ಮೂಡಿಗೆರೆಯಲ್ಲೊಂದು ಕರುಣಾಜನಕ ಕಥೆ; ಸೂರಿಲ್ಲದೆ ಗುಹೆಯಲ್ಲೇ ವಾಸ
ಚಿಕ್ಕಮಗಳೂರು, ಏಪ್ರಿಲ್ 23: ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಸೂರನ್ನು ಕಳೆದುಕೊಂಡ ಕುಟುಂಬವೊಂದು ಇನ್ನೂ ನೆಲೆ ಕಾಣದೆ ವರ್ಷ ಸರಿದರೂ ಗುಹೆಯಲ್ಲಿಯೇ ವಾಸ ಮಾಡುತ್ತಿರುವ ಕರುಣಾಜನಕ ಸಂಗತಿ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕೆರೆ ಸಮೀಪದ ಕಲ್ಲಕ್ಕಿ ಎಂಬ ಬಲಿಗೆ ಅರಣ್ಯದ ಗುಹೆಯೊಂದರಲ್ಲಿ ಈ ಕುಟುಂಬ ವಾಸ ಮಾಡುತ್ತಿದೆ. ವರ್ಷದ ಹಿಂದೆ ಸುರಿದ ಮಳೆಯಿಂದಾಗಿ ಗುಹೆ ಸೇರಿದ ಈ ಕುಟುಂಬಕ್ಕೆ ಇನ್ನೂ ನೆಲೆ ಸಿಕ್ಕಿಲ್ಲ. ಅವರನ್ನು ಗುರುತಿಸುವ ಕೆಲಸವೂ ಜಿಲ್ಲಾಡಳಿತದಿಂದ ನಡೆದಿರಲಿಲ್ಲ.
ಮಳೆಯಿಂದ ತೋಟ, ಮನೆ ಕಳೆದುಕೊಂಡಿದ್ದ ಕುಟುಂಬ
ಕಳೆದ ವರ್ಷ ಮಲೆನಾಡಿನಲ್ಲಿ ಭಾರೀ ಮಳೆಯಾಗಿತ್ತು. ಅದರಲ್ಲೂ ಮೂಡಿಗೆರೆ ತಾಲೂಕಿನಲ್ಲಿ ಗುಡ್ಡಕುಸಿತ, ನದಿಗಳ ಆರ್ಭಟ ಎಲ್ಲೆ ಮೀರಿತ್ತು. ಈ ವೇಳೆ ಮಳೆಯಿಂದಾಗಿ ಕಲ್ಲಕ್ಕಿ ಗ್ರಾಮದ ಅನಂತ್ ಎಂಬುವರ ಮನೆ ಹಾಗೂ ತೋಟ ಕೊಚ್ಚಿಹೋಗಿತ್ತು. ಆಗ ನೆಲೆ ಕಳೆದುಕೊಂಡಿತ್ತು ಈ ಕುಟುಂಬ. ಅನಂತ್ ಹಾಗೂ ಆತನ ಪತ್ನಿ, ಇಬ್ಬರು ಮಕ್ಕಳು ಸತತ ಒಂದು ವರ್ಷಗಳ ಕಾಲ ಗುಹೆಯಲ್ಲಿಯೇ ವಾಸವಾಗಿರುವುದು ಈಗ ಬೆಳಕಿಗೆ ಬಂದಿದೆ.
ಹಾಸಿಗೆ ಹಿಡಿದಿರುವ ಕುಟುಂಬ; ಗಾಯದ ಮೇಲೆ ಬರೆ ಎಳೆಯಿತೇ ಕೊರೊನಾ
ಜಿಲ್ಲಾಡಳಿತದ ಗಮನಕ್ಕೇ ಬಂದಿಲ್ಲ ಸಂಗತಿ
ಚಿಕ್ಕಮಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಸಂದರ್ಭದಲ್ಲಿ ಸರ್ಕಾರ, ಅತಿವೃಷ್ಟಿಯಿಂದ ನಿರಾಶ್ರಿತರಾದವರನ್ನು ಗುರುತಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು. ಆದರೆ ಈ ಕುಟುಂಬವನ್ನು ವರ್ಷ ಕಳೆದರೂ ಅಧಿಕಾರಿಗಳು ಗುರುತಿಸಿಲ್ಲ ಎಂಬುದೇ ವಿಪರ್ಯಾಸವಾಗಿದೆ.
ಮಕ್ಕಳನ್ನು ದತ್ತು ಪಡೆದ ಟ್ರಸ್ಟ್
ಈ ಕುಟುಂಬ ಗುಹೆಯಲ್ಲಿ ವಾಸಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಜಿಲ್ಲಾಧಿಕಾರಿಗಳು ಮೂಡಿಗೆರೆ ತಹಶೀಲ್ದಾರ್ ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ. ಮಕ್ಕಳನ್ನು ಉಡುಪಿ ಮೂಲದ ಬೆಂಗಳೂರಿನ ಸಮರ್ಪಣಾ ಚಾರಿಟಬಲ್ ಟ್ರಸ್ಟ್ ದತ್ತು ಪಡೆದು ಅವರು ಎಲ್ಲಿಯವರೆಗೆ ಓದುತ್ತಾರೋ ಅಲ್ಲಿಯವರೆಗೂ ಶಿಕ್ಷಣ ಕೊಡಿಸುವ ಭರವಸೆ ನೀಡಿದ್ದಾರೆ.
ಮಲೆನಾಡಿನ ಹಲಸಿಗೂ ತಟ್ಟಿದ ಲಾಕ್ ಡೌನ್ ಬಿಸಿ
ಸ್ಥಳೀಯರ ಆಕ್ರೋಶ
ಮಳೆಯಿಂದ ಅನಾಹುತ ಸಂಭವಿಸಿ ವರ್ಷ ಕಳೆದರೂ ನಿರಾಶ್ರಿತರನ್ನು ಗುರುತಿಸಲು ವಿಫಲವಾಗಿರುವ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಗತಿ ಯಾರ ಗಮನಕ್ಕೂ ಬಂದಿಲ್ಲವೇಕೆ ಎಂದೂ ಪ್ರಶ್ನಿಸುತ್ತಿದ್ದಾರೆ.