Year Ender 2023: ಈ ವರ್ಷ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಡೆದ ಸಿಹಿ, ಕಹಿ ಘಟನೆಗಳಿವು?
ಚಾಮರಾಜನಗರ, ಡಿಸೆಂಬರ್, 30: 2023ರ ವರ್ಷ ಮುಗಿದು ಇನ್ನು ಕೆಲವೇ ದಿನಗಳಲ್ಲಿ 2024ಕ್ಕೆ ಕಾಲಿಡುತ್ತಿದ್ದು, 2023ರ ವರ್ಷ ಗಡಿಜಿಲ್ಲೆಯಲ್ಲಿ ಹಲವು ಪ್ರಮುಖ ರಾಜಕೀಯ ಪಲ್ಲಟಗಳಾಗಿವೆ. ಪ್ರಧಾನಿ ಭೇಟಿ ಸೇರಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ಮೊದಲ ಸ್ಥಾನ ಪಡೆಯುವ ಮೂಲಕ ಹಲವು ಮಹತ್ವದ ಸಂಗತಿಗಳು ನಡೆದಿವೆ.
ಪಿಎಂ ಮೋದಿ ಸಫಾರಿ: ಭಾರತದ ಜನಪ್ರಿಯ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನರೇಂದ್ರ ಮೋದಿ ಸಫಾರಿ ನಡೆಸುವ ಮೂಲಕ ಬಂಡೀಪುರಕ್ಕೆ ಹೊಸ ಮೆರುಗನ್ನು ತಂದುಕೊಟ್ಟರು. ಏಪ್ರಿಲ್ 9ರಂದು ವಿಶೇಷ ಹೆಲಿಕಾಪ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್ ಅನ್ನು ಧರಿಸುವ ಮೂಲಕ ಮಿಂಚಿದ್ದರು. ಒಂದೂವರೆ ತಾಸು ಬಂಡೀಪುರ ಕಾಡಲ್ಲಿ ಸಫಾರಿ ನಡೆಸಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿದ್ದರು.

ಕಾಂಗ್ರೆಸ್ ಜಯಭೇರಿ: ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ಎಂಬ 4 ವಿಧಾನಸಭಾ ಕ್ಷೇತ್ರಗಳಿದ್ದು, 4ರಲ್ಲಿ ಮೂರು ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದರೇ, ಹನೂರಿನಲ್ಲಿ ಜೆಡಿಎಸ್ನ ಎಂ.ಆರ್.ಮಂಜುನಾಥ್ ಗೆದ್ದು ನಗು ಬೀರಿದರು.
ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗಣೇಶ್ ಪ್ರಸಾದ್, ಹನೂರಿನಲ್ಲಿ ಮಂಜುನಾಥ್ ಮೊದಲ ಬಾರಿ ಶಾಸಕರಾದರೇ, ಚಾಮರಾಜನಗರದಲ್ಲಿ ಬಿಜೆಪಿ ಪ್ರಬಲ ನಾಯಕ ಸೋಮಣ್ಣ ಅವರ ವಿರುದ್ಧ ಸಿ.ಪುಟ್ಟರಂಗಶೆಟ್ಟಿ ಸತತ 4ನೇ ಬಾರಿ ವಿಜಯಮಾಲೆ ಧರಿಸಿದರು. ಕೊಳ್ಳೇಗಾಲ ಕ್ಷೇತ್ರದಿಂದ ಎ.ಆರ್.ಕೃಷ್ಣಮೂರ್ತಿ 19 ವರ್ಷದ ಬಳಿಕ ಶಾಸಕರಾದರು.
ಅಮಿತ್ ಷಾ, ರಾಗಾ, ನಡ್ಡಾ, ಪ್ರಿಯಾಂಕಾ ಪ್ರಚಾರದ ರಂಗು: 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ರಂಗು ಜೋರಾಗಿತ್ತು. ಚುನಾವಣೆ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಮಲೆ ಮಹದೇಶ್ವರ ಬೆಟ್ಟದಿಂದ ಚಾಲನೆ ಕೊಟ್ಟರು. ಇನ್ನು, ಚುನಾವಣಾ ಪ್ರಚಾರದಲ್ಲಿ ಅಮಿತ್ ಷಾ, ನಟ ಸುದೀಪ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜಿಲ್ಲೆಗೆ ಭೇಟಿ ಕೊಟ್ಟು ಅಬ್ಬರದ ಪ್ರಚಾರ ನಡೆಸಿದ್ದರು.
ಮಾಜಿ ಸಂಸದ ಧ್ರುವನಾರಾಯಣ ನಿಧನ: ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ, ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದತ್ತ ಹೊರಳಿದ್ದ ಆರ್.ಧ್ರುವನಾರಾಯಣ ಅಕಾಲಿಕವಾಗಿ ನಿಧನ ಹೊಂದಿದರು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದ ಹೊತ್ತಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಓರ್ವ ಉತ್ತಮ ಸಂಘಟನಾ ಚತುರನನ್ನು ಕಳೆದುಕೊಂಡಿತು. ಸದ್ಯ, ಧ್ರುವ ಪುತ್ರ ದರ್ಶನ್ ಜನರ ಒತ್ತಾಯಕ್ಕೆ ಮಣಿದು ನಂಜನಗೂಡಿನಲ್ಲಿ ಸ್ಪರ್ಧೆ ಮಾಡಿ ಶಾಸಕರಾಗಿದ್ದಾರೆ.
ಚಿತ್ರನಟ ಗಣೇಶ್ ಕಟ್ಟಡ ವಿವಾದ: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡಕ್ಕೆ ಅಡಿಪಾಯ ಹಾಕಿದ್ದಾರೆ ಎಂಬ ವಿವಾದಕ್ಕೆ ಚಿತ್ರನಟ ಗಣೇಶ್ ಗುರಿಯಾದರು. ಪರಿಸರವಾದಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ನಟ ಗಣೇಶ್ ಅವರಿಗೆ ಬಂಡೀಪುರ ಸೂಕ್ಷ್ಮ ವಲಯ ಪರಿಸರ ಸಮಿತಿ ಸದಸ್ಯ ಕಾರ್ಯದರ್ಶಿ ನೊಟೀಸ್ ನೀಡಿದ್ದರು. ಬಳಿಕ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹುಲಿ-ಆನೆಗಳ ಬೀಡಾದ ಗಡಿಜಿಲ್ಲೆ: 2023ರಲ್ಲಿ ಹುಲಿ ಹಾಗೂ ಆನೆ ಗಣತಿ ವರದಿ ಬಿಡುಗಡೆಯಾಯಿತು. ಅತ್ಯಧಿಕ ಸಂಖ್ಯೆಯಲ್ಲಿ ಕರ್ನಾಟಕದಲ್ಲಿ ಹುಲಿ ಮತ್ತು ಆನೆಗಳ ಸಂತತಿ ಇರುವುದು ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಂಬುದಕ್ಕೆ ಪಾತ್ರವಾಯಿತು.
ಕಾವೇರಿ ಕಿಚ್ಚು- ಬರಪಟ್ಟಿಗೆ ಗಡಿಜಿಲ್ಲೆ: ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದನ್ನು ಖಂಡಿಸಿ ರೈತ ಸಂಘ, ಕನ್ನಡಪರ ಹೋರಾಟಗಾರರು ಬೀದಿಗಿಳಿದು ಆಕ್ರೋಶ ಹೊರಹಾಕಿದರು. ಕಾವೇರಿ ಕಿಚ್ಚು ಹೊರಹಾಕಲು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಚಾಮರಾಜನಗರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಕನ್ನಡಪರ ಹೋರಾಟಗಾರರು ನಿರಂತರವಾಗಿ 117 ದಿನ ಪ್ರತಿಭಟನೆ ನಡೆಸಿ ಅಕ್ರೋಶ ಹೊರಹಾಕುತ್ತಿದ್ದಾರೆ.
ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬರದ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳನ್ನು ಸರ್ಕಾರ ಬರಪಟ್ಟಿಗೆ ಸೇರಿಸಿದೆ. ಬಿಜೆಪಿಯೂ ಕೂಡ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ಕೊಟ್ಟು ಬರ ಅಧ್ಯಯನ ನಡೆಸಿತು. ಹೀಗೆ ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ ಹಲವು ಸಿಹಿ- ಕೆಲವು ಕಹಿ ಘಟನೆಗಳಿಗೆ ಸಾಕ್ಷಿಯಾಯಿತು.












Click it and Unblock the Notifications