ತಮಿಳುನಾಡು ಚುನಾವಣೆ; ಬಿಜೆಪಿ ಅಧ್ಯಕ್ಷರ ಮಹತ್ವದ ಘೋಷಣೆ!
ಚೆನ್ನೈ, ಅಕ್ಟೋಬರ್ 26: "2021ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮವಹಿಸಿ ಕೆಲಸ ಮಾಡುತ್ತೇನೆ" ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಘೋಷಣೆ ಮಾಡಿದ್ದಾರೆ.
ಸೋಮವಾರ ಎಲ್. ಮುರುಗನ್ ಮಾಡಿದ ಘೋಷಣೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. "ನನ್ನ ಸಹೋದರ, ಸಹೋದರಿಯನ್ನು ವಿಧಾನಸಭೆಗೆ ಕಳಿಸುವ ಕಾರ್ಯದಲ್ಲಿ ನಾನು ತೊಡಗಿಕೊಳ್ಳುತ್ತೇನೆ" ಎಂದು ಮುರುಗನ್ ಹೇಳಿದ್ದಾರೆ.
ಎಲ್. ಮುರುಗನ್ ಹೇಳಿಕೆ ಬಗ್ಗೆ ರಾಜ್ಯದ ರಾಜಕೀಯ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ. "ಮುರುಗನ್ ಘೋಷಣೆ ಮಾಡಲು ಆಯ್ದುಕೊಂಡ ಸಮಯ ತಪ್ಪು. ನಾಯಕನಾದವನು ಮುಂದೆ ನಿಂತು ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು. ಅವರ ಹಿಂದೆ ನಿಲ್ಲಬಾರದು" ಎಂದು ವಿಶ್ಲೇಷಣೆ ಮಾಡಿದ್ದಾರೆ.

"ಪಕ್ಷದ ಅಧ್ಯಕ್ಷರಾದವರು ಚುನಾವಣೆಗೆ ಸ್ಪರ್ಧಿಸಲು ತಯಾರಿರಬೇಕು. ಇದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತದೆ. ಇಂತಹ ಹೇಳಿಕೆಯನ್ನು ಜನರು ಬಯಸುವುದಿಲ್ಲ" ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡು ಬಿಜೆಪಿ ಘಟಕ ನವೆಂಬರ್ 6ರಿಂದ ಡಿಸೆಂಬರ್ 6ರ ತನಕ ರಾಜ್ಯದಲ್ಲಿ ವರ್ಚುವಲ್ ಸಮಾವೇಶಗಳನ್ನು ಆಯೋಜನೆ ಮಾಡಿದೆ. ಕೇಂದ್ರ ಸಚಿವರು ಸಹ ಈ ಸಮಾವೇಶಗಳಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನವೆಂಬರ್ 6ರಂದು ತಿರುತ್ತಣಿಯಲ್ಲಿ ವರ್ಚುವಲ್ ಸಮಾವೇಶಕ್ಕೆ ಚಾಲನೆ ಸಿಗಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಮಾವೇಶಗಳ ಮೂಲಕವೇ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. "ಎನ್ಡಿಎ ಮೈತ್ರಿಕೂಟ 2021ರಲ್ಲಿ ರಾಜ್ಯದಲ್ಲಿ ಅಧಿಕಾರ ಪಡೆಯಲಿದೆ" ಎಂದು ಎಲ್. ಮುರುಗನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications