ಬೆಂಗಳೂರು-ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ಅಪಘಾತ: ಬಾಲಕ ಸಾವು
ಚಿಕ್ಕಮಗಳೂರು, ಸೆಪ್ಟೆಂಬರ್ 27: ಡಿವೈಡರ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಸಮೀಪ ನಡೆದಿದೆ. ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ತುಮಕೂರು ಜಿಲ್ಲೆ ಗುಬ್ಬಿ ನಿವಾಸಿ ಏಳು ವರ್ಷದ ಬಾಲಕ ಪ್ರಮೋದ್ ಸಾವನ್ನಪ್ಪಿದ್ದು, 12 ಜನರು ಗಂಭೀರ ಗಾಯಗೊಂಡಿದ್ದಾರೆ.

ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ: ಗಾಯಾಳು ನೆರವಿಗೆ ಬಂದು ಮಾನವೀಯತೆ ಮೆರೆದ ಯುವಕ
ಚಿಕ್ಕಮಗಳೂರು: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ನರಾಳುತ್ತಿದ್ದ ವೇಳೆ ಸ್ಥಳೀಯ ಯುವಕನೊಬ್ಬ ಗಾಯಾಳನ್ನ ಆಸ್ಪತ್ರೆಗೆ ಸೇರಿಸಿ, ಸವಾರನ ಬಳಿ ಇದ್ದ ಹಣವನ್ನ ಮನೆಯವರಿಗೆ ನೀಡಿ ಮಾನವೀಯತೆ ಮೆರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಿಂಗಟಕೆರೆ ರಸ್ತೆಯಲ್ಲಿ ನಡೆದಿದೆ.
ಪಂಚನಹಳ್ಳಿ, ಸಿಂಗಟಗೆರೆ ಮಾರ್ಗ ಮಧ್ಯೆ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಬೈಕ್ ಸವಾರ ಕೃಷ್ಣಮೂರ್ತಿ ಎಂಬುವವರು ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಾ ಬಿದ್ದಿದ್ದರು.

ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಸ್ಥಳೀಯ ಯುವಕ ರಾಜೇಶ್ ನಾಯ್ಕ್, ಕೃಷ್ಣಮೂರ್ತಿ ಅವರಿಗೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಬಳಿಕ ಕೃಷ್ಣಮೂರ್ತಿ ಅವರ ಜೇಬಿನಲ್ಲಿದ್ದ ಮೊಬೈಲ್ ತೆಗೆದುಕೊಂಡು ಅವರ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ 108 ಅಂಬುಲೆನ್ಸ್ ಗೆ ಕರೆ ಮಾಡಿ ಗಾಯಗೊಂಡಿದ್ದ ಕೃಷ್ಣಮೂರ್ತಿ ಅವರನ್ನು ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೃಷ್ಣಮೂರ್ತಿ ಅವರ ಜೇಬಿನಲ್ಲಿದ್ದ 10ಸಾವಿರ ಹಣ ಹಾಗೂ ಡೆಬಿಟ್ ಕಾರ್ಡನ್ನು ಮನೆಯವರಿಗೆ ತಲುಪಿಸುವ ಮೂಲಕ ರಾಜೇಶ್ ನಾಯ್ಕ್ ಮಾನವೀಯತೆ ಮೆರೆದಿದ್ದಾರೆ. ಸಿಂಗಟಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Click it and Unblock the Notifications