ಚುನಾವಣೆಗೂ ಮುನ್ನ ಅಮಿತ್ ಶಾ ಜೊತೆ ಇಪಿಎಸ್ ಮಹತ್ವದ ಚರ್ಚೆ
ಚೆನ್ನೈ, ಜನವರಿ 19: ತಮಿಳುನಾಡು ವಿಧಾನಸಭೆ ಚುನಾವಣೆ 2021ಗಾಗಿ ಆಡಳಿತಾರೂಢ ಎಐಎಡಿಎಂಕೆ ರಣತಂತ್ರ ಆರಂಭಿಸಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಡಿಎಂಕೆ ಪರ ಫಲಿತಾಂಶ ನೀಡುತ್ತಿರುವುದು ಸಿಎಂ ಪಳನಿಸ್ವಾಮಿ ಅವರನ್ನು ಕಂಗಾಲಾಗಿಸಿದೆ. ಭಾರತೀಯ ಜನತಾ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿ ಸಾಧಿಸಬೇಕೇ? ಬೇಡವೆ? ಎಂಬ ಜಿಜ್ಞಾಸೆಗೆ ಬಿದ್ದಿರುವ ಎಐಎಡಿಎಂಕೆ ವರಿಷ್ಠರು ಕೊನೆಗೂ ಬಿಜೆಪಿ ಜೊತೆ ಮಾತುಕತೆ ಆರಂಭಿಸಿರುವ ಸುದ್ದಿ ಬಂದಿದೆ.
ಬಿಜೆಪಿ ನೆರವಿಲ್ಲದೆ ಚುನಾವನೆ ಎದುರಿಸಿ, ಚುನಾವಣೆ ಫಲಿತಾಂಶ ನೋಡಿಕೊಂಡು ನಂತರ ಮೈತ್ರಿ ಮಾಡಿಕೊಳ್ಳುವ ಇರಾದೆ ಇಟ್ಟುಕೊಂಡಿದ್ದ ಇಪಿಎಸ್ ಬಣಕ್ಕೆ ಕೊಂಚ ಹಿನ್ನಡೆಯಾಗಿದೆ. ಹೀಗಾಗಿ, ಬಿಜೆಪಿ ಜೊತೆ ಹೈಕಮಾಂಡ್ ಜೊತೆ ಮಾತುಕತೆ ಆರಂಭಿಸಿದ್ದಾರೆ ಎಂಬ ಸುಳಿವು ಸಿಕ್ಕಿದೆ.
ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮೈತ್ರಿ ಬಗ್ಗೆ ಏನು ಮಾತನಾಡಿಲ್ಲ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೆಲ ವಿಷಯಗಳನ್ನು ಚರ್ಚಿಸಲಾಯಿತು ಎಂದು ಇಪಿಎಸ್ ಅವರ ಕಚೇರಿ ಸ್ಪಷ್ಟನೆ ನೀಡಿದೆ. ಪ್ರಧಾನಿ ಮೋದಿ ಅವರನ್ನು ಇಪಿಎಸ್ ಭೇಟಿಯಾಗಲಿದ್ದು, ದಿವಂಗತ ಜೆ ಜಯಲಲಿತಾ ಅವರ ಸ್ಮಾರಕ ನಿರ್ಮಾಣದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಆದರೆ, ಮುಖ್ಯವಾಗಿ ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ ಜೊತೆ ಎಐಎಡಿಎಂಕೆ ವಿಲೀನ ಸಾಧ್ಯತೆ, ಮತ ವಿಭಜನೆ ಬಗ್ಗೆ ಬಿಜೆಪಿ ವರಿಷ್ಠರ ಜೊತೆ ಚರ್ಚಿಸಲಿದ್ದಾರೆ. ವಿಕೆ ಶಶಿಕಲಾ ಜೈಲಿನಿಂದ ಹೊರ ಬಂದ ನಂತರ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆಯಿದ್ದು, ಆಂತರಿಕ ಕಿತ್ತಾಟದ ಲಾಭ ಡಿಎಂಕೆ ಆಗದಂತೆ ತಡೆಗಟ್ಟಲು ಯಾವ ರೀತಿ ನಡೆ ಇಡಬೇಕು ಎಂಬುದನ್ನು ಇಪಿಎಸ್ ಚರ್ಚಿಸಲಿದ್ದಾರೆ, ಇದು ಮುಂದಿನ ಚುನಾವಣೆ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications