ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ದಿ.ಸಿದ್ಧಾರ್ಥ್ ಹೆಗ್ಡೆಯವರೇ ಕಾರಣ - ಸಿ.ಟಿ.ರವಿ
ಚಿಕ್ಕಮಗಳೂರು, ಡಿಸೆಂಬರ್ 6 : ಕಾಫಿನಾಡಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಲು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಅವರೇ ಕಾರಣ. ಇಂದು ಅವರನ್ನು ನೆನೆಯಲೇಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು ನಗರ ಹೊರವಲಯದ ತೇಗೂರು ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿಕ್ಕಮಗಳೂರು ಮೆಡಿಕಲ್ ಕಾಲೇಜು ನೂತನ ಕಟ್ಟಡದಲ್ಲಿ ಕಾಲೇಜಿನ ಪ್ರಥಮ ಕೋರ್ಸ್ಗಳ ಆರಂಭೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ದತ್ತಜಯಂತಿ ಹಿನ್ನೆಲೆ ಗಿರಿ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಸಿ.ಟಿ ರವಿ ವೈದ್ಯಕೀಯ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಉತ್ತಮ ವೈದ್ಯರಾಗಿ ರೂಪಿಸುವುದರ ಜೊತೆಗೆ ಪಠ್ಯ ಶಿಕ್ಷಣದ ಹಾಗೂ ನೈತಿಕ ಶಿಕ್ಷಣವನ್ನು ನೀಡಬೇಕೆಂದು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ-ಸಿ.ಟಿ ರವಿ
ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಭಯ, ಆತಂಕಪಡುವ ಅಗತ್ಯವಿಲ್ಲ. ಇಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳುತ್ತೇವೆ. ಚಿಕ್ಕಮಗಳೂರು ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ಒಳ್ಳೆಯ ಮನಸ್ಸಿನ ಜನರಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಇಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇದೆ ಎಂದರು.
ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಅವರನ್ನು ನೆಪಿಸಿಕೊಂಡ ಸಿ.ಟಿ ರವಿ, ಒಮ್ಮೆ ನಾನು ಸಿದ್ಧಾರ್ಥ್ ಅವರನ್ನು ಭೇಟಿ ಮಾಡಲು ಹೋದಾಗ ಅವರು ಕೇಳಿದ್ದರು. 'ರವಿ, ಚಿಕ್ಕಮಗಳೂರಲ್ಲಿ ಮೆಡಿಕಲ್ ಕಾಲೇಜು ಯಾಕೆ ಆಗಿಲ್ಲ ಎಂದಿದ್ದರು'. ಆಗ ನನ್ನ ತಲೆಯಲ್ಲಿ ಕಾಲೇಜು ತರಬೇಕು ಎಂಬ ಭಾವನೆ ಮೂಡಿತ್ತು. ಇಂದಿನ ನಮ್ಮ ಈ ಖುಷಿಗೆ ಅವರೇ ಕಾರಣ ಎಂದರು.
ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳ ರೀತಿ ನೋಡಿಕೊಳ್ಳುತ್ತೇವೆ
ಜಿಲ್ಲೆಯ ಈ ಮೆಡಿಕಲ್ ಕಾಲೇಜಿಗೆ ಕಾರಣರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆರ್ಎಸ್ಎಸ್ನ ಸಂತೋಷ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರಿಗೂ ಸಿ.ಟಿ ರವಿ ಅಭಿನಂದನೆ ಸಲ್ಲಿಸಿದರು.
ಈ ಕಾಲೇಜಿಗೆ ಆರಂಭದಲ್ಲಿ ಕೆಲ ಕೊರತೆ ಇತ್ತು. ಅದನ್ನೆಲ್ಲಾ ಬಗೆಹರಿಸಿದ್ದೇವೆ. ಸಮಸ್ಯೆಯನ್ನು ಬಗೆಹರಿಸಲು ಕಾಫಿನಾಡಿನಲ್ಲಿ ಸಹೃದಯಿಗಳಿದ್ದಾರೆ. 18 ಗಂಟೆಯಲ್ಲಿ 18 ಲಕ್ಷದ ಬಸ್ ಕೊಟ್ಟವರು ಇದ್ದಾರೆ. ಸರ್ಕಾರ ಹಾಗೂ ದಾನಿಗಳಿಂದ ಕಾಲೇಜಿಗೆ ಎಲ್ಲಾ ಸೌಲಭ್ಯವಾಗಿದೆ. ಹೊಸ ಕಾಲೇಜು ಹೇಗೋ..?ಏನೋ..? ಎಂದು ಪೋಷಕರು ಭಯ ಪಡಬೇಡಿ. ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳ ರೀತಿ ನೋಡಿಕೊಳ್ಳುತ್ತೇವೆ. ಭಯ ಪಡಬೇಡಿ ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳಿಗೆ ಪಾಠದ ಜೊತೆ ನೈತಿಕತೆ ಕಲಿಸಬೇಕು
ಇನ್ನು ಕಾಲೇಜಿಗೆ ಅನೂಕಲವಾಗಲೆಂದು 197 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡ ನಿರ್ಮಾಣವಾಗುತ್ತಿದೆ. ವೈದ್ಯರು ಹಾಗೂ ರೋಗಿಗಳ ಸಂಬಂಧ ಮೆಕಾನಿಕಲ್ ಆಗಬಾರದು. ಭಾವನಾತ್ಮಕವಾಗಿ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಶೀಲವಿಲ್ಲದ ಸೌಂದರ್ಯ, ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಅರ್ಥಹೀನ ಎಂದು ದಾರ್ಶನಿಕರು ಹೇಳಿದ್ದು, ಅದರಂತೆ ಪಠ್ಯದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸುವ ಹೊಣೆಗಾರಿಕೆ ಕಾಲೇಜು ಸಿಬ್ಬಂದಿ ಮೇಲಿದೆ. ಮೆಡಿಕಲ್ ಕಾಲೇಜು ಸುತ್ತಮುತ್ತಲ ಪ್ರದೇಶವನ್ನು ವಿದ್ಯಾನಗರವನ್ನಾಗಿ ಮಾರ್ಪಡಿಸಬೇಕೆಂಬ ಆಶಯ ನಮ್ಮದಾಗಿದೆ ಎಂದರು.
ಸದ್ಯ ಭಾರತದಲ್ಲಿ 596 ಮೆಡಿಕಲ್ ಕಾಲೇಜುಗಳಿವೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಔಷಧಗಳು ಖಾಯಿಲೆ ಗುಣ ಪಡಿಸಿದರೆ, ವೈದ್ಯರು ಮನುಷ್ಯನನ್ನೇ ಗುಣಪಡಿಸುತ್ತಾರೆ. ಭಾರತದಲ್ಲಿ ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ, ವಿದ್ಯಾರ್ಥಿಗಳ ಮೇಲೆ ಆ ಜವಾಬ್ದಾರಿ ಇದೆ ಭಾರತದಲ್ಲಿ 2013ರಲ್ಲಿ ಸುಮಾರು 146 ಮೆಡಿಕಲ್ ಕಾಲೇಜುಗಳಿದ್ದವು. ಆದರೆ, ಈಗ ಭಾರತದಲ್ಲಿ 596 ಮೆಡಿಕಲ್ ಕಾಲೇಜು ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಲೈಫ್ಲೈನ್ ಫೀಡ್ಸ್ ಮುಖ್ಯಸ್ಥ ಕಿಶೋರ್ ಕುಮಾರ್ ಹೆಗ್ಡೆ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್, ಡಿಎಚ್ಓ ಡಾ.ಉಮೇಶ್, ಮೆಡಿಕಲ್ ಕಾಲೇಜು ಡೀನ್ ಡಾ. ಹರೀಶ್, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.