ಕೇಂದ್ರಕ್ಕೆ ಯಾವುದೇ ಪತ್ರ ಕಳುಹಿಸಿಲ್ಲ: ತ.ನಾಡು ರಾಜ್ಯಪಾಲರ ಸ್ಪಷ್ಟನೆ
ಶಶಿಕಲಾ ನಟರಾಜನ್ ಅವರಿಗೆ ತಮಿಳುನಾಡಿನಲ್ಲಿ ಸರಕಾರ ರಚಿಸಲು ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ವಿದ್ಯಾಸಾಗರ್ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಂಥ ಯಾವುದೇ ಪತ್ರ ಬರೆದಿಲ್ಲ ಎಂದು ರಾಜಭವನದಿಂದಲೇ ಸ್ಪಷ್ಟನೆ ನೀಡಲಾಗಿದೆ
ಚೆನ್ನೈ, ಫೆಬ್ರವರಿ 11: ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ್ ರಾವ್ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ, ಶಶಿಕಲಾ ನಟರಾಜನ್ ಅವರನ್ನು ಸರಕಾರ ರಚಿಸಲು ಆಹ್ವಾನಿಸಲು ಸಾಧ್ಯವಿಲ್ಲ ಎಂದಿದ್ದಾರೆ ಎಂಬೆಲ್ಲ ಸುದ್ದಿ ಹರಿದಾಡಿತ್ತು. ಆ ರೀತಿಯ ಯಾವ ವರದಿಯನ್ನೂ ರಾಜ್ಯಪಾಲರು ಕೇಂದ್ರಕ್ಕೆ ಸಲ್ಲಿಸಿಲ್ಲ ಎಂದು ತಮಿಳುನಾಡಿನ ರಾಜಭವನದಿಂದಲೇ ಪತ್ರಿಕಾ ಪ್ರಕಟಣೆ ನೀಡಲಾಗಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪು ಬರಬೇಕಾಗಿದೆ. ಆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ಅವರು ಕೂಡ ಆರೋಪಿಯಾಗಿದ್ದು, ತೀರ್ಪು ಬರುವವರೆಗೆ ಸರಕಾರ ರಚಿಸಲು ಆಹ್ವಾನ ನೀಡುವುದು ಬೇಡ ಎಂದು ರಾಜ್ಯಪಾಲರು ತೀರ್ಮಾನಿಸಿದ್ದಾರೆ ಎಂಬ ವದಂತಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.[ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ಶಶಿಕಲಾ ಉಚ್ಚಾಟನೆ]
ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಗುರುವಾರವಷ್ಟೇ ರಾಜ್ಯಪಾಲರನ್ನು ಭೇಟಿಯಾಗಿ, ತಮಗೆ ಸರಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಶಶಿಕಲಾ ನಟರಾಜನ್ ಅವರು ತಮಗೆ ಪಕ್ಷದಲ್ಲಿ ಶಾಸಕರ ಬೆಂಬಲವಿದೆ ಎಂದು ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ತೋರಿಸಿದ್ದರು.
No report has been sent still from Governor C Vidyasagar Rao: Raj Bhavan PRO
— ANI (@ANI_news) 10 February 2017
ಈ ವೇಳೆ, ತಮ್ಮ ಬಳಿ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ. ಆದ್ದರಿಂದ ಅದನ್ನು ವಾಪಸ್ ಪಡೆಯಲು ಅವಕಾಶ ನೀಡಬೇಕು ಎಂದು ಪನ್ನೀರ್ ಸೆಲ್ವಂ ಮನವಿ ಮಾಡಿದ್ದರು. ಆ ನಂತರ ನಡೆದ ಬೆಳವಣಿಗೆಯಲ್ಲಿ ರಾಜ್ಯಪಾಲರು ಕೇಂದ್ರಕ್ಕೆ ಪತ್ರ ಕಳುಹಿಸಿದ್ದಾರೆ. ಶಶಿಕಲಾ ಅವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಈಗ ರಾಜಭವನದಿಂದಲೇ ಸ್ಫಷ್ಟನೆ ಬಂದಿದೆ.