ಚಿಕ್ಕಬಳ್ಳಾಪುರದಲ್ಲಿ ಪ್ರವಾಸಿಗರಿಂದ ಹೆಚ್ಚಿದ ಟ್ರಾಫಿಕ್: ಸಾರ್ವಜನಿಕರ ಓಡಾಟಕ್ಕೆ ತೊಂದರೆ- ಪಾರ್ಕಿಂಗ್ ಇಲ್ಲದೆ ಸವಾರರು ಹೈರಾಣ!
ಚಿಕ್ಕಬಳ್ಳಾಪುರ ನವೆಂಬರ್ 10: ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ನಗರದ ಸುತ್ತ ಮುತ್ತಲಿನ ಪ್ರವಾಸಿ ತಾಣಗಳತ್ತ ಬಾರಿ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ಚಿಕ್ಕಬಳ್ಳಾಪುರ ನಗರದ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಇದರ ಪ್ರಭಾವವು ನೇರವಾಗಿ ಸ್ಥಳೀಯ ಸಾರ್ವಜನಿಕರ ಮೇಲೆ ಬಿದ್ದಿದ್ದು ಸುಗಮ ಓಡಾಟಕ್ಕೂ ಕಷ್ಟವಾಗಿದೆ.
ಹೌದು... ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆ, ಬಿಬಿ ರಸ್ತೆ, ನಂದಿ ರಸ್ತೆ, ಮುದ್ದೇನಹಳ್ಳಿ ಹಾಗೂ ಹನುಮಂತಪುರದ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಸಾಲು ಸಾಲು ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಜಿಲ್ಲಾ ಕೇಂದ್ರದಲ್ಲಿ ಜನರು ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ವಾರಂತ್ಯದ ರಜೆ. ರಜೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದು ಸ್ಥಳೀಯರ ಮೇಲೆ ನೇರ ಪರಿಣಾಮ ಬೀರಿದೆ. ಅಲ್ಲದೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವ್ಯಾವ ಸ್ಥಳದಲ್ಲಿ ಟ್ರಾಫಿಕ್ ಜಾಮ್?
ಚಿಕ್ಕಬಳ್ಳಾಪುರ ಜಿಲ್ಲೆಯ ಈಶ ಫೌಂಡೇಶನ್ ಆದಿಯೋಗಿ ಧ್ಯಾನ ಕೇಂದ್ರ ನಂದಿ ಬೆಟ್ಟ ರಂಗಸ್ಥಳ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಜನ್ಮಸ್ಥಳ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪ್ರವಾಸಿ ತಾಣಗಳನ್ನು ನೋಡಲು ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಪ್ರಾಕೃತಿಕ ರಮ್ಯಧಾಮ ನಂದಿ ಬೆಟ್ಟ ಅರಣ್ಯ ಪ್ರದೇಶದಲ್ಲಿ ತಲೆಯೆತ್ತಿರುವ 112 ಅಡಿಗಳ ಎತ್ತರದ ಆದಿಯೋಗಿಯನ್ನು ನೋಡಲು ದೇಶ- ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದರಿಂದ ದ್ವಿಚಕ್ರ ವಾಹನ, ಕಾರು, ಬಸ್ಸು ಸೇರಿ ವಾಹನಗಳ ಸಂಚಾರ ಜಾಸ್ತಿಯಾಗಿದ್ದು ಪ್ರಸ್ತುತ ಇರುವ ಕಿರಿದಾದ ರಸ್ತೆಗಳಲ್ಲಿ ಸಂಚಾರ ದುಸ್ತರವಾಗಿದೆ.
ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗವಾಗಿ ಆದಿ ಯೋಗಿ ಧ್ಯಾನ ಕೇಂದ್ರಕ್ಕೆ ತೆರಳುವ ಅಂಕಣಗೊಂದಿ ರಸ್ತೆ, ದಿನ್ನೆಹೊಸಹಳ್ಳಿ ಮತ್ತು ಹನುಮಂತಪುರ ರಸ್ತೆ, ರಾಷ್ಟ್ರೀಯ ದಾರಿ 44 ಮೂಲಕ ಹಾದು ಹೋಗುವ ರಸ್ತೆ ಶನಿವಾರ ಮತ್ತು ಭಾನುವಾರ ಹಾಗೂ ವಿಶೇಷ ಹಬ್ಬಗಳ ಸಂದರ್ಭಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಒಂದೆರಡು ಗಂಟೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ವಾಹನಗಳು ಆಮೆಗತಿಯಲ್ಲಿ ಸಾಗಬೇಕಾಗಿದೆ ಅದರಲ್ಲೂ ಕಿರಿದಾದ ರಸ್ತೆಗಳಲ್ಲಿ ಅಧಿಕ ಪ್ರಮಾಣದಲ್ಲಿ ವಾಹನಗಳು ಸಂಚಾರ ಮಾಡುವುದರಿಂದ ಸಮಸ್ಯೆ ಮತ್ತಷ್ಟು ಕಿರಿ ಕಿರಿ ತಂದೊಡ್ಡಿದೆ.
ಲಕ್ಷಗಟ್ಟಲೆ ಪ್ರವಾಸಿಗರ ಭೇಟಿ :-
ಮುಖ್ಯವಾಗಿ ವಿಶೇಷ ಹಬ್ಬಗಳಾದ ದಸರಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಂದಿ ಬೆಟ್ಟಕ್ಕೆ ಬರೋಬ್ಬರಿ 1.59 ಲಕ್ಷ ಜನ, ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯಕ್ಕೆ ಹೊಂದಿರುವ ನಂದಿ ಗ್ರಾಮಕ್ಕೆ 87.50 ಲಕ್ಷ ಜನ ಮುದ್ದೇನಹಳ್ಳಿಗೆ 50 ಸಾವಿರಕ್ಕೂ ಅಧಿಕ ಜನ ರಂಗಸ್ಥಳಕ್ಕೆ 43 ಸಾವಿರ ಪ್ರವಾಸಿಗರು ಸೇರಿ, ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಲಕ್ಷಾಂತರ ಪ್ರವಾಸಿಗರು ಇಲ್ಲಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಅದರಲ್ಲೂ ಬಹುತೇಕರ ನೆಚ್ಚಿನ ತಾಣ ಈಶ ಆದಿಯೋಗಿ ದ್ಯಾನ ಕೇಂದ್ರವಾಗಿದೆ ವಾಹನ ಸಂದಣಿಗೆ ತಕ್ಕಂತೆ ರಸ್ತೆ ಇಲ್ಲದೆ ಇರುವುದರಿಂದ ಹಾಗೂ ಸೂಕ್ತ ಪಾರ್ಕಿಂಗ್ ವ್ಯವಸ್ತೆ ಇಲ್ಲದೆ ಇರುವುದರಿಂದ ಪ್ರವಾಸಿಗರ ಜೊತೆಗೆ ಸ್ಥಳೀಯರು ತೊಂದರೆ ಅನುಭವಿಸುವಂತಹಾಗಿದೆ.
ಅಭಿವೃದ್ಧಿಗೊಳ್ಳದ ರಸ್ತೆಗಳು:-
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗದ 69 ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸುತ್ತಿದ್ದು ಹೊರವಲಯವನ್ನು ಬಿಟ್ಟು ನಗರದ ಹೃದಯ ಭಾಗದಲ್ಲಿ ವಾಹನಗಳ ಸಂಚರಿಸುವಂತಾಗಿದೆ. ಹದಗೆಟ್ಟ ರಸ್ತೆ, ಕೆಲವು ಕಡೆ ಡಾಂಬರು ಕಿತ್ತು ಬಂದಿರುವುದರಿಂದ ಬಹುತೇಕರು ಅಭಿವೃದ್ಧಿ ಹೊಂದಿರುವ ಒಂದೇ ಮಾರ್ಗವನ್ನು ನೆಚ್ಚಿಕೊಳ್ಳುವಂಥಾಗಿದೆ. ಇನ್ನು ನಗರದಲ್ಲಿ ಸದಾ ಜನಸಂದಣಿಯಿಂದ ಕೂಡಿರುವ ಬಜಾರ್ ರಸ್ತೆ ಮತ್ತು ಗಂಗಮ್ಮನ ಗುಡಿ ರಸ್ತೆಗಳು ತುಂಬಾ ಕಿರಿದಾಗಿದ್ದು ಇಲ್ಲಿಯೂ ಸಮಸ್ಯೆ ವಿಭಿನ್ನವಾಗಿಲ್ಲ.
ಸಂಚಾರ ನಿಯಮಗಳ ಉಲ್ಲಂಘನೆ -
ಟ್ರಾಫಿಕ್ ಜಾಮ್ ಸಮಸ್ಯೆಯ ಜೊತೆಗೆ ಬಹುತೇಕ ವಾಹನ ಸವಾರರು ಸಂಚಾರ ನಿಯಮಗಳ ಪಾಲನೆಯಲ್ಲಿ ಅಸಡ್ಡೆ ತೋರುತ್ತಿದ್ದಾರೆ. ಬಹುತೇಕ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದಾರೆ, ನಿಗದಿತ ಸ್ಥಳಗಳಲ್ಲಿ ದ್ವೀಚಕ್ರ ವಾಹನಗಳನ್ನು ನಿಲ್ಲಿಸದ ಕಾರಣ, ಕಾರುಗಳಿಗಾಗಿ ಸೂಚಿಸಲಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲಾಗದೆ ರಸ್ತೆ ಬದಿಯಲ್ಲಿ ಅಡ್ಡಾ ದಿಡ್ಡಿ ನಿಲ್ಲಿಸುವವರ ಮೇಲೆ ದಂಡಾಸ್ತ್ರ ಪ್ರಯೋಗ ಮಾಡುತ್ತಾರೆ ಎಂಬ ಆರೋಪವು ಕೇಳಿ ಬಂದಿದೆ.
ಪೊಲೀಸರು ಅಳವಡಿಸಿರುವ ಸೂಚನಾ ಫಲಕಗಳ ಕಡೆಗೆ ಚಾಲಕರ ಗಮನವಿಲ್ಲ, ಮತ್ತೊಂದೆಡೆ ಬಹುತೇಕ ರಸ್ತೆ ಬದಿ ಅಂಗಡಿಗಳ ವ್ಯಾಪಾರಸ್ತರು ಫುಟ್ ಫಾತ್ ಒತ್ತುವರಿ ಮಾಡಿಕೊಂಡಿದ್ದು, ಪುಟ್ಬಾತ್ ನಲ್ಲಿ ಓಡಾಡಲಾಗದೆ ಜನರು ಬಿಟ್ಟು ರಸ್ತೆಯಲ್ಲಿ ಓಡಾಡುವಂತಾಗಿದ್ದು ಅಪಘಾತಕ್ಕೆ ತುತ್ತಾಗುವ ಭೀತಿಯಲ್ಲಿ ಸಂಚರಿಸುವಂತಾಗಿದೆ. ಇದ್ಯಾವುದರ ಬಗ್ಗೆಯೂ ಕೂಡ ಸಂಬಂಧ ಪಟ್ಟ ಇಲಾಖೆಯವರು ಸೂಕ್ತ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ, ಸಂಚಾರ ದಟ್ಟನೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಬದಲು ಕೇವಲ ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ದಂಡ ವಿಧಿಸುವುದಕ್ಕೆ ಸೀಮಿತವಾಗಿದ್ದರೆ ಎಂಬ ಆರೋಪವು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.












Click it and Unblock the Notifications