ಚಾಮರಾಜನಗರದಲ್ಲಿ ಕಾರು ಚಾಲಕನ ಎಡವಟ್ಟಿಗೆ ಅಮಾಯಕ ಜೀವ ಬಲಿ
ಚಾಮರಾಜನಗರ, ನವೆಂಬರ್.21: ಚಾಲಕನ ಎಡವಟ್ಟಿನಿಂದ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಾಲಹಳ್ಳಿ ಹುಂಡಿ ಗ್ರಾಮದ ಲಕ್ಷ್ಮಿ ಸಾವನ್ನಪ್ಪಿದರೆ, ಸಾಕಮ್ಮ ಹಾಗೂ ಅವರ ಮಗಳಾದ ದುಂಡಮ್ಮ, ಮತ್ತು ರಾಜಮ್ಮ, ಗಿರಿ ಎಂಬುವವರು ಗಾಯಗೊಂಡಿದ್ದಾರೆ.

ಘಟನೆಯ ವಿವರ
ಮನೆ ದೇವರ ಹಬ್ಬ ಮುಗಿಸಿ ಮನೆಯ ಪಡಸಾಲೆಯಲ್ಲಿ ಎಲೆ ಅಡಿಕೆ ಹಾಕಿಕೊಂಡು ಲಕ್ಷ್ಮಿ, ಸಾಕಮ್ಮ,ದುಂಡಮ್ಮ,ರಾಜಮ್ಮ ಮಾತನಾಡುತ್ತಾ ಕುಳಿತಿರುವಾಗ ಈ ದುರ್ಘಟನೆ ಸಂಭವಿಸಿದೆ. ಮನೆಯ ಸಮೀಪದಲ್ಲಿದ್ದ ಕಾರನ್ನ ಪಕ್ಕದ ಮನೆಯಲ್ಲಿದ್ದ ಯುವಕನೋರ್ವ ಬಂದು ಹಿಂತೆಗೆಯುವಾಗ ಆದ ಎಡವಟ್ಟಿನಿಂದ ಈ ಅವಘಡ ನಡೆದಿದೆ.

ಇನ್ನೇನು ಎರಡು ಮೂರು ದಿನದಲ್ಲಿ ವಿವಾಹವಾಗಬೇಕಿದ್ದ ಗಿರಿ ಎಂಬುವವರಿಗೆ ತಲೆಗೆ ಪೆಟ್ಟಾಗಿದೆ. ಗಾಯಗೊಂಡವರು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನ ಚಾಲಕನ ಅಜಾಗರೂಕತೆಯಿಂದ ಎಡವಟ್ಟಿನಿಂದ ಹಬ್ಬ ಮಾಡುತ್ತಿದ್ದವರ ಮನೆಯಲ್ಲೀಗ ತಿಥಿ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಈ ಸಂಬಂಧ ಪಟ್ಟಣ ಠಾಣಾ ಹಾಗೂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.












Click it and Unblock the Notifications