ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಎಐಎಡಿಎಂಕೆ ಶಾಸಕರಿಗೆ ಪೊಲೀಸರ ಕ್ವೆಶ್ಚನ್ ಅವರ್
ತಮಿಳುನಾಡಿನಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಮತ್ತೊಂದು ಹಂತ ತಲುಪಿದೆ. ಚೆನ್ನೈನ ಸಮೀಪದ ರೆಸಾರ್ಟ್ ನಲ್ಲಿರುವ ಎಐಎಡಿಎಂಕೆ ಶಾಸಕರನ್ನು ಪೊಲೀಸರು ಸ್ವಂತ ಇಚ್ಛೆಯಿಂದ ಬಂದಿದ್ದೀರೋ ಅಥವಾ ಯಾರಾದರೂ ಕೂಡಿಟ್ಟಿದ್ದಾರೋ ಎಂದು ಕೇಳಿದ್ದಾರೆ
ಚೆನ್ನೈ, ಫೆಬ್ರವರಿ 11: ಚೆನ್ನೈಗೆ ಹತ್ತಿರದಲ್ಲೇ ಇರುವ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ವಿಪರೀತ ಚಟುವಟಿಕೆ ನಡೆಯುತ್ತಿದೆ. ಶಶಿಕಲಾ ನಟರಾಜನ್ ಗೆ ನಿಷ್ಠರಾದ ಎಐಎಡಿಎಂಕೆ ಶಾಸಕರನ್ನು ಇರಿಸಿರುವುದು ಇದೇ ರೆಸಾರ್ಟ್ ನಲ್ಲಿ. ಈ ಶಾಸಕರು ತಮ್ಮ ಸ್ವಂತ ಇಚ್ಛೆಯಿಂದ ಇಲ್ಲಿದ್ದಾರೋ, ಯಾರಾದರೋ ಬಲವಂತವಾಗಿ ಇರಿಸಿಕೊಂಡಿದ್ದಾರೋ ಎಂದು ಪೊಲೀಸರು ರೆಸಾರ್ಟ್ ಗೆ ತೆರಳಿ ವಿಚಾರಿಸಿದ್ದಾರೆ.
ಶಾಸಕರನ್ನು ಬಲವಂತವಾಗಿ ರೆಸಾರ್ಟ್ ನಲ್ಲಿ ಇರಿಸಿದ್ದಾರೆ ಎಂದು ರಾಜ್ಯಪಾಲರ ಬಳಿ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಆರೋಪಿಸಿದ್ದರು. ಈ ಆರೋಪದ ಬಗ್ಗೆ ವಿಚಾರಿಸುವುದಾಗಿ ರಾಜ್ಯಪಾಲರು ಹೇಳಿದ್ದರು. ಸರಿಯಾದ ಚಿತ್ರಣ ಪಡೆಯುವ ಸಲುವಾಗಿ ಪೊಲೀಸ್ ಅಧಿಕಾರಿಗಳು ರೆಸಾರ್ಟ್ ಗೆ ತೆರಳಿ, ಎಲ್ಲ ಶಾಸಕರನ್ನು ವೈಯಕ್ತಿಕವಾಗಿ ಮಾತನಾಡಿಸಿದ್ದಾರೆ.[ಕೇಂದ್ರಕ್ಕೆ ಯಾವುದೇ ಪತ್ರ ಕಳುಹಿಸಿಲ್ಲ: ತ.ನಾಡು ರಾಜ್ಯಪಾಲರ ಸ್ಪಷ್ಟನೆ]

ರೆಸಾರ್ಟ್ ನಲ್ಲಿ ಕಲ್ಲು ತೂರಾಟ ಆದ ಬಗ್ಗೆ ವರದಿಯಾಗಿತ್ತು. ಶಶಿಕಲಾ ಅವರು ಶಾಸಕರನ್ನು ಕೂಡಿಟ್ಟಿದ್ದಾರೆ ಎಂಬ ಆರೋಪ ಇದ್ದಿದ್ದರಿಂದ ರೆಸಾರ್ಟ್ ನಲ್ಲಿ ಯಾರ್ಯಾರಿದ್ದಾರೆ ಎಂಬ ಬಗ್ಗೆ ವರದಿ ಮಾಡಲು ಮಾಧ್ಯಮದವರು ತೆರಳಿದ್ದರು. ಆಗ ಕೆಲವರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಶಾಸಕರು ಎಲ್ಲಿದ್ದಾರೆ ಎಂದು ಕೇಳಿ ಮದ್ರಾಸ್ ಹೈ ಕೋರ್ಟ್ ನಲ್ಲಿ ಅರ್ಜಿ ಸಹ ಹಾಕಲಾಗಿತ್ತು. ಶಾಸಕರು ಎಂಎಲ್ ಎ ಹಾಸ್ಟೆಲ್ ನಲ್ಲಿದ್ದಾರೆ, ರೆಸಾರ್ಟ್ ನಲ್ಲಿ ಅಲ್ಲ ಎಂದು ಗುರುವಾರ ಸರಕಾರವೇ ಕೋರ್ಟ್ ಗೆ ಮಾಹಿತಿ ನೀಡಿತ್ತು. ಆದರೂ ಮಾಧ್ಯಮದವರು ಶಾಸಕರನ್ನು ರೆಸಾರ್ಟ್ ನಲ್ಲಿ ಪತ್ತೆ ಮಾಡಿದ್ದರು.[ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ಶಶಿಕಲಾ ಉಚ್ಚಾಟನೆ]
ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ಶಾಸಕರು ಎಲ್ಲಿದ್ದಾರೆ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ತಮಿಳುನಾಡು ಸರಕಾರಕ್ಕೆ ಕೇಳಿತ್ತು.












Click it and Unblock the Notifications