ಶಿಡ್ಲಘಟ್ಟದ ಭಕ್ತರಹಳ್ಳಿ ಶಾಲೆಯ ಗ್ರಂಥಾಲಯಕ್ಕೆ ಜರ್ಮನಿ ಅನುದಾನ
ಶಿಡ್ಲಘಟ್ಟ, ಆಗಸ್ಟ್ 9 : ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿಗೂ ಜರ್ಮನಿಗೂ, ಬರೋಡಾ ರಾಜ ಮನೆತನಕ್ಕೂ ಎಲ್ಲಿಂದ ಎಲ್ಲಿಯ ಸಂಬಂಧ? ಬೆಟ್ಟದ ನೆಲ್ಲಿಕಾಯಿ ಹಾಗೂ ಸಮುದ್ರದ ಉಪ್ಪಿಗೂ ಇರುವ ಸಂಬಂಧದಂತೆ ಎಂಬುದು ಬುಧವಾರ ಸಾಬೀತಾಯಿತು ನೋಡಿ.
ಭಕ್ತರಹಳ್ಳಿಯ ಬಿ.ಎಂ.ವಿ.ಎಜುಕೇಷನಲ್ ಟ್ರಸ್ಟ್ ಶಾಲೆ ಆವರಣದಲ್ಲಿ ಕಾನ್ಸುಲೇಟ್ ಜನರಲ್ ಆಫ್ ಜರ್ಮನಿಯ ಆರ್ಥಿಕ ನೆರವಿನಿಂದ ನಿರ್ಮಾಣ ಆಗಿರುವ ಗ್ರಂಥಾಲಯ ಹಾಗೂ ಪ್ರಯೋಗಾಲಯ ಉದ್ಘಾಟನೆ ಮಾಡಲಾಯಿತು.
ಇಂಗ್ಲಿಷ್ ಭಾಷೆಯಿಂದ ಉಳಿದುಕೊಂಡ ಕನ್ನಡ ಸರಕಾರಿ ಶಾಲೆಯಿದು!
ಈ ಸಂದರ್ಭದಲ್ಲಿ ಕಾನ್ಸುಲ್ ಜನರಲ್ ಆಫ್ ಜರ್ಮನಿ ಮಾರ್ಗಿಟ್ ಹೆಲ್ ವಿಗ್ ಬೊಟ್ಟೆ ಮಾತನಾಡಿ, ಈ ಶಾಲೆಯ ಮಕ್ಕಳನ್ನು ನೋಡಿದರೆ ಖುಷಿ ಆಗುತ್ತದೆ. ತೋಟಗಾರಿಕೆ ತಜ್ಞ- ಜರ್ಮನಿಯ ಕೃಂಬಿಗಲ್ ಇಲ್ಲಿ ಸುಂದರವಾದ ಕಂಬಗಳನ್ನು ನಿರ್ಮಿಸಿರುವುದು ಗೊತ್ತಾದ ಮೇಲೆ ಇನ್ನೂ ಹೆಚ್ಚು ಸಂತೋಷವಾಯಿತು. ಇಂದಿನ ಈ ಕಾರ್ಯಕ್ರಮ ನಮ್ಮ ನಂಟನ್ನು ಇನ್ನಷ್ಟು ಗಟ್ಟಿ ಮಾಡಿದೆ ಎಂದರು.
ಮಾಹಿತಿ ತಂತ್ರಜ್ಞಾನ ಮುಂದುವರಿದ ಹಾಗೆಲ್ಲ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಆದರೂ ಪುಸ್ತಕ ಓದಿಗೆ ಅದು ಸರಿಸಾಟಿಯಿಲ್ಲ. ಗ್ರಂಥಾಲಯ ಮತ್ತು ವಿಜ್ಞಾನದ ಪ್ರಯೋಗಾಲಯಗಳ ಸದ್ಬಳಕೆ ಆಗಬೇಕು ಎಂದು ಬೊಟ್ಟೆ ಹೇಳಿದರು.
ಬರೋಡದ ರಾಜಮನೆತನದ ರಾಯಲ್ ಹೆರಿಟೇಜ್ ಗ್ರೀನ್ ಮಿಷನ್ ಮುಖ್ಯಸ್ಥ ಜಿತೇಂದ್ರಸಿಂಗ್ ಜಿ ಗಾಯಕ್ವಾಡ್ ಮಾತನಾಡಿ, ಬರೋಡಾ ಸಂಸ್ಥಾನಕ್ಕೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಬರೋಡಾದಲ್ಲಿ ಮೈಸೂರು ಜಯಚಾಮರಾಜೇಂದ್ರ ಒಡೆಯರ್ ಹೆಸರಿನ ರಸ್ತೆಯಿದ್ದರೆ, ಮೈಸೂರಿನಲ್ಲಿ ಸಯ್ಯಾಜಿರಾವ್ ಗಾಯಕ್ವಾಡ್ ಮಹಾರಾಜರ ಹೆಸರಿನ ರಸ್ತೆಯಿದೆ. ಈ ಬಾಂಧವ್ಯ ಭಕ್ತರಹಳ್ಳಿಗೂ ವಿಸ್ತರಿಸಿದೆ ಎಂದರು.
ರವಿವರ್ಮ ಚಿತ್ರಿಸಿರುವ ಚಾಮರಾಜೇಂದ್ರ ಒಡೆಯರ್ ಮತ್ತು ಸಯ್ಯಾಜಿರಾವ್ ಗಾಯಕ್ವಾಡ್ ಮಹಾರಾಜರ ಚಿತ್ರವನ್ನು ಮತ್ತು ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ನೀಡಲು ಸಹಾಯಧನ ಹಾಗೂ ಬರೋಡಾ ಸಂಸ್ಥಾನದ ಕುರಿತ ಪುಸ್ತಕವನ್ನು ಜೀತೇಂದ್ರಸಿಂಗ್ ಜಿ ಗಾಯಕ್ವಾಡ್ ಶಾಲೆಗೆ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರು ಶಾಲೆ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ನಾರಾಯಣ ಮಾನೆ ಅವರು ಶಾಲೆಗೆ ಹತ್ತು ಕಂಪ್ಯೂಟರ್ ನೀಡಿದರು.