪ ಭದ್ರಾ ನದಿಯಲ್ಲಿ ಇಳಿದು ಕಯಾಕಿಂಗ್ ಮೂಲಕ ಭದ್ರಾ ನದಿ ಸ್ವಚ್ಛತಾ ಜಾಗೃತಿಗೆ ಮುಂದಾದರು.

25 ಜನರನ್ನೊಳಗೊಂಡ ಸಾಹಸಿ ಮಹಿಳೆಯರ ತಂಡ
ಪ್ರತಿನಿತ್ಯ ಬೆಳಿಗ್ಗೆ ಏಳು ಗಂಟೆಗೆ ನದಿಗಿಳಿದು, ಏರಿಳಿತದ ಹಾದಿಯಲ್ಲಿ, ಬಂಡೆಗಳ ನಡುವೆ ನುಗ್ಗಿ, ಚಿಕ್ಕ ಚಿಕ್ಕ ಜಲಪಾತಗಳ ನಡುವೆ ಕಯಾಕಿಂಗ್ ಮಾಡುತ್ತ ನದಿಯ ದಂಡೆಯನ್ನು 25 ಜನರನ್ನೊಳಗೊಂಡ ಸಾಹಸಿ ಮಹಿಳೆಯರ ತಂಡ ಸ್ವಚ್ಛತೆಗೊಳಿಸಿದರು. ಹೀಗೆ ಸುಮಾರು 8 ದಿನಗಳ ಕಾಲ ಭದ್ರಾನದಿಯ ನಂಟು ಬೆಳೆಸಿದ ಮಹಿಳೆಯರು ಭದ್ರೆಯನ್ನು ಸ್ವಚ್ಛಗೊಳಿಸಿ ಒಂದು ಒಳ್ಳೆಯ ಕೆಲಸಕ್ಕೆ ನಾಂದಿ ಹಾಡಿದರು.

ಕಯಾಕಿಂಗ್ ನಲ್ಲಿ ಸಿ.ಟಿ ರವಿ ಪತ್ನಿ ಪಲ್ಲವಿ ಭಾಗಿ
ಈ ಸಾಹಸಮಯ, ವಿಭಿನ್ನ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ. ರವಿ ಪತ್ನಿ ಪಲ್ಲವಿ ಸಹ ಭಾಗಿಯಾಗಿ ಎಲ್ಲರಿಗೂ ಮತ್ತಷ್ಟು ಹುಮ್ಮಸ್ಸು ನೀಡಿದರು. ಕೊನೆಯ ನಾಲ್ಕು ದಿನಗಳ ಕಾಲ ಭದ್ರಾ ನದಿಯಲ್ಲಿ ನಿರಂತರ ಕಯಾಕಿಂಗ್ ಮಾಡುವ ಮೂಲಕ ಪಲ್ಲವಿ ಅವರು ಕೊನೆಯ ದಿನದವರೆಗೂ ಈ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದರು. ಪತಿ ಉದ್ಘಾಟನೆ ಮಾಡಿದ ನೂತನ ಕಾರ್ಯಕ್ಕೆ ಈ ರೀತಿ ತಾನೂ ಸಾಥ್ ನೀಡುವ ಭರವಸೆ ನೀಡಿದರು. ಚಿಕ್ಕಮಗಳೂರು ಎ.ಸಿ.ನಾಗರಾಜ್ ಕೂಡ ಒಂದಿಷ್ಟು ಕಾಲ ನದಿಗಿಳಿದು ಕಯಾಕಿಂಗ್ ಮಾಡುವ ಮೂಲಕ ಈ ಜಾಗೃತಿ ಕಾರ್ಯದಲ್ಲಿ ಭಾಗಿಯಾದರು.

ಕಯಾಕಿಂಗ್ ಜೊತೆ ಭದ್ರೆಯ ನಿಸರ್ಗ ಸೌಂದರ್ಯ ಸವಿದರು
ಸುಮಾರು 120 ಕಿ.ಮೀ. ಭದ್ರೆಯ ಒಡಲಲ್ಲಿ ಪುಟ್ಟ ದೋಣಿಯಲ್ಲಿ ಹುಟ್ಟು ಹಾಕುತ್ತಾ ಮಹಿಳೆಯರು ಭದ್ರೆಯ ಸುತ್ತಲಿನ ಪಶ್ಚಿಮಘಟ್ಟಗಳ ಸೌಂದರ್ಯವನ್ನು ಸಹ ಕಣ್ತುಂಬಿಕೊಂಡರು. ಬಿರು ಬೇಸಿಗೆಯಲ್ಲಿಯೂ ಹಾಲ್ನೊರೆಯಂತೆ ಜುಳು ಜುಳು ಹರಿಯುವ ನದಿಯಲ್ಲಿ ನಿಧಾನವಾಗಿ ಹುಟ್ಟುಹಾಕುತ್ತಾ ಹೋದಂತೆ ನದಿಯ ದಂಡೆಯಲ್ಲಿ ಆಕಾಶದೆತ್ತರಕ್ಕೆ ಬೆಳೆದ ಮರಗಳ ಸೊಬಗು. ಅದರುದ್ದಕ್ಕೂ ಜೋತು ಬಿದ್ದ ಬಳ್ಳಿಗಳು, ಅದರ ಮೇಲೆ ಕೂತು ತರಹೇವಾರಿ ಶಬ್ದಗೈಯ್ಯುವ ಹಕ್ಕಿಗಳು... ಅವುಗಳ ಶಿಕಾರಿಯ ಶೈಲಿ ಹಾಗೂ ಭದ್ರೆಯ ದಂಡೆಯ ಬಂಡೆಕಲ್ಲುಗಳ ಸೊಬಗು ಮತ್ತು ಭದ್ರಾ ಅಭಯಾರಣ್ಯದ ಪ್ರಾಣಿ ಸಂಕುಲಗಳನ್ನು ಸಹ ಕಯಾಕಿಂಗ್ ನಲ್ಲಿ ಭಾಗಿಯಾದವರು ಕಣ್ತುಂಬಿಕೊಂಡರು.












Click it and Unblock the Notifications