ಕೊಯಮತ್ತೂರಿನಲ್ಲಿ ಪೆರಿಯಾರ್ ಪ್ರತಿಮೆ ಅಪವಿತ್ರಗೊಳಿಸಿದ ದುಷ್ಕರ್ಮಿಗಳು
ಕೊಯಮತ್ತೂರು ಜನವರಿ 9: ತಮಿಳುನಾಡಿನ ಕೊಯಮತ್ತೂರಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸಮಾಜ ಸುಧಾರಕ ಪೆರಿಯಾರ್ ಇವಿ ರಾಮಸಾಮಿ ಅವರ ಪ್ರತಿಮೆ ಭಾನುವಾರ ಬೆಳಗ್ಗೆ ಅಪವಿತ್ರಗೊಂಡಿರುವುದು ಕಂಡುಬಂದಿದೆ. ವೆಲ್ಲಲೂರಿನ ಪೆರಿಯಾರ್ ಅಧ್ಯಯನ ಕೇಂದ್ರದ ಮುಂಭಾಗದಲ್ಲಿರುವ ಪ್ರತಿಮೆಗೆ ಚಪ್ಪಲಿಯಿಂದ ಹಾರ ಹಾಕಿರುವುದು ಕಂಡುಬಂದಿದೆ. ತಲೆಗೆ ಕೇಸರಿ ಬಣ್ಣದ ಪುಡಿ ಎರಚಲಾಗಿದೆ.
ಈ ದುಷ್ಕೃತ್ಯವನ್ನು ಖಂಡಿಸಿ ಸ್ಥಳೀಯರು ದ್ರಾವಿಡ ಕಳಗಂ (ಡಿಕೆ) ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಪೋದನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿಯ ತಂಡ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದೆ. ಪೊಲೀಸರು ಮತ್ತು ದ್ರಾವಿಡ ಕಳಗಂ ಕಾರ್ಯಕರ್ತರು ಪ್ರತಿಮೆಯನ್ನು ಪರಿಶೀಲಿಸಿ ಕೇಸರಿ ಬಣ್ಣದ ಪುಡಿಯನ್ನು ತೆರವುಗೊಳಿಸಿದ್ದಲ್ಲದೆ ಚಪ್ಪಲಿಗಳನ್ನು ತೆಗೆದಿದ್ದಾರೆ. ಬಳಿಕ ದ್ರಾವಿಡ ಕಳಗಂ ಕಾರ್ಯಕರ್ತರು ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಅಪಮಾನ ಮಾಡಿದವರನ್ನು ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸರ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸರು ಆ ಪ್ರದೇಶದಲ್ಲಿನ ಕೆಲವು ಕಣ್ಗಾವಲು ಕ್ಯಾಮೆರಾಗಳಿಂದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.













Click it and Unblock the Notifications