ಪಂಜಾಬ್ ಚುನಾವಣೆ: ಶೀಘ್ರ ಸಿಎಂ ಅಭ್ಯರ್ಥಿ ಘೋಷಣೆ ಎಂದ ರಾಹುಲ್
ಜಲಂಧರ್ , ಜನವರಿ 28: ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಬಾಕಿ ಉಳಿದಿದೆ, ಜನವರಿ 27ರಂದು ಪಂಜಾಬ್ಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೀಘ್ರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ 'ನವಿ ಸೋಚ್ ನವ ಪಂಜಾಬ್' ಎಂಬ ಹೆಸರಿನ ವರ್ಚ್ಯುವಲ್ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ರ್ಯಾಲಿಗೆ ಎರಡು ಗಂಟೆಗಳಲ್ಲಿ 9 ಲಕ್ಷ ಜನರು ಸೇರಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ನಾವು ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳುತ್ತೇವೆ. ಕಾರ್ಯಕರ್ತರ ನಿರ್ಧಾರವನ್ನು ಚರಣಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರೂ ಒಪ್ಪಿಕೊಳ್ಳಬೇಕು. ಒಬ್ಬರಿಗೊಬ್ಬರು ಬೆಂಬಲ ನೀಡಬೇಕು. ಇಬ್ಬರು ವ್ಯಕ್ತಿಗಳನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಸಾಧ್ಯವಿಲ್ಲ, ಒಬ್ಬರು ಮಾತ್ರ ಆಗಬಹುದು ಎಂದು ರಾಹುಲ್ ಸೂಚ್ಯವಾಗಿ ಹೇಳಿದರು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಇಬ್ಬರು ಒಪ್ಪಿಗೆ ನೀಡುವುದಾಗಿ ಹೇಳಿದ್ದಾರೆ. ಒಬ್ಬರು ಮುನ್ನಡೆಸಿದರೆ, ಮತ್ತೊಬ್ಬರು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇಬ್ಬರಲ್ಲಿಯೂ ಕಾಂಗ್ರೆಸ್ ಚಿಂತನೆ ಇದೆ ಎಂದು ಇದೇ ಸಂದರ್ಭದಲ್ಲಿ ರಾಹುಲ್ ತಿಳಿಸಿದರು. ನಂತರ ಟ್ವೀಟ್ ಮಾಡಿ 'ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಘೋಷಿಸಲಾಗುವುದು' ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಭಾರತೀಯ ಚುನಾವಣಾ ಆಯೋಗವು ಭೌತಿಕ ರ್ಯಾಲಿಗಳ ಮೇಲೆ ನಿಷೇಧ ಹೇರಿದ ನಂತರ ರಾಹುಲ್ ಗಾಂಧಿಯವರ ಮೊದಲ ಭೇಟಿ ಇದಾಗಿತ್ತು.
ಜನವರಿ 31ರವರೆಗೆ ಬಹಿರಂಗ ಸಭೆ, ಸಮಾರಂಭ, ಸಮಾವೇಶಗಳನ್ನು ಆಯೋಜನೆ ಮಾಡುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ವಿಧಿಸಿರುವುದರಿಂದ ರಾಜಕೀಯ ಪಕ್ಷಗಳು ಈಗ ಜನರನ್ನು ತಲುಪಲು ವಿಭಿನ್ನ ಮಾರ್ಗಗಳನ್ನು ಹುಡುಕಬೇಕಾಗಿದೆ. ಹೀಗಾಗಿ ಗುರುವಾರ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಎಲ್ಲಾ 117 ಅಭ್ಯರ್ಥಿಗಳು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಒಟ್ಟಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ರಾಹುಲ್ ಗಾಂಧಿ ಅವರು ಜಲಂಧರ್ನ ಮಿಥಾಪುರದಲ್ಲಿ "ನವಿ ಸೋಚ್ ನಯಾ ಪಂಜಾಬ್' ಎಂಬ ಹೆಸರಿನ ವರ್ಚ್ಯುವಲ್ ರ್ಯಾಲಿ ಉದ್ದೇಶಿಸಿ ಭಾಷಣ ಮಾಡುತ್ತಾ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯ ವಿಷಯವನ್ನು ಪ್ರಸ್ತಾಪಿಸಿದರು.
ಮುಖ್ಯಮಂತ್ರಿ ಅಭ್ಯರ್ಥಿ ಬೇಕು ಎಂಬ ನಿಮ್ಮ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುತ್ತೇವೆ. ಸಾಮಾನ್ಯವಾಗಿ ಪಕ್ಷ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವುದಿಲ್ಲ ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಅಗತ್ಯವಿದ್ದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ.
ಕಾಂಗ್ರೆಸ್ ಕಾರ್ಯಕರ್ತರನ್ನು ಈ ವಿಚಾರದಲ್ಲಿ ಸಂಪರ್ಕಿಸಲಿದ್ದು ಅವರೇ ಇದನ್ನು ನಿರ್ಧರಿಸುತ್ತಾರೆ. ," ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮುಂದಿನ ತಿಂಗಳು ಪಂಜಾಬ್ ನಲ್ಲಿ ನಡೆಯುಲಿರುವ ಚುನಾವಣೆಗೆ ಪಕ್ಷದ ಪ್ರಚಾರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಜಲಂಧರ್ ಗೆ ತೆರಳಿರುವ ರಾಹುಲ್ ಗಾಂಧಿ ಇಡೀ ದಿನ ಪಂಜಾಬ್ ನಲ್ಲಿಯೇ ಬೀಡುಬಿಟ್ಟಿದ್ದರು.
ಪಂಜಾಬ್ ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಇದಕ್ಕೂ ಮುನ್ನ ಫೆಬ್ರವರಿ 14 ರಂದು ನಡೆಯಲಿರುವ ಚುನಾವಣೆಯ ಬಳಿಕವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿತ್ತು.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಇಬ್ಬರೂ ವೇದಿಕೆಯಲ್ಲಿದ್ದ ಸಮಯದಲ್ಲಿಯೇ ರಾಹುಲ್ ಗಾಂಧಿ ಈ ಮಾತನ್ನು ಹೇಳಿದ್ದಾರೆ. ಪ್ರಸ್ತುತ ಪಂಜಾಬ್ ನಲ್ಲಿ ಪ್ರತಿ ದಿನ ಚರಂಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಪರಸ್ಪರ ಟೀಕಾಪ್ರಹಾರಗಳನ್ನು ನಡೆಸುತ್ತಿರುವುದು ರಾಜ್ಯದಲ್ಲಿ ಪಂಜಾಬ್ ಪಕ್ಷಕ್ಕೆ ಮುಜುಗರವನ್ನು ತಂದಿದೆ.
ರಾಜ್ಯದಲ್ಲಿ ಪಕ್ಷವನ್ನು ಇಬ್ಬರು ಮುನ್ನಡೆಸಲು ಸಾಧ್ಯವಿಲ್ಲ. ಒಬ್ಬರು ಮಾತ್ರವೇ ಮುನ್ನಡೆಸಬಹುದು. ಒಬ್ಬ ವ್ಯಕ್ತಿ ಮುನ್ನಡೆಸಿದರೆ, ಇನ್ನೊಬ್ಬ ವ್ಯಕ್ತಿ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಬೇಕು. ಯಾಕೆಂದರೆ, ಇಬ್ಬರ ಹೃದಯದಲ್ಲೂ ಕಾಂಗ್ರೆಸ್ ಇರಬೇಕು ಎಂದು ರಾಹುಲ್ ಗಾಂಧಿ ಹೇಳಿದರು.
ನೂರಾರು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ರಕ್ತವನ್ನು ಇಲ್ಲಿ ಚೆಲ್ಲಿದ್ದಾರೆ. ಏನೇ ಆಗಲಿ ರಾಜ್ಯದಲ್ಲಿ ಶಾಂತಿ ಕದಡಲು ಯಾವ ಅವಕಾಶವನ್ನೂ ನಾವು ನೀಡುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ನಮಗೆ ತಿಳಿಸಿದೆ. ನಿಮ್ಮೆಲ್ಲರಿಂದ ಹಾಗೂ ಮನಮೋಹನ್ ಸಿಂಗ್ ಅವರಿಂದ ಈ ವಿಚಾರದಲ್ಲಿ ಸಾಕಷ್ಟು ಕಲಿತಿದ್ದೇನೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಮಾತನಾಡುವ ಮುನ್ನ ಪಂಜಾಬ್ ಕಾಂಗ್ರೆಸ್ ನ ಇಬ್ಬರೂ ನಾಯಕರು, ರಾಜ್ಯದಲ್ಲಿ ನಾವು ಹುದ್ದೆಗಾಗಿ ಹಾತೊರೆಯುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಪಕ್ಷವನ್ನು ಧಿಕ್ಕರಿಸಿ ಹೋಗುವುದಿಲ್ಲ ಎಂದು ಘೋಷಿಸಿದರು. ಏನೇ ಆಗಲಿ ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ ಎಂದು ನವಜೋತ್ ಸಿಧು ಭರವಸೆ ನೀಡಿದ್ದಾರೆ.












Click it and Unblock the Notifications