ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ರಜನಿಕಾಂತ್
ಚೆನ್ನೈ, ಅಕ್ಟೋಬರ್ 17: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅನಾರೋಗ್ಯದ ಕಾರಣಕ್ಕೆ ದಾಖಲಾಗಿರುವ ಅಪೋಲೋ ಆಸ್ಪತ್ರೆಗೆ ಭಾನುವಾರ ಸಂಜೆ ನಟ ರಜನಿಕಾಂತ್ ಹಾಗೂ ಅವರ ಪುತ್ರಿ ಐಶ್ವರ್ಯಾ ಧನುಶ್ ಭೇಟಿ ನೀಡಿದ್ದಾರೆ. ಸಂಜೆ 6.10ಕ್ಕೆ ಬಂದ ಅವರು ಅರ್ಧ ಗಂಟೆ ಅಲ್ಲೇ ಇದ್ದರು.
ನಟ ರಜನಿಕಾಂತ್ ಮನೆ ಜಯಲಲಿತಾ ಅವರ ಮನೆಯಿರುವ ಪೋಸ್ ಗಾರ್ಡನ್ ಪ್ರದೇಶದಲ್ಲೇ ಇದೆ. ಸೆಪ್ಟೆಂಬರ್ 24ರಂದು ಟ್ವೀಟ್ ಮಾಡಿದ್ದ ರಜನಿ, ಜಯಲಲಿತಾ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದರು. ಆಸ್ಪತ್ರೆ ಅಧಿಕಾರಿಗಳಿಗೆ ರಜನಿ ಭೇಟಿ ಮುಂಚಿತವಾಗಿಯೇ ತಿಳಿದಿತ್ತು.[ಅಪೋಲೋ ಆಸ್ಪತ್ರೆ ಹೊರಗೆ ವ್ಯಾಪಾರಿಗಳಿಗೆ ಭರ್ತಿ ಕಮಾಯಿ]
ಆದ್ದರಿಂದ ಅವರ ಕಪ್ಪು ಬಿಎಂ ಡಬ್ಲ್ಯು ಕಾರನ್ನು ತಡೆಯದಂತೆ ಮುಂಚೆಯೇ ಸೂಚನೆ ನೀಡಲಾಗಿತ್ತು. ಅಪೋಲೋ ಆಸ್ಪತ್ರೆಯಿಂದ ರಜನಿಕಾಂತ್ ಹೊರಟ ಮೇಲಷ್ಟೇ ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ಬಂದಿತು. ಇದೇ ವೇಳೆ ಲಂಡನ್ ಮೂಲದ ತಜ್ಞ ವೈದ್ಯ ರಿಚರ್ಡ್ ಬೇಲೆ ಭಾನುವಾರ ಎರಡು ಗಂಟೆ ಕಾಲ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ಜಯಲಲಿತಾ ಅವರ ಅರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಶನಿವಾರ ಹಾಗೂ ಭಾನುವಾರ ಅಪೋಲೋ ಆಸ್ಪತ್ರೆಯಿಂದ ಯವುದೇ ಮಾಹಿತಿ ಬಂದಿಲ್ಲ. ಇನ್ನು ಕನ್ಯಾಕುಮಾರಿಯಿಂದ ಇಲ್ಲಿಗೆ ಬಂದಿರುವ ವ್ಯಕ್ತಿಯೊಬ್ಬರು ಜಯಲಲಿತಾ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ, ಬ್ಯಾರಿಕೇಡ್ ನ ಪಕ್ಕದಲ್ಲಿ ಕುಳಿತು ತಮ್ಮಷ್ಟಕ್ಕೆ ರಾಮ ನಾಮ ಜಪ ಬರೆಯುತ್ತಿದ್ದಾರೆ.[ಜಯಲಲಿತಾ ಆಸ್ಪತ್ರೆಯಲ್ಲಿದ್ದರೆ ಪಕ್ಷ, ಆಡಳಿತದ ಸ್ಥಿತಿ ಏನು?]
ಅಮ್ಮ ಆಸ್ಪತ್ರೆಯಿಂದ ಬಿಡುಗಡೆ ಆಗುವವರೆಗೆ ಉಪವಾಸವಿದ್ದು, ರಾಮನಾಮ ಜಪ ಬರೆಯುತ್ತೇನೆ ಎಂದು ಆತ ಹೇಳಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಉಪವಾಸ ಮಾಡಿ, ಆತ ಆಸ್ಪತ್ರೆಗೆ ದಾಖಲಾಗಿದ್ದರಂತೆ. ನನಗೆ ಏನಾದರೂ ಪರವಾಗಿಲ್ಲ. ಅಮ್ಮ ಹುಷಾರಾಗಬೇಕು ಎಂದು ಅವರು ಹೇಳಿದ್ದಾರೆ.[ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ: ಸುಬ್ರಮಣಿಯನ್ ಸ್ವಾಮಿ ಪತ್ರ]
ಮಮತಾ ದೀದಿ ಹಾಗೂ ಜಯಲಲಿತಾ ಅವರ ಅಭಿಮಾನಿ ನಾನು. ಇಬ್ಬರೂ ದೇಶದ ಹೆಮ್ಮೆಯ ನಾಯಕಿಯರು. ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸುತ್ತೇನೆ ಎಂದು ಪಶ್ಚಿಮ ಬಂಗಾಲದ ಮಿಡ್ನಾಪುರದ ನಲವತ್ತೇಳು ವರ್ಷದ ಶಿಕ್ಷಕ ಅಹ್ಮದ್ ಖಾನ್ ಹೇಳಿದ್ದಾರೆ. ಮಾಸ್ಟರ್ ಚೆಕ್ ಅಪ್ ಗಾಗಿ ತಮ್ಮ ಮಗ ಅಸೀಫ್ ಅಹ್ಮದ್ ಖಾನ್ ಜತೆಗೆ ಅವರೂ ಅಪೋಲೋ ಆಸ್ಪತ್ರೆಗೆ ಬಂದಿದ್ದಾರೆ.