ಸಿಧು ಮೂಸೆವಾಲ ಹತ್ಯೆ ಘಟನೆ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆದೇಶ
ಚಂಡೀಗಡ, ಮೇ 30: ನಿನ್ನೆ ಭಾನುವಾರ ಕಾಂಗ್ರೆಸ್ ಮುಖಂಡ ಮತ್ತು ಗಾಯಕ ಸಿಧು ಮೂಸೆವಾಲ ಅವರ ದಾರುಣ ಹತ್ಯೆ ಘಟನೆಯ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದಾರೆ. ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹೈಕೋರ್ಟ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರನ್ನು ಸಿಎಂ ಸೋಮವಾರ ಮನವಿ ಮಾಡಿದ್ದಾರೆ.
ಸಿಧು ಮೂಸೆವಾಲ ತಂದೆ ಬಲ್ಕೌರ್ ಸಿಂಗ್ ಭಾನುವಾರ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಸಿಎಂ ಮಾನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಹಾಗೆಯೇ, ತಮ್ಮ ಮಗನ ಹತ್ಯೆಯನ್ನು ಗ್ಯಾಂಗ್ ವಾರ್ಗೆ ತಳುಕು ಹಾಕಿದ್ದ ಪಂಜಾಬ್ ಡಿಜಿಪಿ ಕ್ಷಮೆ ಕೋರಬೇಕು. ಸರಕಾರ ಭದ್ರತೆ ವಾಪಸ್ ಪಡೆದಿದ್ದ ವಿಐಪಿಗಳ ಮಾಹಿತಿಯನ್ನು ಸಾರ್ವತ್ರಿಕಗೊಳಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದೂ ಬಲಕೌರ್ ಸಿಂಗ್ ಆಗ್ರಹಿಸಿದ್ದರು.
ಸಿಧು ಮೂಸೆವಾಲರ ತಂದೆಯ ಒತ್ತಾಯಕ್ಕೆ ಮಣಿದಿರುವ ಮಾನ್ ಇದೀಗ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಲು ಒಪ್ಪಿಕೊಂಡಿದ್ದಾರೆ. ಗ್ಯಾಂಗ್ ವಾರ್ಗೆ ಈ ಘಟನೆಯನ್ನು ತಳುಕುಹಾಕಿ ಹೇಳಿಕೆ ನೀಡಿದ್ದ ಪಂಜಾಬ್ ಡಿಜಿಪಿಯಿಂದ ಸಿಎಂ ಸ್ಪಷ್ಟನೆ ಕೇಳಿ ಆದೇಶ ಮಾಡಿದ್ಧಾರೆ.

ಹಾಗೆಯೇ, ಎನ್ಐಇ ಇತ್ಯಾದಿ ಯಾವುದೇ ತನಿಖಾ ಸಂಸ್ಥೆಗಳಿಗೂ ರಾಜ್ಯ ಸರಕಾರ ಸಹಕಾರ ನೀಡುತ್ತದೆ ಎಂದು ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಭಾನುವಾರ ಪಂಜಾಬ್ನ ಮಾನಸ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಆಗಂತುಕ ವ್ಯಕ್ತಿಗಳು ಸಿಧು ಮೂಸೆವಾಲರ ಕಾರನ್ನು ಅಡ್ಡಗಟ್ಟಿ ಗುಂಡಿನ ಸುರಿಮಳೆಗೈದು ಹತ್ಯೆಗೈದಿದ್ದಾರೆ. ಇದು ವಿವಿಧ ಮಂದಿಗೆ ರಾಜ್ಯ ಸರಕಾರ ನೀಡಿದ್ದ ಭದ್ರತಾ ವ್ಯವಸ್ಥೆಯನ್ನು ವಾಪಸ್ ಪಡೆದುಕೊಂಡ ಎರಡು ದಿನದಲ್ಲಿ ಸಂಭವಿಸಿದ ಘಟನೆಯಾಗಿದೆ.
ತಿಹಾರ್ ಜೈಲಿಂದ ಸ್ಕೆಚ್?
ಕೆನಡಾ ಮೂಲದ ಗ್ಯಾಂಗ್ ಲೀಡರ್ ಲಾರೆನ್ಸ್ ಬಿಷ್ಣೋಯ್ ಶಿಷ್ಯ ಹಾಗೂ ಮತ್ತೊಬ್ಬ ಕೆನಡಾ ಮೂಲದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಎಂಬಾತ ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ. ಮತ್ತೊಂದು ಮಾಧ್ಯಮ ವರದಿ ಪ್ರಕಾರ, ತಿಹಾರ್ ಜೈಲಿಂದ ಹತ್ಯೆಯ ಸಂಚು ನಡೆದಿರುವ ಶಂಕೆ ಇದೆ. ತಿಹಾರ್ ಜೈಲಿಂದ ಮೊಬೈಲ್ ಕರೆಯೊಂದು ಗೋಲ್ಡಿ ಬ್ರಾರ್ಗೆ ಹೋಗಿರುವುದು ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ದೆಹಲಿ ಪೊಲೀಸರು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದ್ದ ಶಾರುಖ್ ಹೆಸರಿನ ಪಾತಕಿಯೊಬ್ಬ ಗೋಲ್ಡಿ ಬ್ರಾರ್ ಜೊತೆ ಮೆಸೇಜ್ ವಿನಿಮಯ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಳೆದ ವರ್ಷ ಲಾರೆನ್ಸ್ ಬಿಷ್ಣೋಯ್ ತಂಡದ ಸಹಚರ ವಿಕ್ರಮ್ಜಿತ್ ಅಲಿಯಾಸ್ ವಿಕಿ ಮಿದ್ದುಖೆರಾ ಎಂಬುವನ ಹತ್ಯೆಯಾಗಿತ್ತು. ಆ ಘಟನೆಯಲ್ಲಿ ಸಿಧು ಮೂಸೆವಾರ ಮ್ಯಾನೇಜರ್ ಶಗನ್ಪ್ರೀತ್ ಎಂಬಾತರ ಕೈವಾಡ ಇತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಪ್ರತೀಕಾರವಾಗಿ ಸಿಧು ಮೂಸೆವಾಲರ ಹತ್ಯೆಯಾಗಿರಬಹುದು ಎಂಬುದು ಪಂಜಾಬ್ ಪೊಲೀಸರ ಆರಂಭದ ಅನುಮಾನ. ಲಾರೆನ್ಸ್ ಬಿಷ್ಣೋಯ್ ಸದ್ಯ ಪೊಲೀಸರ ವಶದಲ್ಲಿದ್ದು ರಾಜಸ್ಥಾನದ ಜೈಲೊಂದರಲ್ಲಿ ಕಂಬಿ ಎಣಿಸುತ್ತಿದ್ಧಾನೆ. ಪೊಲೀಸರು ಬಿಷ್ಣೋಯ್ ಮತ್ತವರ ಸಹಚರರಾದ ಕಾಲಾ ಜಥೇಡಿ ಮತ್ತು ಕಾಲಾ ರಾಣಾ ಅವರನ್ನು ವಿಚಾರಣೆ ನಡೆಸುತ್ತಿದ್ಧಾರೆ. ಇದೇ ವೇಳೆ, ಹತ್ಯೆಯ ಹೊಣೆ ಹೊತ್ತಿರುವ ಗೋಲ್ಡಿ ಬ್ರಾರ್ ಕೆನಡಾದಲ್ಲೇ ಇದ್ಧಾನೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications