ಚಿಕ್ಕಮಗಳೂರು; ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೀಮಂತ ಕಾರ್ಯಕ್ರಮ!
ಚಿಕ್ಕಮಗಳೂರು, ಜುಲೈ 08; ಚಿಕ್ಕಮಗಳೂರು ಜಿಲ್ಲೆಯ ವಿವಿಧ ಸಮಸ್ಯೆಗಳ ಚರ್ಚೆಯ ತಾಣವಾಗಿದ್ದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣ ಬುಧವಾರ ಉನ್ನತ ಅಧಿಕಾರಿಯೊಬ್ಬರ ಸೀಮಂತ ಕಾರ್ಯಕ್ಕೆ ಸಾಕ್ಷಿ ಆಗಿದೆ.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ ಸೀಮಂತ ಕಾರ್ಯ ಸಭಾಂಗಣದಲ್ಲಿ ನಡೆಯಿತು. ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ಕಚೇರಿಯನ್ನು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಾರ್ವಜನಿಕ ವಲಯದಿಂದ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ಸದಾ ಹಲವು ಚರ್ಚೆಗಳು, ಸಂವಾದ, ವೀಡಿಯೋ ಕಾನ್ಪೆರೆನ್ಸ್, ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಗಳಿಗೆ ಸಿಮೀತವಾಗಿದ್ದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಳಿರು ತೋರಣದಿಂದ ಶೃಂಗಾರಗೊಂಡಿತ್ತು.

ಸಭಾಂಗಣದ ಬಾಗಿಲಿನಲ್ಲಿ ರಂಗೋಲಿ. ಸಭಾಂಗಣದೊಳಗೆ ಇಂಪಾದ ಸಂಗೀತ, ಹಣ್ಣು, ದೀಪ, ಹೂಮಾಲೆ ಕಂಡು ಬಂದಿತು. ಜೊತೆಗೆ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಶಾಸ್ತ್ರೋಕ್ತವಾಗಿ ಎಸ್. ಪೂವಿತಾ ಸೀಮಂತ ಕಾರ್ಯ ಮಾಡಿದರು.
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾರನ್ನು ಸರ್ಕಾರ ಮಂಗಳವಾರ ಬೆಂಗಳೂರು ಸಾಮಾಜಿಕ ಭದ್ರತೆ ಹಾಗೂ ಕಂದಾಯ ಪಿಂಚಣಿ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೀಮಂತ ಕಾರ್ಯದ ಸಿದ್ಧತೆ ಮಾಡಿ ಶಾಸ್ತ್ರೋಕ್ತವಾಗಿ ಕಾರ್ಯಕ್ರಮವನ್ನು ಸಹ ನೇರವೇರಿಸಿದರು.
ಎಲ್ಲಾ ಅಧಿಕಾರಿಗಳು ಫೋಟೋಕ್ಕೆ ಫೋಸ್ ನೀಡಿದರು. ಇನ್ನು ಅಧಿಕಾರಿಗಳು ಕಾರ್ಯಕ್ರಮ ನಡೆಯುವ ವೇಳೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಕೋವಿಡ್ ನಿಯಮಗಳನ್ನು ಸಹ ಉಲ್ಲಂಘನೆ ಮಾಡಿದರು.












Click it and Unblock the Notifications