Get Updates
Get notified of breaking news, exclusive insights, and must-see stories!

ಬಂಡೀಪುರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡ್ಗಿಚ್ಚಿನ ಹಿಂದಿದೆಯಾ ದುಷ್ಟ ಜಾಲ?

ಚಾಮರಾಜನಗರ, ಏಪ್ರಿಲ್ 23: ಪ್ರತಿ ವರ್ಷವೂ ಬೇಸಿಗೆ ಬಂತೆಂದರೆ ಬಂಡೀಪುರದಲ್ಲಿ ಅರಣ್ಯ ಸಿಬ್ಬಂದಿಗೆ ಆತಂಕ ಶುರುವಾಗಿ ಬಿಡುತ್ತದೆ. ಎಷ್ಟೇ ನಿಗಾ ವಹಿಸಿದರೂ ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಪ್ಪಿಸಲಾಗುವುದಿಲ್ಲವಲ್ಲ ಎಂಬ ಬೇಸರ ಕಾಡುತ್ತದೆ.

ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅರಣ್ಯಕ್ಕೆ ಹೇಗೆ ಬೆಂಕಿ ಬೀಳುತ್ತದೆ ಎಂಬ ಪ್ರಶ್ನೆಗೆ ಉತ್ತರವೂ ಸಿಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ನಡೆದ ಕೆಲವು ಅಗ್ನಿಅನಾಹುತದ ಪ್ರಕರಣದ ಬೆನ್ನು ಹತ್ತಿ ಹೋದ ಅಧಿಕಾರಿಗಳಿಗೂ ಉತ್ತರಗಳು ಸಿಗಲಾರಂಭಿಸಿವೆ. ಕಾಡ್ಗಿಚ್ಚಿನ ಹಿಂದೆ ಬೇಟೆಗಾರರ ಕೈವಾಡ ಇರುವುದು ಪತ್ತೆಯಾಗಿದೆ. ಒಂದು ಕಡೆಯಲ್ಲಿ ಬೆಂಕಿ ಹಚ್ಚಿ ಅರಣ್ಯ ಸಿಬ್ಬಂದಿಯನ್ನು ಅತ್ತ ಕಡೆಗೆ ಗಮನ ಸೆಳೆಯುವಂತೆ ಮಾಡಿ, ಇನ್ನೊಂದು ಕಡೆ ಬೇಟೆ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆ ನಡೆಸುವುದು ದುಷ್ಟರ ಕರಾಮತ್ತಾಗಿದೆ.

 ಬಂಡೀಪುರದ ಬೇಟೆಗಾರರು ಯಾರು ಗೊತ್ತಾ?

ಬಂಡೀಪುರದ ಬೇಟೆಗಾರರು ಯಾರು ಗೊತ್ತಾ?

ಇಷ್ಟಕ್ಕೂ ಬಂಡೀಪುರದಂತಹ ಕಾಡಿನಲ್ಲಿ ಬೇಟೆ ಆಡುವವರು ಯಾರು ಎಂಬುದನ್ನು ಹುಡುಕುತ್ತಾ ಹೋದರೆ ಅರಣ್ಯದ ಬಗ್ಗೆ ತಿಳಿದುಕೊಂಡವರೇ ದುಷ್ಕೃತ್ಯವನ್ನು ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಬಂಡೀಪುರದ ಅರಣ್ಯಗಳ ಬಗ್ಗೆ ಮಾಹಿತಿ ತಿಳಿದುಕೊಂಡವರೇ ಬೇಟೆಗೆ ಮುಂದಾಗುತ್ತಿದ್ದು, ಅವರಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶದಲ್ಲಿ ಯಾವ ಪ್ರಾಣಿಗಳು, ಅದರಲ್ಲಿಯೂ ಜಿಂಕೆಗಳು ಹೆಚ್ಚಾಗಿ ಎಲ್ಲಿರುತ್ತವೆ ಮತ್ತು ಅರಣ್ಯ ಸಿಬ್ಬಂದಿ ಯಾವಾಗ ಯಾವ ಸಮಯದಲ್ಲಿ ಎಲ್ಲಿರುತ್ತಾರೆ ಎಂಬುದೆಲ್ಲವನ್ನು ಅರಿತುಕೊಂಡೇ ಬೇಟೆಯಾಡುತ್ತಿದ್ದಾರೆ.

 ಅರಣ್ಯದಲ್ಲಿ ಕೆಲಸ ಮಾಡಿದ್ದವರೇ ಬೇಟೆಗಾರರು!

ಅರಣ್ಯದಲ್ಲಿ ಕೆಲಸ ಮಾಡಿದ್ದವರೇ ಬೇಟೆಗಾರರು!

ಇತ್ತೀಚೆಗೆ ಬಂಡೀಪುರ ರಾಷ್ಟ್ರೀಯ ಹುಲಿ ಯೋಜನೆ ಸಂರಕ್ಷಿತಾ ಅರಣ್ಯ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಬೇಟೆಯಾಡುತ್ತಿದ್ದ ಏಳು ಮಂದಿ ಬೇಟೆಗಾರರನ್ನು ಬಂಧಿಸಿ ಅವರಿಂದ ಸುಮಾರು ಐವತ್ತು ಕೆ.ಜಿ.ಯಷ್ಟು ಜಿಂಕೆ ಮಾಂಸ ಮತ್ತು ಬೇಟೆಗೆ ಬಳಸಿದ್ದ ಹತ್ಯಾರು, ನಾಡಬಂದೂಕನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಬೇಟೆಗಾರರ ಪೈಕಿ ಕೆಲವರು ಹಿಂದೆ ಬಂಡೀಪುರ ಅರಣ್ಯದಲ್ಲಿ ಬೆಂಕಿ ವಾಚರ್ ಗಳಾಗಿ ಆಗಿ ಕೆಲಸ ಮಾಡಿದವರಾಗಿದ್ದರು. ಅರಣ್ಯ ಇಲಾಖೆ ಇವರನ್ನು ಅರಣ್ಯಕ್ಕೆ ಬೆಂಕಿ ಬೀಳದಂತೆ ತಡೆಯುವ ಸಲುವಾಗಿ ಅರಣ್ಯ ಕಾವಲಿಗೆ ನೇಮಿಸಿಕೊಂಡಿತ್ತು. ಹೀಗಾಗಿ ಅವರಿಗೆ ಅರಣ್ಯದ ಬಗ್ಗೆ ಒಂದಷ್ಟು ಮಾಹಿತಿ ಗೊತ್ತಿದ್ದರಿಂದ ಜಿಂಕೆಗಳನ್ನು ಬೇಟೆಯಾಡುತ್ತಿದ್ದರು. ಒಂದಷ್ಟು ಮಾಂಸವನ್ನು ತಾವಿಟ್ಟುಕೊಂಡು ಉಳಿದ ಮಾಂಸವನ್ನು ಕೆ.ಜಿ.ಯೊಂದಕ್ಕೆ ಇನ್ನೂರ ಐವತ್ತು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಇವರಿಗೆ ಇದೊಂದು ದಂಧೆಯಾಗಿತ್ತು. ಅರಣ್ಯ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ಏಳು ಬೇಟೆಗಾರರ ಪೈಕಿ ಆರು ಮಂದಿ ಈಗಾಗಲೇ ಬಂಡೀಪುರ ಅರಣ್ಯದಲ್ಲಿ ಬೆಂಕಿ ವಾಚರ್ ಗಳಾಗಿ ಕೆಲಸ ಮಾಡಿದವರಾಗಿದ್ದರು.

 ಬೆಂಕಿ ಹಚ್ಚುವುದಕ್ಕೆ ಪ್ರೇರೇಪಣೆ ಯಾರದ್ದು?

ಬೆಂಕಿ ಹಚ್ಚುವುದಕ್ಕೆ ಪ್ರೇರೇಪಣೆ ಯಾರದ್ದು?

ಇದನ್ನು ಗಮನಿಸಿದರೆ ಇಂಥವರನ್ನು ಇಟ್ಟುಕೊಂಡು ಅರಣ್ಯ ರಕ್ಷಣೆ ಸಾಧ್ಯವಾ ಎಂಬ ಪ್ರಶ್ನೆ ಮೂಡುತ್ತದೆ. ಬಹುಶಃ ಇವರ ಹಿಂದೆ ದೊಡ್ಡ ಜಾಲವೇ ಇರುವುದಂತು ಖಚಿತ. ಹಾಗಾದರೆ ಈ ಬೇಟೆಗಾರರಿಗೆ ಬೇಟೆಯಾಡಲು ಬಂದೂಕು ನೀಡುತ್ತಿರುವವರು ಯಾರು ಎಂಬುದನ್ನು ಕೂಡ ಪತ್ತೆ ಹಚ್ಚಬೇಕಿದೆ. ಬರೀ ಜಿಂಕೆಗಳ ಬೇಟೆ ಮಾತ್ರ ನಡೆಯುತ್ತಿದೆಯಾ ಅಥವಾ ಇನ್ನಿತರೆ ಪ್ರಾಣಿಗಳ ಮೇಲೆಯೂ ಇವರ ಕಣ್ಣು ಬಿದ್ದಿದೆಯಾ ಎಂಬುದು ಕೂಡ ಮುಖ್ಯವಾಗಿದೆ.

ಬಂಡೀಪುರ ಅಭಯಾರಣ್ಯ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಗಡಿಯನ್ನು ಹಂಚಿಕೊಂಡಿರುವ ಕಾರಣ ಕಾಣದ ಕೈಗಳು ಇದರ ಹಿಂದೆ ಕೆಲಸ ಮಾಡುತ್ತಿವೆಯಾ ಎಂಬ ಸಂಶಯ ಮೂಡುತ್ತದೆ. ಕೆಲವರಿಗೆ ಹಣದ ಆಮಿಷವೊಡ್ಡಿ ಅರಣ್ಯಕ್ಕೆ ಬೆಂಕಿ ಹಚ್ಚುವ ಕೆಲಸಕ್ಕೆ ಪ್ರೇರೇಪಿಸುತ್ತಿದ್ದರಾ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕಾರಣ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬೆಂಕಿ ಹಾಕಿದ ಆರೋಪದಡಿ ಸಿಕ್ಕಿ ಬಿದ್ದ ವ್ಯಕ್ತಿಗೆ 73 ವರ್ಷವಾಗಿದೆ. ಈತ ಉದ್ದೇಶ ಪೂರಕವಾಗಿಯೇ ಅರಣ್ಯಕ್ಕೆ ಬೆಂಕಿ ಹಾಕಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಹಾಗಿದ್ದರೆ ಈತನ ಹಿಂದಿನ ಉದ್ದೇಶವೇನು? ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಅರಿಯಬೇಕಾಗಿದೆ.
 ದುಷ್ಟ ಜಾಲವನ್ನು ಸದೆಬಡಿಯಬೇಕಿದೆ

ದುಷ್ಟ ಜಾಲವನ್ನು ಸದೆಬಡಿಯಬೇಕಿದೆ

ಬಂಡೀಪುರ ಅರಣ್ಯದಲ್ಲಿ ಬೇಟೆಯಾಡುವವರ ಪೈಕಿ ಹೆಚ್ಚಿನವರು ಅರಣ್ಯ ಇಲಾಖೆಯಲ್ಲಿ ಹಂಗಾಮಿ ನೌಕರರಾಗಿದ್ದವರಾಗಿದ್ದು, ಅವರಿಗೆ ಅರಣ್ಯದ ಬಗ್ಗೆ ಅರಿವು ಇರುವುದರಿಂದಲೇ ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಕೆಲವೊಮ್ಮೆ ಸಿಕ್ಕಿಬಿದ್ದಾಗ ಮಾತ್ರ ಪ್ರಕರಣ ಬೆಳಕಿಗೆ ಬರುತ್ತದೆಯಷ್ಟೆ. ಸರ್ಕಾರ ಇತ್ತ ಗಮನಹರಿಸಿ ಬೇಟೆಗಾರರ ಹಿಂದಿನ ದುಷ್ಟ ಜಾಲವನ್ನು ಸದೆಬಡಿಯದೆ ಹೋದರೆ ಮೇಲಿಂದ ಮೇಲೆ ಬೇಟೆಗಾರರು ಹುಟ್ಟಿಕೊಳ್ಳುತಲೇ ಹೋಗುವುದರಲ್ಲಿ ಸಂಶಯವಿಲ್ಲ. ಅರಣ್ಯ ಮತ್ತು ವನ್ಯಪ್ರಾಣಿ ಉಳಿಯಬೇಕಾದರೆ ದುಷ್ಟ ಜಾಲವನ್ನು ಸದೆಬಡಿಯುವುದು ಅನಿವಾರ್ಯವಾಗಿದೆ.


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+