ಸ್ನೇಕ್ ನರೇಶ್ ಮನೆಯಲ್ಲಿ ನೂರಾರು ಹಾವುಗಳು ಪತ್ತೆ!: ಪ್ರಕರಣ ದಾಖಲು
ಚಿಕ್ಕಮಗಳೂರು, ಮೇ 31: ತಾನು ರಕ್ಷಣೆ ಮಾಡಿದ್ದ ನಾಗರಹಾವಿನಿಂದ ಕಡಿತಕ್ಕೊಳಗಾಗಿ ಮೃತಪಟ್ಟಿದ್ದ ಸ್ನೇಕ್ ನರೇಶ್ ಅವರ ಮನೆಯಲ್ಲಿ ನೂರಾರು ಹಾವುಗಳು ಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮಂಗಳವಾರ ನಗರದ ಹೌಸಿಂಗ್ಬೋರ್ಡ್ ಬಡಾವಣೆಯ ಮನೆಯೊಂದರ ಸಮೀಪದಲ್ಲಿದ್ದ ನಾಗರಹಾವೊಂದನ್ನು ಹಿಡಿಯಲು ಮನೆ ಮಾಲಕರು ಕರೆ ಮಾಡಿದ್ದರಿಂದ ಅಲ್ಲಿಗೆ ತೆರಳಿದ್ದ ಸ್ನೇಕ್ ನರೇಶ್ ಹಾವು ಹಿಡಿದು ರಕ್ಷಣೆ ಮಾಡಿದ್ದರು. ಈ ವೇಳೆ ಮತ್ತೊಂದು ಹಾವು ಹಿಡಿಯಲು ಅವರಿಗೆ ಕರೆ ಬಂದಿದ್ದರಿಂದ ಆಗತಾನೆ ಹಿಡಿದಿಟ್ಟಿದ್ದ ಹಾವು ಇದ್ದ ಬ್ಯಾಗ್ ಬಿಗಿ ಮಾಡಲು ಮುಂದಾಗಿದ್ದ ವೇಳೆ ಬ್ಯಾಗಿನಲ್ಲಿದ್ದ ನಾಗರಹಾವು ಅವರ ಕೈಗೆ ಕಚ್ಚಿದ್ದರಿಂದ ಮೃತಪಟ್ಟಿದ್ದರು.

ಮಂಗಳವಾರ ಸಂಜೆ ಸ್ನೇಕ್ ನರೇಶ್ ಮನೆ ಪರಿಶೀಲನೆ ನಡೆಸಿದ ವೇಳೆ ಪರಿಶೀಲನೆ ಹೋಗಿದ್ದವರೂ ಸೇರಿದಂತೆ ನರೇಶ್ ಮನೆಯ ನೆರೆಹೊರೆಯವರೂ ಬೆಚ್ಚಿ ಬೀಳುವ ಘಟನೆ ಬೆಳಕಿಗೆ ಬಂದಿದೆ. ಸ್ನೇಕ್ ನರೇಶ್ ಮನೆ ಹಾಗೂ ಕಾರಿನಲ್ಲಿ ನಾಗರಹಾವು ಸೇರಿದಂತೆ ವಿವಿಧ ಜಾತಿಯ ಹಾವುಗಳು ಮತ್ತು ಮರಿಗಳು ಸೇರಿ ಸುಮಾರು 91 ಹಾವುಗಳು ಪತ್ತೆಯಾಗಿವೆ.
ಬಳಿಕ ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ನರೇಶ್ ಮನೆಗೆ ಹೋಗಿ ಇಡೀ ಮನೆಯನ್ನು ತಪಾಸಣೆ ಮಾಡಿದಾಗ ಮನೆಯ ಒಳಭಾಗ, ಮನೆಯ ಅಟ್ಟ, ಕಾರು, ಬ್ಯಾರಲ್ಗಳಲ್ಲೂ ಹಾವುಗಳು ಪತ್ತೆಯಾಗಿವೆ. ಸ್ನೇಕ್ ನರೇಶ್ ತಾವು ಹಿಡಿದ ಹಾವುಗಳ ಪೈಕಿ ಕೆಲ ಹಾವುಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದು, ಕೆಲ ಹಾವುಗಳನ್ನು ಬ್ಯಾಗ್ಗಳಲ್ಲೇ ಇಟ್ಟಿದ್ದು, ಆ ಹಾವುಗಳು ಬ್ಯಾಗ್ಗಳಲ್ಲೇ ಮರಿ ಮಾಡಿದ್ದವು.

ಬ್ಯಾರಲ್ವೊಂದರಲ್ಲಿ ಇಟ್ಟಿದ್ದ ಹಾವು ಬ್ಯಾರಲ್ನಲ್ಲೇ ಸುಮಾರು 20ಕ್ಕೂ ಹೆಚ್ಚು ಮರಿಗಳನ್ನು ಹಾಕಿರುವುದೂ ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗತಜ್ಞರು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಹಾವುಗಳನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿದ್ದ ಘಟನೆ ಸಂಬಂಧ ಸ್ನೇಕ್ ನರೇಶ್ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಜಿಲ್ಲಾದ್ಯಂತ ಸ್ನೇಕ್ ನರೇಶ್ ಎಂದು ಖ್ಯಾತಿ ಪಡೆದಿದ್ದ ಉರಗ ತಜ್ಞ ಸೆರೆ ಹಿಡಿದ ನಾಗರಹಾವು ಕಚ್ಚಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿತ್ತು. ಈ ಹಿಂದೆ 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹಾವು ಸೆರೆ ಹಿಡಿಯುವ ಜೊತೆಗೆ ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.
ಮಂಗಳವಾರ ಬೆಳಗ್ಗೆ ನಾಗರಹಾವು ಹಿಡಿದುಕೊಂಡು ಬಂದಿದ್ದರು. ನಾಗರ ಹಾವನ್ನು ಚೀಲದಲ್ಲಿ ಗಂಟು ಹಾಕಿ ಬೈಕ್ ಡಿಕ್ಕಿಯಲ್ಲಿಟ್ಟಿದ್ದರು. ಮಧ್ಯಾಹ್ನದ ವೇಳೆ ಮತ್ತೊಂದು ಹಾವು ಹಿಡಿಯಲು ಕರೆ ಬಂದಿದ್ದು, ಈ ವೇಳೆ ಬೈಕ್ ಡಿಕ್ಕಿಯಲ್ಲಿ ಇರಿಸಿದ್ದ ನಾಗರಹಾವು ಇದ್ದ ಚೀಲದ ಗಂಟನ್ನು ಬಿಗಿ ಮಾಡಲು ಸ್ಕೂಟರ್ ಡಿಕ್ಕಿ ತೆರೆದಿದ್ದು. ಈ ವೇಳೆ ನಾಗರಹಾವು ಕಚ್ಚಿದೆ. ಸ್ನೇಕ್ ನರೇಶ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದು, ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು.












Click it and Unblock the Notifications