ಎರಡು ತಿಂಗಳ ನಂತರ ಬೆಳಕಿಗೆ ಬಂತು ಚಾಮರಾಜನಗರ ಮಹಿಳೆ ಕೊಲೆ
ಚಾಮರಾಜನಗರ, ಜೂನ್ 15: ಮಹಿಳೆಯೊಬ್ಬರನ್ನು ಅವರ ಮನೆಯವರೇ ಬಾವಿಗೆ ತಳ್ಳಿ ಕೊಲೆಗೈದಿರುವ ಸಂಗತಿ ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಅಜ್ರಾ ಭಾನು (34) ಎಂದು ಗುರುತಿಸಲಾಗಿದೆ.
ಅಜ್ರಾ ಭಾನು ಅವರನ್ನು ನಾಗವಳ್ಳಿ ಗ್ರಾಮದ ಅಬ್ದುಲ್ ನಜೀಬ್ (37) ಎಂಬುವವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ನಂತರ ಅನ್ಯೋನ್ಯವಾಗಿಯೇ ಇದ್ದ ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಮುಖ್ಯ ಆರೋಪಿ ಅಬ್ದುಲ್ ನಜೀಬ್ ನ ನಾಲ್ವರು ಸಹೋದರರು ಮತ್ತು ಸಹೋದರಿಯ ಕುಟುಂಬದವರು ಅಜ್ರಾ ಭಾನು ಮಾಟ ಮಾಡಿಸುತ್ತಾಳೆ. ಅದರಿಂದ ನಮ್ಮ ಕುಟುಂಬಗಳಲ್ಲಿ ಯಾರಿಗಾದರೂ ಕಾಯಿಲೆ ಬರುತ್ತಿರುತ್ತದೆ ಮತ್ತು ನಾವು ಆರ್ಥಿಕವಾಗಿ ಉದ್ಧಾರ ಆಗಲು ಆಗುತ್ತಿಲ್ಲ ಎಂದು ಆಗಾಗ ಆರೋಪಿಸುತ್ತಿದ್ದರು.

ಗಂಡ ನಜೀಬ್ ಆತನ ನಾಲ್ವರು ಸಹೋದರರು ಮತ್ತು ಓರ್ವ ಸಹೋದರಿ ಪೂರ್ವ ಯೋಜನೆ ಮಾಡಿಕೊಂಡು ನಾಗವಳ್ಳಿ ಗ್ರಾಮದ ತೋಟದ ಮನೆಯಲ್ಲಿ ಸೇರಿಕೊಂಡು ಏಪ್ರಿಲ್ 20ರಂದು ಅಜ್ರಾ ಭಾನುವಿನ ಉಸಿರು ಕಟ್ಟಿಸಿ ಮಕ್ಕಳ ಎದುರಿಗೇ ಕೊಲೆ ಮಾಡಿದರು. ನಂತರ ದೇಹವನ್ನು ಅಲ್ಲಿಯೇ ಇದ್ದ ಕೆರೆಗೆ ಹಾಕಿ ಕಾಲು ಜಾರಿ ಬಿದ್ದಳೆಂದು ಕಥೆ ಕಟ್ಟಿದ್ದರು. ನಂತರ ಕಳೆದ ಮೇ 25 ರಂದು ಅಜ್ರಾ ಭಾನುವಿನ ಮಕ್ಕಳು ಅಜ್ಜನ ಮನೆ ಚಾಮರಾಜನಗರಕ್ಕೆ ತೆರಳಿದ್ದರು. ಆಗ ಪುಟ್ಟ ಮಕ್ಕಳನ್ನು ಅಜ್ಜನ ಮನೆಯವರು ಪ್ರಶ್ನಿಸಿದಾಗ, ಮಕ್ಕಳು ನಾಲ್ವರೂ ಸೇರಿ ಆಕೆಯ ಮೇಲೆ ಕೂತು ಉಸಿರುಕಟ್ಟಿಸಿ ಕೊಂದಿದ್ದನ್ನು ಬಾಯಿ ಬಿಟ್ಟಿವೆ.

ಕೂಡಲೇ ಚಾಮರಾಜನರ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನಂತರ ಮೃತ ದೇಹವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಪರೀಕ್ಷೆ ಮಾಡಲಾಯಿತು. ಪರೀಕ್ಷೆಯಲ್ಲಿ ಮೃತಳ ಹಲ್ಲೊಂದು ಮುರಿದಿರುವುದು ಪತ್ತೆ ಆಗಿದೆ. ಮೇಲ್ನೋಟಕ್ಕೆ ಕೊಲೆ ಎಂದು ಕಂಡು ಬಂದಿದ್ದು, ಕೂಡಲೇ ಮೃತಳ ಗಂಡ ನಜೀಬ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಒಟ್ಟು ಒಂಬತ್ತು ಆರೋಪಿಗಳಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಉಳಿದ ಎಂಟು ಮಂದಿ ನಾಪತ್ತೆ ಆಗಿದ್ದಾರೆ.












Click it and Unblock the Notifications