ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ
Recommended Video
ಚೆನ್ನೈ, ಆಗಸ್ಟ್ 07: ಅಭಿಮಾನಿಗಳ ಪಾಲಿನ 'ಅಣ್ಣಾಚಿ', 'ಕಳೈನರ್', ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ವರಿಷ್ಠ, ತಮಿಳುನಾಡಿನ ರಾಜಕೀಯ ಚಿತ್ರಣವನ್ನು ಬದಲಾಯಿಸಿದ ಬರಹಗಾರ, ಕವಿ, ವಾಸ್ತುಶಿಲ್ಪಿ, ಹಠವಾದಿ, ಸ್ವಾಭಿಮಾನಿ, ಐದು ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಮುತ್ತುವೇಲ್ ಕರುಣಾನಿಧಿ ತಮ್ಮ ಇಹಲೋಕ ರಾಜಕೀಯ ಜೀವನವನ್ನು ಮುಗಿಸಿದ್ದಾರೆ.
ಡಿಎಂಕೆ ಸ್ಥಾಪಕ ಸಿ.ಎನ್ ಅಣ್ಣಾದೊರೈ ಅವರ ನಂತರ ಪಕ್ಷದವನ್ನು ಸಮರ್ಥವಾಗಿ ಮುನ್ನಡೆಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಮಹತ್ವ ತಂದವರು.
ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ
ಕರುಣಾನಿಧಿಯವರು ಜಸ್ಟಿಸ್ ಪಾರ್ಟಿಯ ಅಳಗಿರಿಸ್ವಾಮಿಯವರ ಭಾಷಣ ಕೇಳಿ ಪ್ರೇರಿತರಾಗಿ ತಮ್ಮ 14ನೇ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಇಳಿದರು ಹಾಗೂ 1932ರಲ್ಲಿ ಅಳಗಿರಿಸ್ವಾಮಿಯವರಿಂದ ಹೆಚ್ಚು ಪ್ರಭಾವಿತರಾಗಿ ಹಿಂದಿ-ವಿರೋಧಿ ಚಳವಳಿಗಳಲ್ಲಿಯೂ ಭಾಗವಹಿಸಿದರು. ಅವರ ಪ್ರದೇಶದ ಯುವಜನರಿಗಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಸದಸ್ಯರಿಗೆ ಕೈಬರಹದ ಪತ್ರಿಕೆ 'ಮಾನವರ್ ನೇಸನ್'ಅನ್ನು ಹಂಚಿದರು. ನಂತರ 'ತಮಿಳುನಾಡು ತಮಿಳು ಮಾನವರ್ ಮನ್ರಮ್' ಎಂಬ ಒಂದು ವಿದ್ಯಾರ್ಥಿ ಸಂಘವನ್ನು ಕಟ್ಟಿದರು.
ಕರುಣಾನಿಧಿ ಸ್ವತಃ ವಿದ್ಯಾರ್ಥಿ ಸಮುದಾಯದ ಜತೆ ಇತರೆ ಸದಸ್ಯರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಕೊಂಡರು. ಅವರು ಸಮೀಪದ ಗುಡಿಸಲುಗಳಿಗೆ ಭೇಟಿಕೊಟ್ಟು ತಮ್ಮ ಕೈಲಾದ ಎಲ್ಲ ನೆರವು ನೀಡಿದರು. ಈ ಸದಸ್ಯರಿಗಾಗಿ ಇಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿದರು, ಅದು ಮುಂದೆ DMK ಪಕ್ಷದ ಅಧಿಕೃತ ಪತ್ರಿಕೆಯಾದ ಮುರಸೊಳಿ ಪತ್ರಿಕೆಯಾಗಿ ಬೆಳೆಯಿತು. ರಾಜಕೀಯ ಲೋಕದ 'ಕಲಾವಿದ' ಕರುಣಾನಿಧಿ ಅವರ ರಾಜಕಾರಣದ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದೆ ಓದಿ...
ಚಳವಳಿಯ ಮೂಲಕ ರಾಜಕೀಯ ಪ್ರವೇಶ
ಕರುಣಾನಿಧಿಯವರು ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಮೊದಲು ಚುನಾಯಿತರಾದರು. ದಾಲ್ಮಿಯಪುರಮ್ ರೈಲು ನಿಲ್ದಾಣದ ಹೆಸರು ಬದಲಾವಣೆಗಾಗಿ ಮಾಡಿದ ಚಳವಳಿಯ ಸಂದರ್ಭದಲ್ಲಿ ಅವರನ್ನು ಬಂಧಿಸಿ, ತಿರುಚಿರಾಪಲ್ಲಿ ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು.
ಅವರು 1961ರಲ್ಲಿ DMK ಕೋಶಾಧಿಕಾರಿಯಾದರು ಹಾಗೂ 1962ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದರು. 1967ರಲ್ಲಿ DMK ಅಧಿಕಾರಕ್ಕೆ ಬಂದಾಗ, ಲೋಕೋಪಯೋಗಿ ಇಲಾಖೆಯ ಮಂತ್ರಿ ಪದವಿ ಪಡೆದರು. 1969ರಲ್ಲಿ ಅಣ್ಣಾದೊರೈ ನಿಧನರಾದ ನಂತರ, ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾದರು.
ಜುಲೈ 27, 1969ರಲ್ಲಿ ಡಿಎಂಕೆ ಅಧ್ಯಕ್ಷರಾದರು
ಜುಲೈ 27, 1969ರಲ್ಲಿ ಡಿಎಂಕೆ ಅಧ್ಯಕ್ಷರಾದರು. ಇದಾದ ಬಳಿಕ 1969ರಿಂದ 1971ರ ತನಕ ಮುಖ್ಯಮಂತ್ರಿಯಾದರು. ಇದಕ್ಕೂ ಮುನ್ನ ವಿರೋಧ ಪಕ್ಷದ ಉಪ ನಾಯಕ, ಲೋಕೋಪಯೋಗಿ ಇಲಾಖೆಯ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.
1971ರಲ್ಲಿ ಮತ್ತೊಮ್ಮೆ ಅಧಿಕಾರ ಗಳಿಸಿದ ಡಿಎಂಕೆ ನೇತೃತ್ವದ ಸರ್ಕಾರದ ಸಿಎಂ ಆದರು. ಆದರೆ, 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆಯಬೇಕಾಯಿತು.
1976ರಲ್ಲಿ ಅಧಿಕಾರ ಕಳೆದುಕೊಂಡರು
ಎಮೆರ್ಜನ್ಸಿಯ ನಂತರ ಡಿಎಂಕೆ ಅಧಿಕಾರ ಕಳೆದುಕೊಂಡಿತು. ಮತ್ತೆ ಅಧಿಕಾರ ಗಳಿಸಿದ್ದು 1989ರಲ್ಲಿ ಅದು ಎಂಜಿ ರಾಮಚಂದ್ರನ್ ಅವರ ನಿಧನದ ನಂತರ ಎಂಬುದು ಗಮನಾರ್ಹ. ಮೂರನೇ ಬಾರಿಗೆ 1989ರಿಂದ 1991ರ ತನಕ ಸಿಎಂ ಆಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಯಶಸ್ಸು ಸಿಗದಿದ್ದರೂ ವಿಪಿ ಸಿಂಗ್ ಸರ್ಕಾರದಲ್ಲಿ ಸೋದರಳಿಯ ಮುರಸೋಳಿ ಮಾರನ್ ಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಗುವಂತೆ ಮಾಡಿದರು. ಆದರೆ, ಮಾರನ್ ಅವರ ರಾಜಕೀಯ ಬದುಕಿಗೆ ನೆರವಾದರು.
ತಮಿಳು ಮನಿಲಾ ಕಾಂಗ್ರೆಸ್ ಜತೆ ಸಖ್ಯ
1996ರಲ್ಲಿ ಕಾಂಗ್ರೆಸ್ಸಿನಿಂದ ಬಂಡಾಯವೆದ್ದು ತಮಿಳು ಮನಿಲಾ ಕಾಂಗ್ರೆಸ್ ಎಂಬ ಪಕ್ಷ ಕಟ್ಟಿದ ಜಿ.ಕೆ ಮೂಪನಾರ್ ಜತೆ ಸಖ್ಯ ಬೆಳೆಸಿದ ಎಂ ಕರುಣಾನಿಧಿ ಅವರು ಮತ್ತೆ ಅಧಿಕಾರ ಗಳಿಸಿ ಸಿಎಂ ಆದರು. 2001ರ ತನಕ ಅಧಿಕಾರ ನಡೆಸಿದರು.
ವಿಶೇಷವೆಂದರೆ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಆದರೆ, 2004ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಜತೆ ಮೈತ್ರಿ ಗಳಿಸಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದರು. 2009ರ ತನಕ ಈ ಮೈತ್ರಿ ಅಬಾಧಿತವಾಗಿತ್ತು. ಈ ಬಲದಿಂದಲೇ 2006ರಲ್ಲಿ ಐದನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಿತು.
ಡಿಎಂಕೆ ತೊರೆದ ವೈಕೋ, ಸ್ಟಾಲಿನ್ ನೇತೃತ್ವ
ಕರುಣಾನಿಧಿಯವರು ಸ್ವಜನಪಕ್ಷಪಾತ ಉತ್ತೇಜಿಸಲು ಹಾಗೂ ನೆಹರು-ಗಾಂಧಿ ಕುಟುಂಬದ ಮಾದರಿಯಲ್ಲಿ ಒಂದು ರಾಜಕೀಯ ವಂಶಾಡಳಿತ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿ ವಿರೋಧ ಪಕ್ಷಗಳು, ಅವರ ಪಕ್ಷದ ಅನೇಕ ಸದಸ್ಯರು ಹಾಗೂ ಕೆಲವು ರಾಜಕೀಯ ವೀಕ್ಷಕರು ದೂಷಿಸಿದರು. ಹೀಗೆ ಖಂಡಿಸಿದವರಲ್ಲಿ DMKಅನ್ನು ಬಿಟ್ಟುಹೋದ ವೈಕೊ ಧ್ವನಿ ದೊಡ್ಡದಾಗಿತ್ತು.
ಎಂ ಕೆ ಅಳಗಿರಿ ಹಾಗೂ ಎಂಕೆ ಸ್ಟಾಲಿನ್ ನಡುವಿನ ನಡುವಿನ ರಾಜಕೀಯ ಪೈಪೋಟಿಗೆ ಕರುಣಾನಿಧಿ ಸಾಕ್ಷಿಯಾದರು. ಆದರೆ, ಐದು ಬಾರಿ ಸಿಎಂ ಆದರೂ ಒಮ್ಮೆ ಕೂಡಾ ತಮ್ಮ ಮಕ್ಕಳನ್ನು ಸಿಎಂ ಪಟ್ಟದಲ್ಲಿ ಕೂರಿಸಲಿಲ್ಲ. ಎರಡು ಬಾರಿ ಶಾಸಕರಾದರೂ ಚೆನ್ನೈನ 44ನೇ ಮೇಯರ್ ಆಗಿ, ನಾಲ್ಕನೇ ಅವಧಿಗೆ ಶಾಸಕರಾದ ಬಳಿಕ ಕ್ಯಾಬಿನೆಟ್ ಸೇರುವ ಅವಕಾಶ ಸಿಕ್ಕಿತು.