ಸಿದ್ದರಾಮಯ್ಯಗೆ ಅವರ ತಪ್ಪು ಎತ್ತಿ ತೋರಿಸಿದಕ್ಕೆ ಸಿಟ್ಟು ಬಂದಿದೆ- ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಸಮರ ಜೋರಾಗಿದೆ. ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ ಸುಧಾಕರ್‌ ಅವರಂತೆ ನಾವು ಸುಳ್ಳು ಹೇಳುವುದಿಲ್ಲ ಎಂದಿದ್ದಾರೆ

ಚಿಕ್ಕಬಳ್ಳಾಪುರ, ಜನವರಿ 30: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯವಾಗಿದ್ದು, ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಕೇಂದ್ರೀಕರಿಸುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಾರ್ಯಕರ್ತರಿಗೆ ಕರೆ ನೀಡಿದರು.

ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷ ಕಾಳೇಗೌಡ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ರೀತಿಯಲ್ಲಿ ನಾವು ಸುಳ್ಳು ಹೇಳುವುದಿಲ್ಲ. ಅವರು ಸುಳ್ಳನ್ನು ಗಟ್ಟಿಯಾಗಿ ಹೇಳುತ್ತಾರೆ. ಅವರು ಸುಳ್ಳು ಹೇಳಿದಷ್ಟೂ ಕಾಂಗ್ರೆಸ್ ಹಿಂದೆ ಹೋಗಲಿದೆ. ಹಾಗಾಗಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧವಾಗಿದ್ದು, ಕಾರ್ಯಕರ್ತರು ಯೋಚಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದರು. ಆದರೆ ಇವರೇ ಅವರ ಮನೆ ಬಾಗಿಲಿಗೆ ಹೋಗಿ ಕರೆತಂದು ಮುಖ್ಯಮಂತ್ರಿ ಮಾಡಿದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದೇ ಇಲ್ಲ ಎಂದರು, ಅದೂ ಆಯಿತು. ಈಗ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ ಅದೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Minister Dr.K Sudhakar Lashes Out At Siddaramaiah

ಸಿದ್ದರಾಮಯ್ಯ ಅವರ ತಪ್ಪು ಈವರೆಗೂ ಯಾರೂ ಎತ್ತಿ ತೋರಿಸಿರಲಿಲ್ಲ, ಆದರೆ ನಾವು ತೋರಿಸಿದ ಕಾರಣಕ್ಕೆ ಅವರಿಗೆ ಸಿಟ್ಟು ಬಂದಿದೆ. ಆರ್‌ಎಸ್‌ಎಸ್‌ನವರು ಹೇಳಿಸಿದ್ದಾರೆ ಎನ್ನುತ್ತಿದ್ದಾರೆ. ನಮ್ಮ ಪಕ್ಷದವರು ಮಾತಾಡಿಸಿದರೆ ತಪ್ಪೇನು, ಅವರನ್ನೂ ಮಾತನಾಡಿಸುತ್ತಿರುವುದು ಕಾಂಗ್ರೆಸ್‌ನವರೇ ಅಲ್ಲವೇ ಎಂದು ತಿರುಗೇಟು ನೀಡಿದರು.

ಯಾರು ಎಲ್ಲಿಂದಲಾದರೂ ಬರಲಿ ಯೋಚನೆ ಬೇಡ, ಜನ ಸಾಮಾನ್ಯರು ಈಗಾಗಲೇ ತೀರ್ಮಾನ ಮಾಡಿದ್ದಾರೆ, ಯಾರು ಏನೇ ಆಮಿಷ ತೋರಿದರೂ ಗೆಲ್ಲೋದು ನಾವೇ, ಯಾರು ಏನೇ ನೀಡಲಿ, ಪಡೆದು ಮತ ಮಾತ್ರ ನಮಗೆ ನೀಡಲಿದ್ದಾರೆ. ಸರ್ವೇ ಮಾಡಿಸಿ ಕಾಂಗ್ರೆಸ್‌ ಅವರಿಗೆ ಅಭ್ಯಾಸ ಇಲ್ಲ, ಸರ್ವೇ ಮಾಡಿಸಿದರೆ ಸತ್ಯಾಂಶ ಏನು ಎಂದು ಗೊತ್ತಾಗಲಿದೆ. ಕಾರ್ಯಕರ್ತರೇ ನಮ್ಮ ಕುಟುಂಬ, ಅವರೊಂದಿಗೆ ಬೆರೆಯುವುದು ನಮ್ಮ ಕರ್ತವ್ಯ, ಇದರಿಂದ ಪರಸ್ಪರ ವಿಶ್ವಾಸ, ನಂಬಿಕೆ ಹೆಚ್ಚಾಗಲಿದೆ. ಎಲ್ಲರಿಗೂ ಅವಕಾಶ ಸಿಗಲಿದೆ, ಹಿಂದೆ ಮುಂದೆ ಆಗಬಹುದಷ್ಟೇ, ನೀವು ಎಲ್ಲೇ ಇದ್ದರೂ ಪಕ್ಷ ಗಮನಿಸುತ್ತಿರುತ್ತದೆ, ನಿಮ್ಮ ಅರ್ಹತೆಯನ್ನು ಪಕ್ಷ ಗುರ್ತಿಸಿ, ಸೂಕ್ತ ಸ್ಥಾನಮಾನ ಕೊಡಿಸುವ ಜವಾಬ್ದಾರಿ ತಮ್ಮದು. ದೂರದ ಬೆಟ್ಟಗಳನ್ನು ನಂಬಲು ಹೋಗಬೇಡಿ ಎಂದು ಸಚಿವರು ಮನವಿ ಮಾಡಿದರು.

ಕಾಂಗ್ರೆಸ್‌ನಲ್ಲಿ ಬೆರಳೆಣಿಕೆಯಷ್ಟು ಮಾತ್ರ ನಾಯಕರಿದ್ದಾರೆ, ಆದರೆ ನಮ್ಮಲ್ಲಿ ನೂರಾರು ಮಂದಿ ನಾಯಕರಿದ್ದಾರೆ. ನೀವು ಇದ್ದ ಕಡೆ ನಿಮ್ಮ ನಾಯಕತ್ವವನ್ನು ನಿರೂಪಿಸಬೇಕು, ರಾಜಕಾರಣ ನಿರಂತರವಾಗಿರುವುದು, ಸರ್ಕಾರದ ಬಗ್ಗೆ ಯಾರೇ ಮಾತನಾಡಲಿ, ನಾಯಕರ ಬಗ್ಗೆ ಮಾತನಾಡಿದರೆ ತೀಕ್ಷ್ಣವಾದ ಉತ್ತರ ನೀಡಬೇಕು, ಯಾವುದೇ ಚುನಾವಣೆಯಲ್ಲಿ ಯಾರೇ ಬರಲಿ ಅಧಿಕಾರ ನಮ್ಮದೇ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 30 ಗ್ರಾಪಂಗಳಿದ್ದು, ಇದರಲ್ಲಿ 29 ಗ್ರಾಪಂಗಳಲ್ಲಿ ನಮ್ಮ ಪಕ್ಷದವರೇ ಅಧ್ಯಕ್ಷರಾಗಿದ್ದಾರೆ. ಅಧಿಕಾರ ವಿಕೇಂದ್ರೀಕರಣ ಮಾಡೋಣ, ಮುಂದಿನ ಐದು ವರ್ಷದಲ್ಲಿ ಒಬ್ಬರಾದರೂ ಸದನಕ್ಕೆ ಹೋಗುವ ಅವಕಾಶ ಇದೆ. ಅಂತಹ ನಾಯಕರು ನಮ್ಮಲ್ಲಿ ಇದ್ದಾರೆ, ಜೊತೆಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವೂ ಸಿಗಲಿದೆ. ಇದರಿಂದ ಎಲ್ಲರಿಗೂ ಅಧಿಕಾರ ಲಭ್ಯವಾಗಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಬೆಳೆಯೋಣ ಎಂದು ಕಾರ್ಯಕರ್ತರಿಗೆ ಸುಧಾಕರ್‌ ಕರೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+