ಚಿಕ್ಕಮಗಳೂರು; ಸ್ಪೂರ್ತಿ ತುಂಬುವ ಮನು, ಸ್ವಪ್ನ ಪ್ರೀತಿಯ ಕಥೆ!
ಚಿಕ್ಕಮಗಳೂರು, ಏಪ್ರಿಲ್ 01; ಬೇರೆ ಮದುವೆಯಾಗು ಎಂದರೂ ಕೇಳದೆ ಆರು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಗೆ ಯುವಕ ಬಾಳುಕೊಟ್ಟಿದ್ದಾನೆ. ಎರಡು ವರ್ಷಗಳಿಂದ ಕಾಲುಗಳ ಸ್ವಾಧೀನ ಇಲ್ಲದಿದ್ದರೂ ಆಕೆಯನ್ನೇ ವಿವಾಹವಾಗಿ ಪ್ರೀತಿಯನ್ನು ಉಳಿಸಿಕೊಂಡಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿಯ ಯುವಕ ಮನು ಪ್ರೀತಿ ಎಂಬ ಪದಕ್ಕೆ ಹೊಸ ಅರ್ಥ ಕಲ್ಪಿಸಿದ್ದಾನೆ. ಮನು-ಸ್ವಪ್ನ ಕಳೆದ 6 ವರ್ಷದಿಂದ ಪ್ರೀತಿಸುತ್ತಿದ್ದರು. ಚಿಕ್ಕಂದಿನಿಂದಲೂ ಚೆನ್ನಾಗಿದ್ದ ಸ್ವಪ್ನಾಗೆ ಕಳೆದ ಎರಡು ವರ್ಷಗಳಿಂದ ಎರಡೂ ಕಾಲುಗಳ ಸ್ವಾಧೀನ ಇಲ್ಲ. ವೀಲ್ಚೇರ್ ಇಲ್ಲದಿದ್ದರೇ ಬದುಕೇ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದಾಳೆ.
ಆದರೆ, ಮನುವಿನ ಪ್ರೀತಿ ಇದಕ್ಕೆ ಅಡ್ಡಿಯಾಗಿಲ್ಲ. ಪ್ರೀತಿಸಿದವಳನ್ನು ಕೈಬಿಡಬಾರದು ಎಂದು ಆಕೆಯೇ ಬೇಡ ಎಂದರೂ ಅವಳನ್ನು ವಿವಾಹವಾಗಿದ್ದಾನೆ. ಈ ಮೂಲಕ ಪ್ರೀತಿ ಎಂಬ ಪದಕ್ಕೆ ಎರಡೇ ಅಕ್ಷರವಾದರೂ ಅದಕ್ಕೆ ಸಾವಿರಾರು ಮುಖಗಳಿವೆ, ಸೋಲು-ಗೆಲುವಿನ ಪ್ರೀತಿಗೆ ಲೆಕ್ಕವಿಲ್ಲ ಎಂದು ಸಾಬೀತು ಮಾಡಿದ್ದಾನೆ.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮನು ಮತ್ತು ಸ್ವಪ್ನ ವಿವಾಹ ನಡೆದಿದೆ. ಇಬ್ಬರದ್ದೂ ಬಡಕುಟುಂಬ, ಇಬ್ಬರೂ ಪಿಯುಸಿ ಓದಿದ್ದಾರೆ. ಹಾರ್ಡ್ವೇರ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಮನು ಪ್ರೇಯಸಿಗೆ ಹೀಗಾಯ್ತು ಎಂದು ಕೆಲಸ ಬಿಟ್ಟು ಹಳ್ಳಿಯಲ್ಲೇ ಕೆಲಸ ಮಾಡಿಕೊಂಡು ಆಕೆಯನ್ನು ನೋಡಿಕೊಳ್ಳುತ್ತಿದ್ದಾನೆ.

ಸ್ವಪ್ನಾಳಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನ
ಮನು ಸ್ವಪ್ನಾಳಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆಸ್ಪತ್ರೆ, ನಾಟಿ ಔಷಧಿ ಅಂತೆಲ್ಲಾ ತಿರುಗಾಡಿದ್ದಾನೆ. ಆದರೆ, ಎಲ್ಲೂ ಪ್ರೇಯಸಿಯ ಕಾಲುಗಳು ಸರಿಯಾಗಿಲ್ಲ. ಶಿವಮೊಗ್ಗ, ಮೈಸೂರು, ಮಂಗಳೂರು, ಬೆಂಗಳೂರು, ಕೇರಳದಲ್ಲೂ ವೈದ್ಯರು ಎಲ್ಲವೂ ನಾರ್ಮಲ್ ಇದೆ ಎಂದು ಹೇಳಿದ್ದಾರೆ. ಆದರೆ, ಆಕೆಗೆ ಎದ್ದು ನಿಲ್ಲಲು, ಓಡಾಡಲು ಆಗುತ್ತಿಲ್ಲ.

ಬೇರೆಯವರನ್ನು ಮದುವೆಯಾಗು
ಸ್ವಪ್ನಾ ಕೂಡ ನಾನು ಹೀಗಿದ್ದೇನೆ. ಬೇಡ ಎಲ್ಲರಿಗೂ ತೊಂದರೆ. ಬೇರೆ ಮದುವೆಯಾಗು ಎಂದು ಹೇಳಿದ್ದಳು. ಆದರೆ, ಒಪ್ಪದ ಯುವಕ ನಾನು ನಿನ್ನನ್ನು ಕೈಬಿಡಲ್ಲ. ಕೊನೆವರೆಗೂ ನಿನ್ನ ಜೊತೆ ಇರುತ್ತೀನೆ ಎಂದು ಆಕೆ ಜೊತೆಯೇ ಸಪ್ತಪದಿ ತುಳಿದು ಪ್ರೀತಿಗೆ ಮಾದರಿಯಾಗಿದ್ದಾನೆ. ಕಾಲುಗಳ ಸ್ಥಿತಿ ಕಂಡು ಮಾನಸಿಕವಾಗಿಯೂ ಬಳಲಿದ್ದ ಪ್ರೇಮಿಗೆ ಧೈರ್ಯ ತುಂಬಿ ಜೊತೆಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾನೆ.

ಊರಿನ ಜನರ ಬೆಂಬಲ
ಯುವಕ ಮನು ತಾಯಿ ಕೂಡ ಮಗನ ಬೆಂಬಲಕ್ಕೆ ನಿಂತಿದ್ದಾರೆ. "ನನ್ನ ಮಗ ಇಷ್ಟ ಪಟ್ಟಿದ್ದಾನೆ. ಅಷ್ಟೇ ಮುಗೀತು. ಅವಳೇ ನನಗೆ ಮಗಳು-ಸೊಸೆ ಎಲ್ಲಾ ಎಂದು ಮನೆ ತುಂಬಿಸಿಕೊಂಡು, ನನ್ನ ಮಗಳಂತೆ ನೋಡಿಕೊಳ್ತೇನೆ" ಎಂದಿದ್ದಾರೆ. ಊರಿನ ಜನರು ಕೂಡ ಪ್ರೇಮಿಗಳ ಬೆನ್ನಿಗೆ ನಿಂತಿದ್ದಾರೆ. ಸ್ವಪ್ನಾಳಿಗೆ ಚಿಕಿತ್ಸೆ ಕೊಡಿಸುವ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.
Recommended Video

ಪ್ರೀತಿಗೆ ಅಡ್ಡಿಯಾಗದ ಜಾತಿ
ಮನು ಮತ್ತು ಸ್ವಪ್ನಾ ಅವರದ್ದು ಬೇರೆ-ಬೇರೆ ಜಾತಿ. ಆದರೆ, ಇಲ್ಲಿ ಜಾತಿ, ಅಂತಸ್ತಿನ ವಿಷಯವೇ ಬಂದಿಲ್ಲ. ಪ್ರಾಮಾಣಿಕ ಹಾಗೂ ನಿಷ್ಕಲ್ಮಷ ಪ್ರೀತಿಗೆ ಬೆಲೆಕೊಟ್ಟು ಇಬ್ಬರೂ ವಿವಾಹವಾಗಿದ್ದಾರೆ. ಕಾಲುಗಳ ಸ್ವಾಧೀನವೇ ಇಲ್ಲದಿದ್ದರೂ ಜೀವನ ಪರ್ಯಂತ ನೋಡಿಕೊಳ್ಳುತ್ತೇನೆ ಎಂದು ಯವತಿಗೆ ಬಾಳುಕೊಟ್ಟ ಮನು ಕಾರ್ಯಕ್ಕೆ ಊರಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications