ಬಿಜೆಪಿ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕನ ಕಟೌಟ್; ವಿಪಕ್ಷಗಳ ತೀವ್ರ ಟೀಕೆ
ಚೆನ್ನೈ, ಫೆಬ್ರವರಿ 26: ಬಿಜೆಪಿ ಕಾರ್ಯಕ್ರಮದ ವಿಡಿಯೋಗೆ ಎಐಎಡಿಎಂಕೆ ಸಂಸ್ಥಾಪಕ ಎಂಜಿ ರಾಮಚಂದ್ರನ್ ಫೋಟೊ ಬಳಸಿಕೊಂಡ ಕಾರಣ ಎಐಎಡಿಎಂಕೆಯಿಂದ ಎರಡು ತಿಂಗಳ ಹಿಂದೆ ಟೀಕೆಗೆ ಒಳಗಾಗಿದ್ದ ತಮಿಳುನಾಡು ಬಿಜೆಪಿ ಘಟಕ, ಗುರುವಾರ ಮತ್ತೆ ಕಾಂಗ್ರೆಸ್ ಆಕ್ರೋಶಕ್ಕೆ ಗುರಿಯಾಗಿದೆ.
ಗುರುವಾರ ಕೊಯಮತ್ತೂರಿನಲ್ಲಿ ನಡೆದ ಪ್ರಚಾರ ಮೆರವಣಿಗೆಯಲ್ಲಿ ಎಂಜಿಆರ್, ಕಾಂಗ್ರೆಸ್ ನಾಯಕ ಕೆ ಕಾಮರಾಜನ್ ಹಾಗೂ ನರೇಂದ್ರ ಮೋದಿಯವರ ಕಟ್ ಔಟ್ ಅನ್ನು ಒಟ್ಟಿಗೆ ಹಾಕಿರುವುದನ್ನು ಕಾಂಗ್ರೆಸ್ ಖಂಡಿಸಿದೆ.
ಆರ್ಎಸ್ಎಸ್ನವರು ಈ ಹಿಂದೆ ಕಾಮರಾಜನ್ ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದರು. ಇದೀಗ ಅವರ ಕಟ್ ಔಟ್ ಅನ್ನು ಬಿಜೆಪಿ ಬಳಸಿರುವುದಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದೆ. ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೀಗ ಪಕ್ಷಗಳ ನಡುವೆ ಕಟೌಟ್ ಜಗಳ ಆರಂಭವಾಗಿದೆ. ಮುಂದೆ ಓದಿ...

"ಬಿಜೆಪಿ ಹಾಗೂ ಆರ್ಎಸ್ಎಸ್ಗೆ ಅಧಿಕಾರವಿಲ್ಲ"
ಕಾಂಗ್ರೆಸ್ ನಾಯಕ ಕಾಮರಾಜನ್ ಅವರ ಫೋಟೊ ಬಳಸಲು ಬಿಜೆಪಿ ಹಾಗೂ ಆರ್ಎಸ್ಎಸ್ಗೆ ಯಾವುದೇ ಅಧಿಕಾರವಿಲ್ಲ. ಈ ಹಿಂದೆ ಆರ್ಎಸ್ಎಸ್ ಕಾಮರಾಜನ್ ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತ್ತು. ಈಗ ಅವರ ಫೋಟೊವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಳಂಗೋವನ್ ಟೀಕಿಸಿದ್ದಾರೆ.

ಫೋಟೊ ಬಳಸುವುದರಲ್ಲಿ ತಪ್ಪೇನಿದೆ?
1971ರಲ್ಲಿ ರಾಜಾಜಿ ಅವರೊಂದಿಗೆ ಮೈತ್ರಿಯಲ್ಲಿದ್ದ ಜನಸಂಘದಲ್ಲಿ ಅವರು ಇದ್ದರು. ಅವರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕೂಡ ನಂತರ ಜನತಾ ಪಾರ್ಟಿಯಲ್ಲಿ ವಿಲೀನವಾಗಿಲ್ಲವೇ? ಈಗ ಬಿಜೆಪಿ ಅವರ ಫೋಟೊ ಬಳಸುತ್ತಿರುವುದರಲ್ಲಿ ತಪ್ಪೇನಿದೆ ಎಂದು ಹಿರಿಯ ಆರ್ ಎಸ್ಎಸ್ ಮುಖಂಡ ಎಚ್.ರಾಜಾ ಪ್ರಶ್ನಿಸಿದ್ದಾರೆ. ಜೊತೆಗೆ ಕಾಮರಾಜ್ ಅವರ ಮೇಲಿನ ದಾಳಿಯಲ್ಲಿ ಆರ್ ಎಸ್ಎಸ್ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ನಾಯಕರ ಆದರ್ಶ ಗುಣಗಳನ್ನು ಸ್ಮರಿಸುವುದರಲ್ಲಿ ತಪ್ಪೇನು ಎಂದು ಹೇಳಿದ್ದಾರೆ.

ಇದು ಭ್ರಷ್ಟಾಚಾರದ ಹ್ಯಾಕಥಾನ್; ಮೋದಿ ಟೀಕೆ
ಕೊಡಿಸ್ಸೈ ಸ್ಟೇಡಿಯಂನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಪ್ರಧಾನಿ ಮೋದಿ, "ಈ ಇಬ್ಬರ ಮೈತ್ರಿ, ಭ್ರಷ್ಟಾಚಾರದ ಹ್ಯಾಕಥಾನ್ನಂತೆ. ಹೇಗೆ ಕೊಳ್ಳೆ ಹೊಡೆಯಬಹುದು ಎಂಬುದನ್ನು ಚರ್ಚಿಸಲಷ್ಟೇ ಆಗಾಗ ಸೇರುತ್ತಾರೆ ಎಂದು ಹೇಳಿದ್ದಾರೆ. ಇದೇ ಸಂದರ್ಭ ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

"ಜಯಲಲಿತಾ ಅವರನ್ನು ನಡೆಸಿಕೊಂಡ ರೀತಿ ಇಡೀ ತಮಿಳುನಾಡಿಗೆ ಗೊತ್ತಿದೆ"
ಡಿಎಂಕೆ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಸಮಾಜ ವಿರೋಧಿ ಅಂಶಗಳು ರಾರಾಜಿಸುತ್ತವೆ. ಮುಗ್ಧ ಜನರಿಗೆ ಸಮಸ್ಯೆ ಉಂಟು ಮಾಡುವ ಅಂಶಗಳನ್ನು ಪ್ರತಿ ಜಿಲ್ಲೆಯಲ್ಲಿಯೂ ಬಿತ್ತುತ್ತಾರೆ. ಈ ಪಕ್ಷದ ಮುಖಂಡರು ಹಣ ಸುಲಿಗೆ ಮಾಡಲೆಂದೇ ಇದ್ದಾರೆ. ಆದರೆ ಇಂಥ ಸಂಸ್ಕೃತಿಯಿಂದ ಪರಿತಪಿಸುವವರು ಯಾರು ಗೊತ್ತೇ? ತಮಿಳುನಾಡಿನ ಮಹಿಳೆಯರು. ಅಮ್ಮ ಜಯಲಲಿತಾ ಜೀ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿದೆ ಎಂಬುದು ಇಡೀ ತಮಿಳುನಾಡಿಗೆ ಗೊತ್ತಿದೆ ಎಂದು ಹೇಳಿದರು.












Click it and Unblock the Notifications