ವರ್ಧಾ ಚಂಡಮಾರುತ ಭೀತಿಯಲ್ಲಿ ಚೆನ್ನೈ, ಬೆಂಗಳೂರಲ್ಲೂ ಮಳೆ ಸಾಧ್ಯತೆ
ಚೆನ್ನೈ, ಡಿಸೆಂಬರ್ 12: ಎರಡು ದಶಕಗಳ ನಂತರ ಮೊದಲ ಬಾರಿಗೆ ಚೆನ್ನೈ ಮೇಲೆ ವರ್ಧಾ ಚಂಡಮಾರುತ ಸೋಮವಾರ ಮಧ್ಯಾಹ್ನ ಅಪ್ಪಳಿಸಲಿದೆ. ನೂರು ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 20 ಸೆಂ.ಮೀ. ನಷ್ಟು ಮಳೆಯಾಗುವ ಸಾಧ್ಯತೆ ಇದೆ. ಒಂದು ಮೀಟರ್ ನಷ್ಟು ಎತ್ತರಕ್ಕೆ ಸಮುದ್ರದ ಅಲೆಗಳು ಏಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚೆನ್ನೈನಿಂದ ಹೊರಡುವ ಎಲ್ಲ ವಿಮಾನ್ಗಳನ್ನು ರದ್ದು ಮಾಡಲಾಗಿದೆ. ಇಲ್ಲಿಗೆ ಬಂದಿಳಿಯುವ ವಿಮಾನಗಳ ಮಾರ್ಗ ಬದಲಿಸುವಂತೆ ಕೂಡ ಸೂಚನೆ ನೀಡಲಾಗಿದೆ. ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ ಇದೆ.[ಇನ್ನು 4 ದಿನಗಳಲ್ಲಿ ಆಂಧ್ರಕ್ಕೆ ಅಪ್ಪಳಿಸಲಿದೆ 'ವರ್ಧಾ']
ಚೆನ್ನೈ ಹಾಗೂ ಸಮೀಪ ಕಾಂಚೀಪುರಂ, ತಿರುವಳ್ಳೂರು ಜಿಲ್ಲೆಗಳ ಜನರಿಗೆ ರಾಜ್ಯ ಸರಕಾರ ಎಚ್ಚರಿಕೆ ನೀಡಿದೆ. ಅಗತ್ಯ ಆಹಾರ ಪದಾರ್ಥಗಳನ್ನು ಶೇಖರಿಸಿಕೊಳ್ಳಲು ಹಾಗೂ ಮುಂದಿನ ಮಾಹಿತಿ ನೀಡುವವರೆಗೆ ಆದಷ್ಟು ಮನೆಗಳಲ್ಲೇ ಇರುವಂತೆ ಸೂಚನೆ ನೀಡಿದೆ. ಶಿಕ್ಷಣ ಸಂಸ್ಥೆಗಳಿಗೆ ರಜಾ ಘೋಷಣೆ ಮಾಡುವುದರ ಜತೆಗೆ, ಖಾಸಗಿ ಕಂಪನಿ ಉದ್ಯೋಗಿಗಳಿಗೆ ರಜಾ ನೀಡುವಂತೆ ತಿಳಿಸಲಾಗಿದೆ.
ಅಥವಾ ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಲಾಗಿದೆ. ಚಂಡಮಾರುತ ಎಲ್ಲಿ ಕೇಂದ್ರೀಕೃತವಾಗುತ್ತದೆ ಎಂಬ ಖಚಿತ ಮಾಹಿತಿ ದೊರಕದಿದ್ದರೂ ಚೆನ್ನೈ ಸಮೀಪದಲ್ಲೇ ಆಗುತ್ತದೆ ಎಂಬ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.[ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ]
ಇಪ್ಪತ್ತೆರಡು ವರ್ಷಗಳಲ್ಲೇ ಚೆನ್ನೈ ಪಾಲಿನ ಗಂಭೀರ ಪ್ರಮಾಣದ ಚಂಡಮಾರುತ ಇದಾಗಲಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. 1994ರಲ್ಲಿ ಚೆನ್ನೈನಲ್ಲಿ ಇದೇ ರೀತಿಯ ಚಂಡಮಾರುತ ಅಪ್ಪಳಿಸಿತ್ತು. ಇನ್ನು 2012ರಲ್ಲಿ ಮಹಾಬಲಿಪುರಂ ಬಳಿ ನಿಲಂ ಚಂಡಮಾರುತ ಅಪ್ಪಳಿಸಿತ್ತು. ಪರಿಸ್ಥಿತಿ ನಿರ್ವಹಣೆಗಾಗಿ ತಮಿಳುನಾಡು ಮುಖ್ಯಮಂತ್ರಿ ಸಭೆಗಳನ್ನು ನಡೆಸಿ, ಅಗತ್ಯ ಸೂಚನೆ ನೀಡಿದ್ದಾರೆ.
ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯ ಸಂಖ್ಯೆಯ ಸಿಬ್ಬಂದಿಯನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜನೆ ಮಾಡಲಾಗಿದೆ.