'ಪುಲಿ' ವಿಜಯ್, ಸಮಂತಾ ಮನೆ ಮೇಲೆ ಐಟಿ ದಾಳಿ ಏಕೆ?
ಚೆನ್ನೈ, ಸೆ.30: ತಮಿಳು ಚಿತ್ರ ರಸಿಕರ ಬಹುನಿರೀಕ್ಷಿತ ಸಿನಿಮಾ 'ಪುಲಿ' ಬಿಡುಗಡೆಗೆ ಸಿದ್ಧವಾಗಿರುವ ಸಂದರ್ಭದಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 'ಪುಲಿ' ಚಿತ್ರ ತಂಡದ ಮೇಲೆ ದಾಳಿ ಮಾಡಿದ್ದಾರೆ. ನಟ ವಿಜಯ್, ನಟಿಯರಾದ ನಯನತಾರಾ ಹಾಗೂ ಸಮಂತಾ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಸಾಗಿದೆ.
ಚೆನ್ನೈನ 35 ಸ್ಥಳಗಳು, ಮದುರೈ, ಕೊಚ್ಚಿನ್, ತ್ರಿವೇಂಡ್ರ, ಹೈದರಾಬಾದ್ ಸೇರಿದಂತೆ ಅನೇಕ ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ದಾಳಿ ಉದ್ದೇಶ ಏನು? ಇಷ್ಟಕ್ಕೂ ದಾಳಿ ಈ ಸಮಯದಲ್ಲೇ ಏಕೆ ಮಾಡಲಾಗಿದೆ? ವಿಜಯ್ ಟಾರ್ಗೆಟ್ ಮಾಡಲಾಗುತ್ತಿದೆಯೇ? ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ.
ತಮಿಳು ಚಿತ್ರ ಪುಲಿ ಅಪಾರ ಹೂಡಿಕೆ ಮಾಡಲಾಗಿದ್ದು, ಇದರಲ್ಲಿ ಅನೇಕ ಮೊತ್ತಕ್ಕೆ ಸರಿಯಾದ ಮಾಹಿತಿ ಒದಗಿಸಿಲ್ಲ. ಮನಿ ಲಾಂಡ್ರಿಂಗ್ ಶಂಕೆ ವ್ಯಕ್ತವಾಗಿದ್ದು, ಪುಲಿ ನಿರ್ಮಾಪಕರಾದ ಶಿಬು, ಸೆಲ್ವಕುಮಾರ್, ಮದುರೈ ಅನ್ಬು, ಫೈನಾನ್ಶಿಯರ್ ರಮೇಶ್ ಹಾಗೂ ಅವರ ತಂಡದವರನ್ನು ಐಟಿ ಇಲಾಖೆ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.['ಪುಲಿ' ಏಕೆ ನೋಡಬೇಕು, ಇಲ್ಲಿದೆ ಟಾಪ್ 10 ಕಾರಣಗಳು]
ಈ ಮುಂಚೆ ತಲೈವಾ ಚಿತ್ರ ಬಿಡುಗಡೆಗೂ ಮುನ್ನ ಭಾರಿ ಗಲಾಟೆ, ಹಿಂಸಾಚಾರ ಉಂಟಾಗಿತ್ತು. ಚಿತ್ರದ ಹಕ್ಕು ಆಡಳಿತ ಪಕ್ಷ ನಡೆಸುವ ಟಿವಿ ಚಾನೆಲ್ ಗಳಿಗೆ ಸಿಗದಿದ್ದರೆ ಚಿತ್ರದ ಮೇಲೆ ನಿರ್ಬಂಧ, ನಿಷೇಧ ಹೇರುವ ಕ್ರಮ ಎಲ್ಲರ ಮೇಲೂ ಪ್ರಯೋಗವಾಗುತ್ತದೆ. ಕಮಲ್ ಹಾಸನ್ ಚಿತ್ರಗಳು, ರಜನಿಕಾಂತ್ ಚಿತ್ರಗಳು ಕೂಡಾ ಇದಕ್ಕೆ ಹೊರತಲ್ಲ.

ಆರ್ಥಿಕ ಅವ್ಯವಹಾರಕ್ಕೂ ನಾಯಕನಿಗೂ ಏನು ಸಂಬಂಧ?
ಪುಲಿ ಚಿತ್ರದ ನಾಯಕ ವಿಜಯ್ ಗೂ ನಿರ್ಮಾಪಕರ ಆರ್ಥಿಕ ಅವ್ಯವಹಾರಕ್ಕೂ ಏನು ಸಂಬಂಧ. ಅನಧಿಕೃತವಾಗಿ ಚಿತ್ರಕ್ಕೆ ಹಣ ಹೂಡಿಕೆ ಮಾಡಲಾಗಿದೆ ಹೀಗಾಗಿ ಪುಲಿ ಚಿತ್ರತಂಡ ಮೇಲೆ ದಾಳಿ ಮಾಡಲಾಗಿದೆ.ಅನಧಿಕೃತ ದುಡ್ಡು ಎಲ್ಲಿ ಇಟ್ಟಿದ್ದಾರೆ ಎಂಬುದರ ಬಗ್ಗೆ ತಿಳಿಯಲು ಚಿತ್ರಕ್ಕೆ ಸಂಬಂಧಿಸಿದ ಪ್ರಮುಖರ ಮನೆ ಮೇಲೆ ದಾಳಿ ಅಗತ್ಯ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ.

ನಯನತಾರಾ, ಸಮಂತಾಗೂ ಏನು ಸಂಬಂಧವಿದೆ?
ಪುಲಿ ಚಿತ್ರದಲ್ಲಿ ವಿಜಯ್ ನಾಯಕರಾಗಿದ್ದರೆ, ಶ್ರುತಿ ಹಾಸನ್, ಹಂಸಿಕಾ ಮೋತ್ವಾನಿ, ಶ್ರೀದೇವಿ, ಕಿಚ್ಚ ಸುದೀಪ್ ಉಳಿದ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಯನ್ ತಾರಾ ಹಾಗೂ ಸಮಂತಾ ಅವರ ನಿವಾಸದ ಮೇಲೆ ದಾಳಿ ಈಗ ಮಾಡಿದ್ದೇಕೆ ಬಗ್ಗೆ ಐಟಿ ಅಧಿಕಾರಿಗಳು ವಿವರಣೆ ನೀಡಿಲ್ಲ. ಪುಲಿ ತಂಡದ ಮೇಲೆ ಮಾತ್ರ ದಾಳಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸಲು ಕಾಲಿವುಡ್ ನ ಬೇಡಿಯ ನಟಿಯರ ಮನೆ ಮೇಲೂ ದಾಳಿ ನಡೆಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ವಿಜಯ್ ಗಿದ್ಯಾ ರಾಜಕೀಯ ನಂಟು
ವಿಜಯ್ ಅವರು ಕ್ರಿಶ್ಚಿಯನ್ ಸಮುದಾಯದವರಾದರೂ (ವಿಜಯ್ ಜೋಸೆಫ್ ಚಂದ್ರಶೇಖರ್) ಎಲ್ಲಾ ವರ್ಗದ ಮೆಚ್ಚುಗೆ ಗಳಿಸಿದ ನಟ. ದಾನ ಧರ್ಮಗಳಿಗೆ ಹೆಸರುವಾಸಿ, ಮೊದಲಿಗೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ವಿಜಯ್ ಅವರು ದಕ್ಷಿಣ ಭಾರತಕ್ಕೆ ಮೋದಿ ಅವರು ಬಂದಿದ್ದಾಗ ಅವರ ಜೊತೆ ಕಾಣಿಸಿಕೊಂಡು ಹಲವರ ಲೆಕ್ಕಾಚಾರ ಉಲ್ಟಾ ಮಾಡಿದ್ದರು. ವಿಜಯ್ ಗೆ ಈಗಲೂ ಬಿಜೆಪಿಯಿಂದ ಆಫರ್ ಇದ್ದೇ ಇದೆ. ಅದರೆ, ವಿಜಯ್ ತನ್ನ ನಿರ್ಧಾರ ಸ್ಪಷ್ಟಪಡಿಸಿಲ್ಲ.

ಚಿತ್ರ ಬಿಡುಗಡೆಗೂ ಮುನ್ನ ಕಿರಿಕ್ ಮಾಮೂಲಿ
100 ಪ್ಲಸ್ ಕೋಟಿ ರು ಬಂಡವಾಳ ಹೂಡಿಕೆಯಾಗಿರುವ ಪುಲಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದ್ದು, ಐಟಿ ದಾಳಿಗಳು ವಿಜಯ್ ಇಮೇಜ್ ಹಾಗೂ ಬಾಕ್ಸಾಫೀಸ್ ಗಳಿಕೆಗೆ ಪೆಟ್ಟು ಕೊಡಲು ಮಾಡಿರುವ ತಂತ್ರ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications