60..40..ಯಾರಿಗುಂಟು ಯಾರಿಗಿಲ್ಲ: ಇಂಧನ ಸಚಿವರ ತವರಲ್ಲಿ ಮೊಬೈಲ್ ಚಾರ್ಜ್ಗೆ ಭಾರೀ ಡಿಮ್ಯಾಂಡ್
ಚಿಕ್ಕಮಗಳೂರು, ಜುಲೈ 25: ಮಲೆನಾಡಿನಲ್ಲಿ ಒಂದು ದಿನ ಸ್ವಲ್ಪ ಕಡಿಮೆಯಾಗಿದ್ದ ಮಳೆಯ ಅಬ್ಬರ ಇಂದು ಇನ್ನಷ್ಟು ಹೆಚ್ಚಾಗಿದ್ದು, ಗಾಳಿ-ಮಳೆ ಆರ್ಭಟ ಜೋರಾಗಿದೆ. ಭಾರೀ ಗಾಳಿ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಮರಗಳು ಧರೆಗುರುಳಿದೆ.
ಮರಗಳು ರಸ್ತೆ ಬದಿಯ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ವಾರಗಳು ಕಳೆಯುತ್ತಿದ್ದು, ಜನ ಮೊಬೈಲ್ ಚಾರ್ಜ್ ಸೇರಿದಂತೆ ಇತರ ವಿದ್ಯುತ್ ಅಗತ್ಯತೆಗೆ ಪರದಾಡುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕೃತಕ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಶಾಮಿಯಾನ ಅಂಗಡಿಯಲ್ಲಿ ಜನರೇಟರ್ ಆನ್ ಮಾಡಿ ಮೊಬೈಲ್ ಚಾರ್ಜಿಂಗ್ ಮಾಡಿಕೊಡಲಾಗುತ್ತಿದೆ. ಜನರು ನಾ ಮುಂದು-ತಾ ಮುಂದು ಎಂದು ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಲು ಮುಗಿಬೀಳುತ್ತಿದ್ದು, ದರ ಕೂಡ ನಿಗದಿ ಮಾಡಲಾಗಿದೆ.
ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಒಂದು ಮೊಬೈಲ್ ಫುಲ್ ಚಾರ್ಜ್ ಮಾಡಿಕೊಡಲು 60 ರೂಪಾಯಿ ಹಾಗೂ ಅರ್ಧ ಚಾರ್ಜ್ ಮಾಡಿಕೊಡಲು 40 ರೂಪಾಯಿ ನಿಗದಿ ಮಾಡಲಾಗಿದೆ. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮ ಹಾಗೂ ಪರ ಗ್ರಾಮದ ಯುವಕರು ಗುಂಪು ಗುಂಪಾಗಿ ಬಂದು ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಗೃಹಜ್ಯೋತಿ ಯೋಜನೆಯಡಿಯಲ್ಲಿ ವಿದ್ಯುತ್ ಉಚಿತ ನೀಡುತ್ತಿದೆ. ವಿಪರ್ಯಾಸವೆಂದರೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ತವರಲ್ಲಿಯೇ ಮೊಬೈಲ್ ಚಾರ್ಜ್ಗೂ ದುಬಾರಿ ಹಣ ನೀಡುವಂತಾಗಿದೆ.

ಇನ್ನು ಗುರುವಾರ ಮುಂಜಾನೆ ಭಾರೀ ಮಳೆ ಗಾಳಿಗೆ ಮೂಡಿಗೆರೆ- ಚಿಕ್ಕಮಗಳೂರು ಹೆದ್ದಾರಿಯಲ್ಲಿ ನಾಲ್ಕು ಭಾರೀ ಗಾತ್ರದ ಮರಗಳು ಉರುಳಿ ಬಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಕೂಡಲೇ ಅರಣ್ಯ ಇಲಾಖೆ, ಸ್ಥಳೀಯರು ಮರ ತೆರವು ಮಾಡಿದ್ದರು. ಮಲೆನಾಡು ಭಾಗದಲ್ಲಿ ಇದುವರೆಗೆ 2000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕರುಳಿದ್ದು, 200ಕ್ಕೂ ಹೆಚ್ಚು ಮನೆಗಳು ಕುಸಿದಿವೆ, ಸೇತುವೆ , ಕೃಷಿ, ತೋಟಗಾರಿಕೆ ಬೆಳೆ ಸೇರಿದಂತೆ 120 ಕೋಟಿ ರೂಪಾಯಿಗೂ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.












Click it and Unblock the Notifications