ಬ್ಯಾಂಕ್ ವಿಲೀನದಿಂದ ಒಬ್ಬೇ ಒಬ್ಬರು ಸಹ ಕೆಲಸ ಕಳೆದುಕೊಳ್ಳಲ್ಲ: ನಿರ್ಮಲಾ ಸೀತಾರಾಮನ್
ಚೆನ್ನೈ, ಸೆಪ್ಟೆಂಬರ್ 1: ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ವಿಲೀನ ಮಾಡುತ್ತಿರುವುದರಿಂದ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಆಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಚೆನ್ನೈನಲ್ಲಿ ಉತ್ತರ ನೀಡಿದ್ದು, ವಿಲೀನದ ನಂತರ ಒಬ್ಬೇ ಒಬ್ಬ ಉದ್ಯೋಗಿಯನ್ನು ಕೂಡ ಉದ್ಯೋಗದಿಂದ ತೆಗೆಯಲ್ಲ ಎಂದಿದ್ದಾರೆ.
ತಪ್ಪಾದ ಮಾಹಿತಿ ನೀಡಲಾಗಿದೆ. ಈ ಎಲ್ಲ ಬ್ಯಾಂಕ್ ಗಳ ಎಲ್ಲ ನೌಕರರ ಒಕ್ಕೂಟಗಳಿಗೂ ಖಾತ್ರಿ ಪಡಿಸಲು ಬಯಸುತ್ತೇನೆ, ಕಳೆದ ಶುಕ್ರವಾರ ಹೇಳಿದ್ದನ್ನೇ ಪುನರುಚ್ಚಾರ ಮಾಡುತ್ತಿದ್ದೇನೆ. ವಿಲೀನದ ಬಗ್ಗೆ ಮಾತನಾಡಿದಾಗಲೇ ಸ್ಪಷ್ಟ ಪಡಿಸಿದ್ದೇನೆ: ಒಬ್ಬ ಉದ್ಯೋಗಿಯನ್ನು ಕೂಡ ಕೆಲಸದಿಂದ ತೆಗೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಉದ್ಯೋಗ ಹೋಗಬಹುದು ಎಂಬ ಆತಂಕದಲ್ಲಿ ಬ್ಯಾಂಕ್ ಗಳ ನೌಕರರ ಒಕ್ಕೂಟದಿಂದ ವಿಲೀನಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದರು. ಕಳೆದ ಶುಕ್ರವಾರದಂದು ನಿರ್ಮಲಾ ಸೀತಾರಾಮನ್ ಅವರು ಹತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ವಿಲೀನ ಮಾಡಿ, ಅವುಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸುವ ಬಗ್ಗೆ ಘೋಷಣೆ ಮಾಡಿದ್ದರು.

ಹೀಗೆ ಬ್ಯಾಂಕ್ ಗಳ ವಿಲೀನ ಮಾಡಿದರೆ ಬ್ಯಾಂಕ್ ಗಳ ಶಾಖೆಯನ್ನು ಮುಚ್ಚಲಾಗುತ್ತದೆ ಹಾಗೂ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಬ್ಯಾಂಕ್ ನೌಕರರ ಒಕ್ಕೂಟ ಆತಂಕ ವ್ಯಕ್ತಪಡಿಸಿತ್ತು.
ಬಿಜೆಪಿಯು ರಾಜಕೀಯ ದ್ವೇಷ ಸಾಧಿಸುವುದನ್ನು ಬಿಟ್ಟು, ಆರ್ಥಿಕ ಸ್ಥಿತಿ ಚೇತರಿಕೆ ಕಡೆಗೆ ಗಮನ ನೀಡಲಿ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾತಿನ ಬಗ್ಗೆ ಕೇಳಿದ್ದಕ್ಕೆ, ಅವರು ಹಾಗೆ ಹೇಳಿದ್ದಾರಾ? ಸರಿ, ಅವರ ಹೇಳಿಕೆಯನ್ನು ಗಮನಿಸುತ್ತೇನೆ ಎಂದಷ್ಟೇ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.












Click it and Unblock the Notifications