ತಮಿಳುನಾಡಿನಲ್ಲಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಯುಗಾರಂಭ!
"ಜಯಲಲಿತಾ ಅವರಲ್ಲಿ ಎಂಜಿ ರಾಮಚಂದ್ರನ್ ಅವರನ್ನು ನೋಡುತ್ತಿದ್ದೆವು. ಇನ್ನು ಮುಂದೆ ಶಶಿಕಲಾ ಅವರಲ್ಲಿ ಜಯಲಲಿತಾ ಅವರನ್ನು ನೋಡಲಿದ್ದೇವೆ" ಎಂಬುದು ತೆಗೆದುಕೊಳ್ಳಲಾಗಿರುವ ನಿರ್ಣಯಗಳಲ್ಲಿ ಒಂದು.
ಚೆನ್ನೈ, ಡಿಸೆಂಬರ್ 29 : 'ಅಮ್ಮ' ಜಯಲಲಿತಾ ಸತ್ತ ನಂತರ ನಡೆದ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಪ್ರಥಮ ಕಾರ್ಯಕಾರಿ ಸಭೆಯಲ್ಲಿ ಶಶಿಕಲಾ ನಟರಾಜನ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಮುನ್ನಡೆಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ.
ಗುರುವಾರ ನಡೆದ ಮಹತ್ವದ ಸಭೆಯಲ್ಲಿ ಶಶಿಕಲಾ ನಟರಾಜನ್ ಪ್ರಧಾನ ಕಾರ್ಯದರ್ಶಿಯಾಗುವುದನ್ನು ಸೇರಿ ಒಟ್ಟು ಹದಿನಾಲ್ಕು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಜಯಲಲಿತಾ ಅವರು ನಿಭಾಯಿಸುತ್ತಿದ್ದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಶಶಿಕಲಾ ಅವರು ಮುನ್ನಡೆಸಿಕೊಂಡು ಹೋಗಲಿದ್ದಾರೆ.
"ಜಯಲಲಿತಾ ಅವರಲ್ಲಿ ಎಂಜಿ ರಾಮಚಂದ್ರನ್ ಅವರನ್ನು ನೋಡುತ್ತಿದ್ದೆವು. ಇನ್ನು ಮುಂದೆ ಶಶಿಕಲಾ ಅವರಲ್ಲಿ ಜಯಲಲಿತಾ ಅವರನ್ನು ನೋಡಲಿದ್ದೇವೆ" ಎಂಬುದು ತೆಗೆದುಕೊಳ್ಳಲಾಗಿರುವ ನಿರ್ಣಯಗಳಲ್ಲಿ ಒಂದು. ಆದರೂ, ಇಲ್ಲಿ ಒಂದು ಗೊಂದಲವಿದ್ದು, ಮುಂದಿನ ಪ್ರಧಾನ ಕಾರ್ಯದರ್ಶಿ ಆಯ್ಕೆಯಾಗುವವರೆಗೆ ಶಶಿಕಲಾ ಅವರು ಆ ಹುದ್ದೆಯಲ್ಲಿರಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿವೆ. [ಶಶಿಕಲಾ ಪುಷ್ಪರ ಗಂಡ, ವಕೀಲನಿಗೆ ಎಐಎಡಿಎಂಕೆ ಕಾರ್ಯಕರ್ತರ ಗೂಸಾ]
ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಮತ್ತು ಪಕ್ಷದ ಅಧ್ಯಕ್ಷ ಮಧುಸೂಧನ್ ಅವರು ಸಭೆಯ ನೇತೃತ್ವ ವಹಿಸಿದ್ದರೂ, ಜಯಲಲಿತಾ ಅವರು ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನು ಸಭೆಯಲ್ಲಿ ಮಧ್ಯದಲ್ಲಿ ಇರಿಸಿ ಎಲ್ಲರೂ ಸ್ವಾಮಿನಿಷ್ಠೆಯನ್ನು ಮೆರೆದರು. ಸಭೆಯ ಆರಂಭದಲ್ಲಿ ಅಗಲಿದ ನಾಯಕಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಸ್ವತಃ ಪನ್ನೀರ್ ಅವರೇ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಶಿಕಲಾ ಅವರ ಹೆಸರನ್ನು ಪ್ರಸ್ತಾಪಿಸಿದರು.
ಅಚ್ಚರಿಯ ಸಂಗತಿಯೆಂದರೆ, ಇಷ್ಟೆಲ್ಲಾ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತಾದರೂ, ಸಭೆಯಲ್ಲಿ ಶಶಿಕಲಾ ನಟರಾಜನ್ ಅವರು ಹಾಜರಿರಲಿಲ್ಲ. ನೀವೇ ಪಕ್ಷದ ನೇತೃತ್ವ ವಹಿಸಬೇಕೆಂದು ಎಲ್ಲ ಶಾಸಕರು ಗೋಗರೆಯುತ್ತಿದ್ದರೂ ಶಶಿಕಲಾ ಅವರು ತುಟಿ ಬಿಗಿಹಿಡಿದಿದ್ದಾರೆ. ಶಶಿಕಲಾ ಅವರೇನೇ ಹೇಳಲಿ ಅವರಿಗೆ ಕಾರ್ಯಕರ್ತರು ಜೈ ಎಂದಿದ್ದಾರೆ. [ಚಿನ್ನಮ್ಮ ತಮಿಳ್ನಾಡಿನ ಕಿಂಗ್ ಮೇಕರ್ ಆಗಿದ್ದು ಹೇಗೆ?]