ಬಂಡೀಪುರಕ್ಕೆ ಬರಲಿದೆಯಾ ಸೇನಾ ಹೆಲಿಕ್ಯಾಪ್ಟರ್?
ಚಾಮರಾಜನಗರ,
ಮಾರ್ಚ್ 6: ಅದೇನಾದರೂ ಆಗಲಿ, ಈ ಬಾರಿ ಹೇಗಾದರೂ ಮಾಡಿ ಕಾಡ್ಗಿಚ್ಚನ್ನು ತಡೆಗಟ್ಟಿ ಅರಣ್ಯವನ್ನು ರಕ್ಷಿಸಲೇಬೇಕೆಂಬ ಪಣ ತೊಟ್ಟು ನಿಂತಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಅರಣ್ಯ ಇಲಾಖೆ ಅಧಿಕಾರಿಗಳು ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇದೀಗ ಕೊನೆಯದಾಗಿ ಸೇನಾ ಹೆಲಿಕಾಪ್ಟರ್ ಅನ್ನೂ ಬಳಸುವ ಸಾಧ್ಯತೆಯಿದೆ ಎನ್ನಲಾಗಿದೆ. id="toptextpromo"> id='are-slot-1' class='oiad oi-axt oiadv'>ಇಷ್ಟಕ್ಕೂ
ಅರಣ್ಯದಲ್ಲಿ ಕಾಡ್ಗಿಚ್ಚು ತಡೆಗೆ ಹೆಲಿಕಾಪ್ಟರ್ ಏಕೆ ಬೇಕು ಎಂಬ ಪ್ರಶ್ನೆ ಕೆಲವರನ್ನು ಕಾಡಬಹುದು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಈ ಕುರಿತು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ ಅವರು ಹೆಲಿಕಾಪ್ಟರ್ ಕೋರಿ ಪತ್ರ ಬರೆದಿದ್ದಾರೆ. ಅದರ ಹಿಂದೆ ಬಲವಾದ ಉದ್ದೇಶವೂ ಅಡಗಿದ್ದು ಅದು ಅರಣ್ಯ ರಕ್ಷಣೆಯ ಕಾಳಜಿಯಾಗಿದೆ. id='are-slot-2' class='oiad oi-axt oiadv'>
ಕಳೆದ ವರ್ಷ ಹೆಲಿಕಾಪ್ಟರ್ ಕರೆಸಲಾಗಿತ್ತು
ಯಾವುದೋ ಒಂದು ಭಾಗದಲ್ಲಿ ಕಾಡ್ಗಿಚ್ಚು ಸಂಭವಿಸಿದರೆ ಆ ತಕ್ಷಣಕ್ಕೆ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕಳೆದ ವರ್ಷ ಅಗ್ನಿ ಅನಾಹುತ ಸಂಭವಿಸಿ ಸಾವಿರಾರು ಎಕರೆ ಅರಣ್ಯ ಭಸ್ಮವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹಗಲು ರಾತ್ರಿ ಎನ್ನದೆ ಶ್ರಮಿಸಿದರೂ ಬೆಂಕಿ ತಹಬದಿಗೆ ಬಂದಿರಲಿಲ್ಲ. ಈ ವೇಳೆ ಸೇನೆಯ ಎರಡು ಹೆಲಿಕಾಪ್ಟರ್ ಗಳನ್ನು ಕರೆಸಿ ಅವುಗಳ ಮೂಲಕ ನೀರನ್ನು ಹಾಯಿಸಿ ಬೆಂಕಿಯನ್ನು ನಂದಿಸಲಾಯಿತು.

ಹೆಲಿಕಾಪ್ಟರ್ ನೊಂದಿಗೆ ಸನ್ನದ್ಧವಾಗಿರಲು ಚಿಂತನೆ
ಕಾಡ್ಗಿಚ್ಚು ಸಂಭವಿಸಿದ ಬಳಿಕ ಹೆಲಿಕಾಪ್ಟರ್ ತರಿಸಿ ಬೆಂಕಿಯನ್ನು ನಂದಿಸುವ ವೇಳೆಗೆ ಸಾವಿರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹರಡಿ ಅರಣ್ಯ ಸೇರಿದಂತೆ ಜೀವಚರಗಳು ಭಸ್ಮವಾಗಿ ಹೋಗಿಬಿಡುತ್ತವೆ. ಹೀಗಾಗಿ ಮೊದಲೇ ಹೆಲಿಕಾಪ್ಟರ್ ಅನ್ನು ಸನ್ನದ್ಧವಾಗಿಟ್ಟುಕೊಳ್ಳುವುದು ಒಳ್ಳೆಯದು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಚಿಂತನೆಯಾಗಿದೆ. ಆದರೆ ಇದಕ್ಕೆ ಸ್ಪಂದನೆ ಸಿಗುತ್ತಾ ಎಂಬುದೇ ಪ್ರಶ್ನೆಯಾಗಿದೆ.
ಇತ್ತೀಚೆಗೆ ರಾಜ್ಯದ ಹಿಂದಿನ ಅರಣ್ಯ ಸಚಿವರಾಗಿದ್ದ ಸಿ.ಸಿ.ಪಾಟೀಲ್ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದಾಗ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ ಸೇನಾ ಹೆಲಿಕಾಪ್ಟರ್ ನೀಡುವಂತೆ ಮನವಿ ಮಾಡಿದ್ದರು.

ಸೇನಾ ಹೆಲಿಕಾಪ್ಟರ್ ಸೇವೆಗೆ ಸಿದ್ಧ ಎಂಬ ಸಲಹೆ
ಈ ಮನವಿಗೆ ಸ್ಪಂದಿಸಿದ ಸಚಿವರು, ಕೂಡಲೇ ಕೇಂದ್ರದ ರಕ್ಷಣಾ ಸಚಿವರ ಜೊತೆಗೆ ಮಾತನಾಡಿ ಹೆಲಿಕಾಪ್ಟರ್ ಒದಗಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಬದಲಾದ ಕಾಲದಲ್ಲಿ ಈಗಿನ ಅರಣ್ಯ ಸಚಿವರಾದ ಆನಂದ್ ಸಿಂಗ್ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದು ಕೂಡ ಮುಖ್ಯವಾಗಿದೆ.
ಇದೆಲ್ಲದರ ನಡುವೆ ಇದೀಗ ಭಾರತೀಯ ವಾಯುಪಡೆ ವಿಭಾಗದ ಮಾಷಲ್ ಟಿ.ಡಿ ಜೋಸೆಫ್ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಬಾಸ್ಕರ್ ಅವರಿಗೆ ಪತ್ರ ಬರೆದು ಪ್ರಸ್ತುತ ಬೇಸಿಗೆ ಪ್ರಾರಂಭವಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ಬಂಡೀಪುರ ಅರಣ್ಯದಲ್ಲಿ ಸಂಭವಿಸಬಹುದಾದ ಬೆಂಕಿ ಅವಘಡಗಳನ್ನು ತಪ್ಪಿಸಲು ಸೇನಾ ಹೆಲಿಕ್ಯಾಪ್ಟರ್ ಸೇವೆ ಒದಗಿಸಲು ಸಿದ್ಧವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂಬ ಸಲಹೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಅಭಯಾರಣ್ಯಗಳಿಗೆ ಅಗತ್ಯವಿದೆ ಹೆಲಿಕಾಪ್ಟರ್
ಅರಣ್ಯ ಸಂರಕ್ಷಣೆ ಮೂಲಕ ಪರಿಸರದ ಕಾಳಜಿ ಪ್ರತಿಯೊಬ್ಬ ಭಾರತೀಯ ನಾಗರಿಕನ ಮತ್ತು ಎಲ್ಲ ಇಲಾಖೆಗಳ ಕರ್ತವ್ಯ. ಆ ನಿಟ್ಟಿನಲ್ಲಿ ವಾಯುಪಡೆಯ ಸೇವೆಯೂ ಶ್ಲಾಘನೀಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಇತ್ತ ಗಮನಹರಿಸಿ ಬೇಸಿಗೆ ಸಮಯದಲ್ಲಿ ಬಂಡೀಪುರ ಮಾತ್ರವಲ್ಲದೆ, ರಾಜ್ಯದ ಇತರೆ ಅಭಯಾರಣ್ಯಗಳತ್ತ ನಿಗಾವಹಿಸಿ ಹೆಲಿಕಾಪ್ಟರ್ ಗಳ ಸೇವೆಯನ್ನು ಸದುಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.
ಇನ್ನೆರಡು ತಿಂಗಳಕಾಲ ಬೇಸಿಗೆಯ ಬಿಸಿಲಿಗೆ ಕಾಡು ಒಣಗಿ ಬೋರಲಾಗುವುದರಿಂದ ಚಿಕ್ಕ ಕಿಡಿ ತಾಗಿದರೂ ಹೊತ್ತಿ ಉರಿಯುವ ಸನ್ನಿವೇಶಗಳೇ ಜಾಸ್ತಿ. ಹೀಗಿರುವಾಗ ರಾಜ್ಯಕ್ಕೆ ಅರಣ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಅಗತ್ಯವಿರುವುದಂತೂ ಸತ್ಯ. ಸರ್ಕಾರ ಈ ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications