ಕರ್ನಾಟಕ ಚುನಾವಣೆ: ಚಿಕ್ಕಬಳ್ಳಾಪುರ ಜಿಲ್ಲೆಯ ಮತದಾರರ, ಮತಗಟ್ಟೆಗಳ ಸಂಪೂರ್ಣ ವಿವರ
ಚಿಕ್ಕಬಳ್ಳಾಪುರ, ಮಾರ್ಚ್ 31: 2023 ವಿಧಾನಸಭಾ ಚುನಾವಣೆ ಮೇ 10ಕ್ಕೆ ನಿಗದಿಯಾಗಿದ್ದು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನತದಂತೆ ಜಿಲ್ಲೆಯಾದ್ಯಂತ ಈಗಾಗಲೇ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿನ ಮತದಾರರ ಬಗ್ಗೆ ಹಾಗೂ ಮತಗಟ್ಟೆಗಳ ಬಗ್ಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 1,281 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 233 ಮತಗಟ್ಟೆಗಳು ನಗರ ಪ್ರದೇಶದಲ್ಲಿ ಹಾಗೂ 1048 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿ ಇರಲಿವೆ. 440 ಮತಗಟ್ಟೆಗಳು ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ ಎಂದು ತಿಳಿಸಿದರು.

ಪ್ರತಿ ಮತಗಟ್ಟೆಗೆ ಜಿಲ್ಲೆಯಲ್ಲಿ ಸರಾಸರಿ 812 ಮತದಾರರು ಇರಲಿದ್ದಾರೆ, ಗರಿಷ್ಠ 1,500 ಮತದಾರರು ಇರುತ್ತಾರೆ. ಜಿಲ್ಲೆಯಲ್ಲಿನ 1,281 ಮತಗಟ್ಟೆಗಳ ಪೈಕಿ ಶೇ 50ರಷ್ಟು ಅಂದರೆ 640 ಮತಗಟ್ಟೆಗಳಲ್ಲಿ ವೆಬ್ಕ್ಯಾಸ್ಟಿಂಗ್ ಮಾಡಿ ನಿಗಾ ವಹಿಸಲಾಗುತ್ತದೆ. ಚುನಾವಣೆ ಘೋಷಣೆಯಾದ ದಿನದಿಂದ ಎಲ್ಲ ತರಹದ ಧ್ವನಿವರ್ಧಕಗಳನ್ನು ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ನಿಷೇಧಿಸಲಾಗಿದೆ. ಚುನಾವಣೆಗೆ ವೆಚ್ಚ ನಿರ್ವಹಣೆಗೆ ಸಂಬಂಧಿಸಿದಂತೆ ತಂಡಗಳನ್ನು ಸಹ ರಚಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಟ್ರೋಲ್ ಪ್ರೀ ದೂರವಾಣಿ 1950 ಹಾಗೂ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂಗಳನ್ನು ತೆರೆಲಾಗಿದೆ. ಸಾರ್ವಜನಿಕರು ಸಹ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಮಟ್ಟದ ಸಭೆ, ಸಮಾರಂಭ, ವಾಹನಗಳಿಗೆ ಅನುಮತಿ ನೀಡಲು ಜಿಲ್ಲಾ ಮಟ್ಟದ ಏಕಗವಾಕ್ಷಿ ತಂಡ ಮತ್ತು ವಿಧಾನಸಭಾ ಕ್ಷೇತ್ರದ ಮಟ್ಟದ ಸಭೆ, ಸಮಾರಂಭ ಮತ್ತು ವಾಹನಗಳಿಗೆ ಅನುಮತಿ ನೀಡಲು ವಿಧಾನಸಭಾ ಮಟ್ಟದಲ್ಲಿ ಏಕಗವಾಕ್ಷಿ ತಂಡಗಳನ್ನು ರಚಿಸಲಾಗಿದೆ. ಇಲ್ಲಿಂದ ಅನುಮತಿಗಳನ್ನು ಪಡೆಯಬೇಕು ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಮತದಾರರ ವಿವರ
ಜಿಲ್ಲೆಯಲ್ಲಿ ಒಟ್ಟು 10,40,526 ಮತದಾರರಿದ್ದು, 5,15,406 ಪುರುಷ ಮತದಾರರು, 5,25,014 ಮಹಿಳಾ ಮತದಾರರು, 106 ತೃತೀಯ ಲಿಂಗಿ ಮತದಾರರಿದ್ದಾರೆ. ಅದರಲ್ಲಿ 80ವರ್ಷಕ್ಕಿಂತ ಮೇಲ್ಪಟ್ಟ 24,183 ಮತದಾರರು, 25,887 ಯುವ ಮತದಾರರು ಹಾಗೂ 16,747 ವಿಶೇಷ ಚೇತನ ಮತದಾರರಿದ್ದಾರೆ. ವಿಶೇಷ ಚೇತನರು ಹಾಗೂ 80ವರ್ಷಕ್ಕಿಂತ ಮೇಲ್ಪಟ್ಟವರು ನಿಗದಿತ ನಮೂನೆಯಲ್ಲಿ ಆಯ್ಕೆ ಮಾಡಿಕೊಂಡರೆ ಮನೆಯಲ್ಲೇ ಮತದಾನ ಮಾಡಲು ಆಯೋಗ ಅವಕಾಶ ಮಾಡಿಕೊಟ್ಟಿದೆ. ಇಲ್ಲವೇ ಮತಗಟ್ಟೆಗೆ ಬರಲು ಬಯಸಿದರೆ ಅಲ್ಲೇ ಮತದಾನ ಮಾಡಬಹುದು. ಈ ಕುರಿತು ನಮ್ಮ ಚುನಾವಣೆಯ ಸಿಬ್ಬಂದಿ ಅಗತ್ಯ ಸೌಲಭ್ಯ ಕಲ್ಪಿಸಲಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚುನಾವಣೆ ಭದ್ರತೆ
ಇನ್ನು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಆಂಧ್ರಪ್ರದೇಶದ ಜೊತೆ ಗಡಿಹಂಚಿಕೊಂಡಿವೆ. ಈ ಹಿನ್ನೆಲೆಯಲ್ಲಿ 17 ಚೆಕ್ಪೋಸ್ಟ್ಗಳನ್ನು ರೂಪಿಸಲಾಗಿದೆ. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ಗಳ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ₹50 ಸಾವಿರಕ್ಕಿಂತ ಹೆಚ್ಚು ಹಣವನ್ನು ದಾಖಲೆ ಇಲ್ಲದೆ ಸಾಗಿಸಿದರೆ ವಶಕ್ಕೆ ಪಡೆಯಲಾಗುವುದು. ₹10 ಲಕ್ಷಕ್ಕಿಂತ ಹೆಚ್ಚು ಇದ್ದರೆ ಅದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಗೆ ಸೂಚನೆಗಳನ್ನು ನೀಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಯಾವ ರೀತಿ ವಹಿವಾಟು ಆಗಿತ್ತು. ಈ ಬಾರಿ ಯಾವ ರೀತಿ ಇದೆ ಎನ್ನುವ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ನಿಗಾವಹಿಸುವಂತೆ ನಿರ್ದೇಶನ ನೀಡಿದ್ದೇವೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 10 ಮತಗಟ್ಟೆಗಳಂತೆ ಒಟ್ಟು 50 ಮತಗಟ್ಟೆಗಳನ್ನು ಮಾದರಿಯಾಗಿ ರೂಪಿಸಲಾಗುವುದು. ಚಿತ್ರಕಲಾ ಶಿಕ್ಷಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗುವುದು. ಮತದಾರರಿಗೆ, ಸಾರ್ವಜನಿಕರಿಗೆ ಯಾವುದೇ ಅಭ್ಯರ್ಥಿಗಳು ಉಡುಗೊರೆ, ಹಣ, ಮದ್ಯ ಮತ್ತಿತರ ವಸ್ತುಗಳನ್ನು ವಿತರಿಸುವುದು ಕಂಡು ಬಂದಲ್ಲಿ ಕೂಡಲೇ cvigil ಆಪ್ ಮೂಲಕ ದೂರು ಸಲ್ಲಿಸಬಹುದು. ದೂರು ಸಲ್ಲಿಸಿದ 100 ನಿಮಿಷಗಳಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಿದರು.












Click it and Unblock the Notifications