ಚಿಕ್ಕಮಗಳೂರು: ಜನರಲ್ಲಿ ಆತಂಕವನ್ನುಂಟು ಮಾಡಿದ್ದ ಚಿರತೆ ಸೆರೆ
ಚಿಕ್ಕಮಗಳೂರು, ಮೇ 28: ಕಳೆದ ಅನೇಕ ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವಿಟ್ಲಾಪುರ ಗ್ರಾಮದಲ್ಲಿ ಆತಂಕ ಮನೆಮಾಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ತರೀಕೆರೆ ತಾಲೂಕಿನ ವಿಟ್ಲಾಪುರ, ಅಮೃತಪುರ, ನೆರಲಿಕೆರೆ ಗ್ರಾಮಗಳ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿತ್ತು. ಈ ಗ್ರಾಮಗಳಲ್ಲಿ ಜನರು ರಾತ್ರಿ ಹೊತ್ತು ಇರಲಿ, ಬೆಳಗಿನ ಹೊತ್ತು ಓಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ತೋಟ, ಹೊಲಗಳಿಗೆ ಕೆಲಸಕ್ಕೆ ಹೋಗುವವರಿಗೆ ಕಾಣಿಸಿಕೊಂಡಿದ್ದ ಚಿರತೆ, ಜನರಲ್ಲಿ ಭೀತಿ ಉಂಟುಮಾಡಿತ್ತು. ಅಲ್ಲದೇ ನಾಯಿಯ ರುಚಿಗೆ ಬಿದ್ದಿದ್ದ ಚಿರತೆ 50 ಕ್ಕೂ ಹೆಚ್ಚು ನಾಯಿಗಳನ್ನು ತಿಂದು ಮುಕ್ಕಿತ್ತು. ಇದೇ ರುಚಿಗೆ ಪದೇ ಪದೇ ನಾಯಿಗಳನ್ನು ಬೇಟೆಯಾಡಲು ಗ್ರಾಮದೊಳಗೆ ಬರುತ್ತಿರುವುದು ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿತ್ತು.

ಈ ಹಿನ್ನೆಲೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಯು ಚಿರತೆಯನ್ನು ಸೆರೆ ಹಿಡಿಯಲು ಬೋನಿನೊಳಗೆ ನಾಯಿಗಳನ್ನು ಬಿಟ್ಟು ಚಿರತೆಗೆ ಹೊಂಚಿ ಹಾಕಿ ಕುಳಿತಿತ್ತು.

ಪರಿಣಾಮ ಇಂದು ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರಲ್ಲಿ ಮನೆಮಾಡಿದ್ದ ಚಿರತೆಯ ಆತಂಕ ದೂರವಾಗಿದೆ. ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಲ್ಲದೇ ಚಿರತೆಯನ್ನು ನೋಡಲು ಮುಗಿಬಿದ್ದಿದ್ದರು.











Click it and Unblock the Notifications