ಇಪಿಎಸ್ಗೆ ಅವಹೇಳನೆ ಮಾಡಿಲ್ಲ: ಆಯೋಗಕ್ಕೆ ರಾಜಾ ಉತ್ತರ
ಚೆನ್ನೈ, ಮಾರ್ಚ್ 31: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಅವರ ತಾಯಿಯ ಕುರಿತು ಅವಹೇಳನಾಕಾರಿ ಮಾತನಾಡಿದ ಆರೋಪ ಎದುರಿಸುತ್ತಿರುವ ಡಿಎಂಕೆ ನಾಯಕ ಎ. ರಾಜಾ, ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ. ಚುನಾವಣಾ ಆಯೋಗದ ನೋಟಿಸ್ಗೆ ಉತ್ತರ ನೀಡಿರುವ ರಾಜಾ, ತಾವು ಪಳನಿಸ್ವಾಮಿ, ಎಐಎಡಿಎಂಕೆ ಮತ್ತು ಬಿಜೆಪಿ ವಿರುದ್ಧ ಯಾವುದೇ ಅವಹೇಳನಾಕಾರಿ ಅಥವಾ ಮಾನಿಹಾನಿಕರ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
'ಗೌರವಾನ್ವಿತ ಮುಖ್ಯಮಂತ್ರಿ ವಿರುದ್ಧ ನಾನು ಅವಹೇಳನಾಕಾರಿ ಅಥವಾ ಮಾನಹಾನಿಕರ ಹೇಳಿಕೆ ನೀಡಿದ್ದೇನೆ ಎಂಬುದನ್ನು ನಿರಾಕರಿಸುತ್ತೇನೆ. ಮಹಿಳೆ ಅಥವಾ ತಾಯ್ತನವನ್ನು ಹೀಯಾಳಿಸುವ ಅಥವಾ ಕೀಳಾಗಿಸುವ ಯಾವುದೇ ಮಾತನ್ನು ಆಡಿಲ್ಲ' ಎಂದು ಆಯೋಗಕ್ಕೆ ನೀಡಿರುವ ಉತ್ತರದಲ್ಲಿ ಅವರು ಬರೆದಿದ್ದಾರೆ.
'ಅಂಬೇಡ್ಕರ್,ಪೆರಿಯಾರ್ ಮತ್ತು ಅಣ್ಣಾ ಅವರ ವಿದ್ಯಾರ್ಥಿಯಾಗಿ, ಕಲೈನಾರ್ ಕರುಣಾನಿಧಿ ಅವರಿಂದ ಮಾರ್ಗದರ್ಶನಗೊಂಡ ವ್ಯಕ್ತಿಯಾಗಿ ಮತ್ತು ದ್ರಾವಿಡ ಮುನ್ನೇತ್ರ ಕಳಂಗಂನ ಸದಸ್ಯನಾಗಿ, ನಾನು ಮಹಿಳೆಯರನ್ನು ಅಗೌರವಿಸುವ ಚಟುವಟಿಕೆಯಲ್ಲಿ ಈ ಹಿಂದೆ ಭಾಗಿಯಾಗಿಲ್ಲ, ಆಗುತ್ತಿಲ್ಲ ಮತ್ತು ಎಂದಿಗೂ ಆಗುವುದಿಲ್ಲ. ದ್ರಾವಿಡ ಚಳವಳಿಯ ಮೂಲ ಬುನಾದಿಯು ಮಹಿಳಾ ಸಬಲೀಕರಣ ಮತ್ತು ಸಮಾಜದಲ್ಲಿ ಅವರಿಗೆ ಸಮಾನ ಹಕ್ಕುಗಳನ್ನು ನೀಡುವುದಾಗಿದೆ. ಅಂತಹ ಚಳವಳಿಗೆ ಸೇರಿದವನಾಗಿ ಮಹಿಳೆ ಅಥವಾ ತಾಯ್ತನಕ್ಕೆ ಅಗೌರವ ಉಂಟುಮಾಡುವುದನ್ನು ಕನಸಿನಲ್ಲಿಯೂ ಯಾರೂ ಯೋಚಿಸಲಾರರು' ಎಂದು ಅವರು ಹೇಳಿದ್ದಾರೆ.

ಮಾರ್ಚ್ 26ರಂದು ಚುನಾವಣಾ ಪ್ರಚಾರದ ವೇಳೆ, ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಮತ್ತು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನಾಯಕತ್ವದ ನಡುವೆ ಹೋಲಿಕೆ ಸಂದರ್ಭದಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ಸ್ಟಾಲಿನ್ ಅವರ ರಾಜಕೀಯ ಜೀವನವು "ಕಾನೂನುಬದ್ಧವಾಗಿ ಜನಿಸಿದ ಸಂಪೂರ್ಣ ಪ್ರಬುದ್ಧ ಮಗುವಿನಂತಿದೆ ಮತ್ತು "ಇಪಿಎಸ್ ಅವರು ಕಾನೂನು ಬಾಹಿರದಿಂದ ಹುಟ್ಟಿದ ಅಕಾಲಿಕ ಮಗುವಿನಂತೆ' ಎಂದು ಹೋಲಿಕೆ ಮಾಡಿದ್ದರು. ಇದರ ವಿರುದ್ಧ ಎಐಎಡಿಎಂಕೆ ದೂರು ನೀಡಿತ್ತು.
'ಪಳನಿಸ್ವಾಮಿ ಅವರು ಸಿಎಂ ಹುದ್ದೆಗಾಗಿ ತೆವಳಿಕೊಂಡು ಹೋಗಿ ಶಶಿಕಲಾ ಅವರ ಕಾಲು ಹಿಡಿದಿದ್ದರು. ತಮಗೆ ಜ್ಞಾನ ಮತ್ತು ಘನತೆ ಇದೆ ಎಂದು ಭಾವಿಸಿರುವ ಇಪಿಎಸ್, ಸರಿಸುಮಾರು ತಮ್ಮದೇ ವಯಸ್ಸಿನ ಅಥವಾ ತಮಗಿಂತ ಆರು ತಿಂಗಳು ಚಿಕ್ಕವರಾದ ಶಶಿಕಲಾ ಕಾಲು ಹಿಡಿದಿದ್ದರು' ಎಂದೂ ರಾಜಾ ಹೇಳಿದ್ದರು. ಈ ಬಗ್ಗೆಯೂ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ












Click it and Unblock the Notifications