ತಮಿಳುನಾಡು ಬಂದ್: ವೈಕೋ, ಸ್ಟಾಲಿನ್, ಕನಿಮೊಳಿ ಬಂಧನ
ಚೆನ್ನೈ, ಸೆಪ್ಟೆಂಬರ್ 16: ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಬಂದ್ ಮಾಡುವುದಕ್ಕೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಅವಕಾಶ ನೀಡಬಾರದು ಎಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಕರೆ ನೀಡಿದ್ದ ಬಂದ್ ವೇಳೆ ಶುಕ್ರವಾರ ಮುಖಂಡರಿಗೆ ತಡೆಯೊಡ್ಡಲಾಗಿದೆ. ಬಂದ್ ನಲ್ಲಿ ಪಾಲ್ಗೊಂಡಿದ್ದ ರಾಜಕೀಯ ಮುಖಂಡರನ್ನು ಬಂಧಿಸಲಾಗಿದೆ.
ಅಣ್ಣಾ ಪ್ರತಿಮೆ ಬಳಿ ಡಿಎಂಕೆ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು, ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ ನನ್ನು ಬಂಧಿಸಲಾಗಿದೆ. ರಾಜ್ಯಸಭ ಸದಸ್ಯೆ ಕನಿಮೊಳಿಯನ್ನೂ ಬಂಧಿಸಲಾಗಿದೆ. "ಕಾವೇರಿ ಸಮಸ್ಯೆ ಬಗೆಹರಿಸುವುದಕ್ಕೆ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಕರೆಯಬೇಕು. ಈಗ ತುಂಬ ತಡವೇನೂ ಆಗಿಲ್ಲ" ಎಂದು ಅವರು ಹೇಳಿದ್ದಾರೆ.[ಚೆನ್ನೈ: ಕನ್ನಡಿಗರಿಗೆ ಧಿಕ್ಕಾರ ಕೂಗಿ, ಬೆಂಕಿ ಹಚ್ಚಿಕೊಂಡ ಪ್ರಜೆ!]
ಕರ್ನಾಟಕದಲ್ಲಿ ನಡೆದ ಘಟನೆಗಳನ್ನು ವಿರೋಧಿಸಿ ಶಾಂತಿಯುತ ಬಂದ್ ಮಾಡುತ್ತಿದ್ದೇವೆ. ನಮಗೆ ಶಾಶ್ವತ ಪರಿಹಾರ ಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ನ್ಯಾಯ ಸಿಗುವಂತೆ ಮಾಡಬೇಕು. ತಮಿಳುನಾಡಿನ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ತಿರುಚ್ಚಿ ರೈಲು ನಿಲ್ದಾಣದಲ್ಲಿ ಮುಖಂಡ ವೈಕೋ ಬಂಧನವಾಗಿದೆ. ಚೆನ್ನೈನಲ್ಲಿ ಮುಖಂಡ ತಿರುಮಾವಳನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಮೊದಲ ಬಂದ್ ಇದು. ಎಗ್ಮೋರ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಮುಖಂಡ ಪಿ.ಆರ್.ಪಾಂಡಿಯನ್ ಹೇಳಿದ್ದಾರೆ.[ತಮಿಳುನಾಡು ಬಂದ್, ಕರ್ನಾಟಕದ ವಿರುದ್ಧ ಜಾಥಾ]
ಕರ್ನಾಟಕದಲ್ಲಿ ಹಿಂಸಾಚಾರದ ವೇಳೆ ಆದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಜೊತೆಗೆ ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಶಾಶ್ವತ ಪರಿಹಾರ ದೊರೆಯಬೇಕು ಎಂದು ಅವರು ತಿಳಿಸಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ಪಕ್ಷ ಬಂದ್ ಬೆಂಬಲಿಸಿಲ್ಲ. ವಿರೊಧ ಪಕ್ಷಗಳಾದ ಡಿಎಂಕೆ, ಕಾಂಗ್ರೆಸ್, ಎಡಪಕ್ಷಗಳು, ಪಿಎಂಕೆ, ಡಿಎಂಡಿಕೆ, ಎಂಡಿಎಂಕೆ, ವಿಸಿಕೆ, ಟಿಎಂಸಿ ಶುಕ್ರವಾರದ ಬಂದ್ ಗೆ ಬೆಂಬಲ ಸೂಚಿಸಿವೆ.