'ರಜನಿ, ಕಮಲ್ ಮುಖಕ್ಕೆ ಶೇ 10ರಷ್ಟು ವೋಟ್ ಸಿಗಲ್ಲ'
ಚೆನ್ನೈ, ಅಕ್ಟೋಬರ್ 09: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ರಜನಿಕಾಂತ್, ಕಮಲ್ ಹಾಸನ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕುತೂಹಲ ಮುಂದುವರೆದಿದೆ.
ಈ ನಡುವೆ ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರ ಮುಖಕ್ಕೆ ಶೇ10ರಷ್ಟು ವೋಟ್ ಬೀಳಲ್ಲ ಎಂಬ ಮಾತನ್ನು ಕಮಲ್ ಅವರ ಅಣ್ಣ ಚಾರು ಹಾಸನ್ ಹೇಳಿದ್ದಾರೆ. ಕನ್ನಡದಲ್ಲಿ 'ತಬರನ ಕತೆ' ಚಿತ್ರದಲ್ಲಿ ನಟಿಸಿದ್ದ ಚಾರುಹಾಸನ್ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ.

ಕಮಲ್ ಹಾಗೂ ರಜನಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ದೊರೆಯುವ ಬಗ್ಗೆ ನನಗೆ ನಂಬಿಕೆಯಿಲ್ಲ ಇಬ್ಬರು ಒಟ್ಟಿಗೆ ಪಕ್ಷ ಕಟ್ಟಿದರೂ ಶೇ 10ರಷ್ಟು ಮತ ಪಡೆಯುವುದು ಅನುಮಾನ. ಸಾರ್ವಜನಿಕರಿಗೆ ಇರುವ ರಾಜಕೀಯ ಅರಿವಿನಲ್ಲಿ ಎಳ್ಳಷ್ಟು ಇವರಿಬ್ಬರಿಗೆ ಇಲ್ಲ. ಸಿನಿಮಾ ಬಣ್ಣ ನೋಡಿಕೊಂಡು ಮತ ಹಾಕುವ ಕಾಲ ಈಗ ಇಲ್ಲ ಎಂದು ಕಮಲ್ ಅವರ ಸಹೋದರ, ನಟಿ ಸುಹಾಸಿನಿ ತಂದೆ, ಹಿರಿಯ ನಟ ಚಾರು ಹಾಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಂತಿ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಚಾರುಹಾಸನ್ ಅವರು ಖಡಕ್ ಸಂದೇಶ ನೀಡಿದ್ದಾರೆ. 'ರಜನಿಕಾಂತ್ ರಾಜಕೀಯಕ್ಕೇ ಬರಲ್ಲ. ಕಮಲ್ ರಾಜಕೀಯಕ್ಕೆ ಬಂದ್ರೂ ತಮಿಳುನಾಡು ಸಿಎಂ ಆಗೋ ಚಾನ್ಸ್ ಇಲ್ಲ' ಎಂದಿದ್ದಾರೆ.

ಹಾಲಿ ರಾಜಕಾರಣಿಗಳಲ್ಲಿ ಸಿಎಂ ಆಗುವ ಅರ್ಹತೆ ಯಾರಿಗಿದೆ ಎನ್ನುವ ಪ್ರಶ್ನೆಗೆ, ಪಿಎಂಕೆ ಯುವ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಅನ್ಬುಮಣಿ ರಾಮದಾಸ್ಗೆ ಆ ಅರ್ಹತೆ ಇದೆ ಎಂದಿದ್ದಾರೆ.
ಈ ನಡುವೆ ಕಮಲ್ ಹಾಸನ್ ಅವರ ಹುಟ್ಟುಹಬ್ಬದ ದಿನ ನವೆಂಬರ್ 7 ರಂದು ತಮ್ಮ ಪಕ್ಷದ ಧ್ವಜ, ಪಕ್ಷ ಸ್ಥಾಪನೆಯ ಧೇಯೋದ್ದೇಶಗಳನ್ನು ಘೋಷಿಸಲು ಯೋಜಿಸಿದ್ದಾರೆ.












Click it and Unblock the Notifications