ಚಿಕ್ಕಬಳ್ಳಾಪುರದ ಐದು ಶಾಲೆಗಳು ಪಿಎಂಶ್ರೀ ಯೋಜನೆಗೆ ಆಯ್ಕೆ: 53 ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ
ಚಿಕ್ಕಬಳ್ಳಾಪುರ, ಆಗಸ್ಟ್ 09: ಶಾಲೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂಶ್ರೀ ಯೋಜನೆ ಆಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಐದು ಸರಕಾರಿ ಶಾಲೆಗಳು ಆಯ್ಕೆಯಾಗಿವೆ. ಈ ಪೈಕಿ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹ ಒಂದಾಗಿದೆ.
ಪಿಎಂಶ್ರೀ ಯೋಜನೆ ಅಡಿ ರಾಜ್ಯದ 129 ಶಾಲೆಗಳು ಆಯ್ಕೆಯಾಗಿದ್ದು, ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಗ್ರಾಮದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಗೌರಿಬಿದನೂರು ತಾಲೂಕಿನ ಕೋಟೆಯಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬಾಗೇಪಲ್ಲಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಹಾಗೂ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಪಟ್ಟಿಯಲ್ಲಿವೆ.

ಈ ಎಲ್ಲ ಶಾಲೆಗಳಿಗೆ ಕೇಂದ್ರ ಸರ್ಕಾರ ಮುಂದಿನ 5 ವರ್ಷ ಕಾಲ ಪಿಎಂಶ್ರೀ ಯೋಜನೆ ಅಡಿ ವಿಶೇಷ ಅನುದಾನ ನೀಡಿ, ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ಮಾದರಿ ಶಾಲೆಗಳನ್ನಾಗಿ ರೂಪಿಸಲಿದೆ.
ಸರಕಾರಿ ಶಾಲೆಗಳ ಸುಧಾರಣೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂಶ್ರೀ ಯೋಜನೆಗೆ ಗುಡಿಬಂಡೆ ತಾಲೂಕಿನ ಒಂದು ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ಐದು ಶಾಲೆಗಳು ಆಯ್ಕೆಯಾಗಿದ್ದು, ಈ ಶಾಲೆಗಳು ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನು ಸಹ ಮೀರಿಸುವಂತೆ ಮಾದರಿ ಶಾಲೆಗಳಾಗಿ ಬದಲಾಗಳಾಗುವ ನಿರೀಕ್ಷೆ ಇದೆ.
'ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ' ಹೆಸರಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಯ ಲಾಭ ಗುಡಿಬಂಡೆ ತಾಲೂಕಿಗೂ ತಲುಪಲಿದೆ. ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದ ಅಂದರೆ 1905ರಲ್ಲಿ ಪ್ರಾರಂಭವಾದ ಇತಿಹಾಸವನ್ನು ಹೊಂದಿರುವ ಶಾಲೆಯು ಇಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಮಾದರಿ ಶಾಲೆಯಾಗಿ ಮುಂದಿನ 5 ವರ್ಷಗಳಲ್ಲಿ ಸುತ್ತಮುತ್ತಲಿನ ಶಾಲೆಗಳಿಗೆ ಮಾದರಿಯಾಗಿ ಅಭಿವೃದ್ಧಿಯಾಗಲಿದೆ.
ಪಿಎಂಶ್ರೀ ಯೋಜನೆಗೆ ಆಯ್ಕೆಯ ಅರ್ಹತೆ ಏನೇನು ?
ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಲು ಶಾಲೆ ಸ್ವಂತ ಕಟ್ಟಡ ಹೊಂದಿರಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರಬೇಕು. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ತಡೆಗೋಡೆ, ಅಗ್ನಿ ಸುರಕ್ಷತೆ, ಗ್ರಂಥಾಲಯ, ವಿದ್ಯುತ್ ಸೌಲಭ್ಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ವ್ಯವಸ್ಥೆ ಸೇರಿ ಎಲ್ಲ ಮೂಲ ಸೌಲಭ್ಯ ಹೊಂದಿರಬೇಕು ಎಂಬ ಮಾನದಂಡಗಳಿವೆ. ಸ್ಥಳೀಯ ಗ್ರಾಪಂ: ಅನುಮೋದನೆಯೊಂದಿಗೆ 2022ರಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.

ಜಿಲ್ಲೆಯಲ್ಲಿ 5 ಮಾದರಿ ಪಿಎಂಶ್ರೀ ಶಾಲೆಗಳು
ದೇಶದಲ್ಲಿ ಈಗಾಗಲೇ 14 ಸಾವಿರ ಶಾಲೆಗಳನ್ನು ಪಿಎಂಶ್ರೀ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಗ್ರಾಮದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಗೌರಿಬಿದನೂರು ತಾಲೂಕಿನ ಕೋಟೆಯಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬಾಗೇಪಲ್ಲಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಹಾಗೂ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಯೋಜನೆಗೆ ಆಯ್ಕೆಯಾಗಿವೆ.
ಈ ಶಾಲೆಗಳಲ್ಲಿ ಮೂಲ ಸೌಕರ್ಯ, ಗುಣಮಟ್ಟದ ಬೋಧನೆ, ಕಲಿಕಾ ಉಪಕರಣಗಳು ಸೇರಿದಂತೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಮಾದರಿಯಾದ ಸೌಲಭ್ಯಗಳಿರಲಿವೆ. ಈ ಶಾಲೆಗಳನ್ನು ಮಾದರಿ ಶಾಲೆ ಎಂದು ಗುರುತಿಸಲಾಗುತ್ತದೆ. ಇಲ್ಲಿ ಕೈಗೊಳ್ಳುವ ಅಭಿವೃದ್ಧಿ ಇತರ ಶಾಲೆಗಳಿಗೂ ಮಾದರಿಯಾಗಬೇಕು ಎಂಬ ವಿಚಾರದ ಹಿನ್ನೆಲೆಯಿದೆ. ಇಲ್ಲಿ ಎಲ್ಕೆಜಿ ತರಗತಿಗಳು ಆರಂಭಗೊಳ್ಳಲಿದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸೌಲಭ್ಯಗಳಿರಲಿವೆ. ಕೇಂದ್ರ ಸರಕಾರದಿಂದ ಹಂತ ಹಂತವಾಗಿ ಅನುದಾನ ದೊರೆಯಲಿದೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಶಾಲೆಗಳನ್ನು ಆಯ್ಕೆಮಾಡಲಾಗಿದ್ದು, 5 ಶಾಲೆಗಳಿಂದ ಅಂದಾಜು 3 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಕೇಂದ್ರ ಸರಕಾರ ಎಷ್ಟು ಅನುದಾನ ಬಿಡುಗಡೆ ಮಾಡಲಿದೆ ಎಂಬ ಆಧಾರದ ಮೇಲೆ ಶಾಲೆಗಳು ಅಭಿವೃದ್ಧಿಯ ಪಥದಲ್ಲಿ ಸಾಗಲಿವೆ.
ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿದೆ?
ಪ್ರಸ್ತುತ ತಾಲೂಕಿನ ಸೋಮೇನಹಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯ ತನಕ ಬಾಲಕರು 132 ಹಾಗೂ ಬಾಲಕಿಯರು 137 ಒಟ್ಟು 269 ವಿದ್ಯಾರ್ಥಿಗಳು ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಾದರಿ ಶಾಲೆಯಾಗಿ ಅಭಿವೃದ್ಧಿಗೊಂಡ ನಂತರ ಪ್ರತಿ ತರಗತಿಯಲ್ಲೂ ಕನಿಷ್ಠ 100 ಜನ ವಿದ್ಯಾರ್ಥಿಗಳು ದಾಖಲಾಗುವ ಸಂಭವ ಇದೆ ಎಂದು ಸ್ಥಳೀಯ ಮುಖಂಡರು ಹಾಗೂ ಎಸ್ಡಿಎಂಸಿ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನಿದು ಪಿಎಂಶ್ರೀ ಯೋಜನೆ?
ಸರಕಾರಿ ಶಾಲೆಗಳ ಮಕ್ಕಳಿಗೆ ಸಂತೋಷಮಯವಾದ ವಾತಾವರಣ, ಕಲಿಕಾ ಸಾಮಗ್ರಿಗಳು, ಉತ್ತಮ ಮೂಲ ಸೌಕರ್ಯ ಒದಗಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಬದಲಾಯಿಸುವುದು ಈ ಯೋಜನೆಯ ಉದ್ದೇಶ. ಕೌಶಲ್ಯದ ಕಲಿಕೆ, ಮಕ್ಕಳ ಬುದ್ಧಿಮತ್ತೆ ವಿಕಸನ, ಪ್ರಶ್ನೆ ಕೇಳುವ ಹವ್ಯಾಸ ಬೆಳೆಸುವುದು, ಆಟದೊಂದಿಗೆ ಪಾಠ ಕಲಿಸುವ ಚಿಂತನೆ ಯೋಜನೆಯ ಹಿಂದೆ ಇದೆ. ಶಾಲೆಗಳನ್ನು ಹಸಿರು ಶಾಲೆಗಳನ್ನಾಗಿಸಿ ಸೋಲಾರ್ ಅಳವಡಿಕೆ, ಸುಂದರ ಉದ್ಯಾನವನ, ತ್ಯಾಜ್ಯ ನಿರ್ವಹಣೆಗೆ ಅವಕಾಶವಿರಲಿದೆ. ಜತೆಗೆ ಮಕ್ಕಳ ಕಲಿಕೆಗೆ ವಿಶೇಷ ಗಮನ, ಹಳೆಯ ವಿದ್ಯಾರ್ಥಿಗಳಿಂದ ಶಾಲೆಯ ಅಭಿವೃದ್ಧಿಗೆ ನೆರವು ಪಡೆಯುವಂತೆ ಮಾಡುವುದು. ಡಿಜಿಟಲ್ ಲೈಬ್ರರಿ ಸೇರಿದಂತೆ ಅತ್ಯಾಧುನಿಕ ಕಲಿಕೆ ಉಪಕರಣಗಳನ್ನು ಇಲ್ಲಿ ಒದಗಿಸಲಾಗುತ್ತದೆ.

ಪಿಎಂಶ್ರೀ ಶಾಲೆಗಳ ವಿಶೇಷತೆ ಏನು?
*21ನೇ ಶತಮಾನ ಆಧುನಿಕ ಕೌಶಲ್ಯಕ್ಕೆ ಆದ್ಯತೆ.
*ನವೀನ ಬೋಧನಾ ಶಾಸ್ತ್ರ ಮತ್ತು ತಂತ್ರಜ್ಞಾನ.
*ಸರ್ಕಾರಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳು.
*ಪರಿಸರ ಸ್ನೇಹಿ ವ್ಯವಸ್ಥೆ ಹಾಗೂ ಇಂಧನ ಕ್ಷಮತೆ ಮೂಲಸೌಕರ್ಯ.
*ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು, ಕೌಶಲ್ಯ ಅಭಿವೃದ್ಧಿ ಪಡಿಸುವ ಗುರಿ.
*ಆಧುನಿಕ ತಂತ್ರಜ್ಞಾನ, ಸ್ಮಾರ್ಟ್ ತರಗತಿಗಳು.
*ಕ್ರೀಡೆ ಹಾಗೂ ಪಠ್ಯೇತ ಚಟುವಟಿಕೆಗಳಿಗೆ ಮೂಲಸೌಕರ್ಯ.
*ಉತ್ತಮ ದರ್ಜೆಯ ಗ್ರಂಥಾಲಯ.
*ಕಲಾ ಕೊಠಡಿಗಳು ಸೇರಿದಂತ ಮೂಲಭೂತ ಸೌಕರ್ಯಗಳು ಇರಲಿವೆ.












Click it and Unblock the Notifications